“ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂದು ವಚನವನ್ನು ರಚಿಸಿದ ದೇವರ ದಾಸಿಮಯ್ಯ ಮತ್ತು ದುಗ್ಗಳೆ ದಂಪತಿಗಳು ಬಸವಣ್ಣನವರಿಗಿಂತ ನೂರು ವರ್ಷ ಮುಂಚೆಯೇ ಜನಿಸಿರಬಹುದು ಎಂಬ ಉಲ್ಲೇಖಗಳು ದೊರೆತಿರುವ ಕಾರಣ ದೇವರ ದಾಸಿಮಯ್ಯನವರ ಕಾಲವನ್ನು ಕ್ರಿ. ಶ. 1140 ಇರಬಹುದು ಎಂದು ಊಹಿಸಲಾಗಿದೆ. 176 ವಚನಗಳನ್ನು ರಾಮನಾಥ ಎಂಬ ಅಂಕಿತನಾಮದಲ್ಲಿ ಬರೆದಿರುವ ದೇವರ ದಾಸಿಮಯ್ಯನವರು ಕಾಯಕ, ದಾಸೋಹ ಮತ್ತು ಗುರು,ಲಿಂಗ, ಜಂಗಮದಲ್ಲಿ ನಂಬಿಕೆಯನ್ನು ಇಟ್ಟವರು. ಆದ್ಯ ವಚನಕಾರ ಎಂದೇ ಹೆಸರಾದ ದೇವರ ದಾಸಿಮಯ್ಯನವರು ಅತ್ಯಂತ ಸೌಮ್ಯ ಆದರೆ ಅಷ್ಟೇ ವಾಸ್ತವವಾದಿಯಾಗಿದ್ದರು. ದೇವಾಂಗ ಜನಾಂಗದ ದೇವಲನ ಏಳನೇ ಅವತಾರವೇ ಜೇಡರ ದಾಸಿಮಯ್ಯ ಎಂದು ಕೂಡಾ ಹೇಳುತ್ತಾರೆ.
ದಾಸ, ದಾಸಯ್ಯ, ದಾಸಿದೇವ, ದೇವದಾಸ, ದೇವರ ದಾಸಿಮಯ್ಯ ದಾನಮಾರ್ಯ, ಜೇಡರ ದಾಸಿಮಯ್ಯ ಎಂಬ ಹತ್ತು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಏಕೈಕ ವ್ಯಕ್ತಿ ದಾಸಿಮಯ್ಯ ಇಂದಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ನೇಕಾರ ವೃತ್ತಿಯನ್ನು ಮಾಡುತ್ತಿದ್ದ ತಂದೆ ಕಾಮಯ್ಯ ಮತ್ತು ತಾಯಿ ಶಂಕರಿ ದಂಪತಿಗಳ ಪುಣ್ಯ ಗರ್ಭದಲ್ಲಿ ಜನಿಸಿದರು. ಮುದೇನೂರು ರಾಮತೀರ್ಥ, ಲಕ್ಷ್ಮಣತೀರ್ಥ, ಸಕ್ಕರೆ ತೀರ್ಥ, ಮರಳು ತೀರ್ಥ, ಪಾಂಡವ ತೀರ್ಥ, ಹಾಲು ತೀರ್ಥ ಮತ್ತು ಸಂಗಮ ತೀರ್ಥ ಎಂಬ ಒಟ್ಟು ಏಳು ತೀರ್ಥ ಸ್ಥಾನಗಳಿರುವ ಪವಿತ್ರ ಗ್ರಾಮವಾಗಿತ್ತು.
ಓದು ಬರಹಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ ದಾಸಿಮಯ್ಯನವರು ಶ್ರೀಶೈಲದ ಚಂದ್ರಗುಂಡ ಶಿವಾಚಾರ್ಯರ ಬಳಿ ಹನ್ನೆರಡು ವರ್ಷಗಳ ಕಾಲ ಅಧ್ಯಯನಗೈದರು. ಎಲ್ಲಾ ರೀತಿಯ ವಿದ್ಯೆಗಳನ್ನು ಕಲಿತ ನಂತರ ಮರಳಿ ತನ್ನೂರಿಗೆ ಹೋಗಿ ಕುಲದ ವೃತ್ತಿಯಾದ ನೇಕಾರಿಕೆಯನ್ನು ಕೈಗೊಳ್ಳಬೇಕೆಂದು ಆಶಿಸಿದ ದಾಸಿಮಯ್ಯ ಶ್ರೀಶೈಲದಿಂದ ಮರಳಿ ಬರುವಾಗ ಮಾರ್ಗ ಮಧ್ಯದಲ್ಲಿ ಗೌಡಗೇರಿ ಎಂಬ ಗ್ರಾಮದಲ್ಲಿ ತಂಗಿದರು. ಆ ಗ್ರಾಮದ ಗೌಡಕ್ಕೆ ಮನೆತನದ ಮುದ್ದಯ್ಯಗೌಡ ಎಂಬ ರೈತರು ಇಷ್ಟೆಲ್ಲಾ ಶ್ರೀಮಂತಿಕೆ ಇದ್ದರೂ ನನಗೆ ನೆಮ್ಮದಿ ಇಲ್ಲ ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ. ನನ್ನ ಊರಿನ ಎಲ್ಲಾ ಜನರು ಕೂಡ ಇದೇ ತೊಂದರೆಯಿಂದ ಬಳಲುತ್ತಿದ್ದಾರೆ.. ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿ ಎಂದು ಹೇಳಿದಾಗ ದಾಸಿಮಯ್ಯನವರು
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನ್ನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ
ಎಂದು ಅವರಿಗೆಲ್ಲಾ ವಚನದ ಮೂಲಕ ತಿಳಿಹೇಳಿದರು. ಮತ್ತೆ ಮರಳಿ ತನ್ನೂರಿಗೆ ತೆರಳಿ ನೇಕಾರಿಕೆ ವೃತ್ತಿಯನ್ನು ಅವಲಂಬಿಸಿದ ದಾಸಿಮಯ್ಯನವರು ವಿವಾಹವಾಗಲು 12 ವರ್ಷಗಳ ಕಾಲ ಕನ್ಯಾನ್ವೇಷಣೆಗೆ ತೊಡಗಿದ್ದರು.
ತಮ್ಮನ್ನು ವಿವಾಹವಾಗುವ ಕನ್ಯೆಗೆ ಅವರು ಕಬ್ಬಿನ ಜಲ್ಲೆ ಮರಳು ಮತ್ತು ಅಕ್ಕಿಯನ್ನು ಉಪಯೋಗಿಸಿ ಕಟ್ಟಿಗೆ ಮತ್ತು ನೀರು ಇಲ್ಲದೆ ಪಾಯಸ ಮಾಡಿ ಕೊಡುವ ಶರತ್ತನ್ನು ವಿಧಿಸುತ್ತಿದ್ದರು. ಅದು ಹೇಗೆ ಸಾಧ್ಯ ಎಂದೇ ಸಾಕಷ್ಟು ಜನ ಕನ್ಯೆಯರು ಮತ್ತು ಅವರ ಪಾಲಕರು
ಹಿಂಜರಿಯುತ್ತಿದ್ದರು.
ಅಂತಿಮವಾಗಿ ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ ಮಹಾದೇವಿ ಮತ್ತು ಮಲ್ಲಿನಾಥ ದಂಪತಿಗಳ ಮನೆಗೆ ಬಂದು ಕನ್ಯೆಯ ಬಗ್ಗೆ ವಿಷಯವನ್ನು ಪ್ರಸ್ತಾಪ ಮಾಡಿದರು. ದಾಸಿಮಯ್ಯನ ಷರತ್ತನ್ನು ಸ್ವೀಕರಿಸಿದ ಆಕೆ ಕಬ್ಬಿನ ಜಲ್ಲೆಯಿಂದ ರಸವನ್ನು ತೆಗೆದು ಆ ರಸವನ್ನು ತೆಗೆದ ಸಿಪ್ಪೆಯನ್ನು ಒಣಗಿಸಿ ಅದನ್ನು ಉರಿ ಮಾಡಿ ಕಬ್ಬಿನ ರಸವನ್ನು ಪಾತ್ರೆ ಒಂದರಲ್ಲಿ ಹಾಕಿ ಅದರಲ್ಲಿ ಮರಳು ಮಿಶ್ರಿತ ಅಕ್ಕಿಯನ್ನು ಹಾಕಿದಾಗ ಭಾರವಾದ ಮರಳು ತಳಕ್ಕೆ ಸೇರಿ ಅಕ್ಕಿ ಸಿಹಿಯಾದ ಕಬ್ಬಿನ ರಸದಲ್ಲಿ ಕುದ್ದು ಪಾಯಸದ ರೂಪವನ್ನು ತಾಳಿತು. ಪಾತ್ರೆಯ ಮೇಲೆ ಮೆಲುವಾಗಿ ಸೌಟಿನಿಂದ ಅಕ್ಕಿಯ ಪಾಯಸವನ್ನು ಬಟ್ಟಲಲ್ಲಿ ತೆಗೆದು ಹಾಕಿದ ದುಗ್ಗಳೆ ಅದನ್ನು ತಂದು ದಾಸಿಮಯ್ಯನವರ ಮುಂದೆ ಇಟ್ಟಳು. ಇದರಿಂದ ಸಂತುಷ್ಟರಾದ ದಾಸಿಮಯ್ಯನವರು ಗುರು ಹಿರಿಯರ ಸಮ್ಮುಖದಲ್ಲಿ ದುಗ್ಗಳೆಯನ್ನು ವಿವಾಹವಾದರು. ವಿವಾಹದ ನಂತರ ಸತಿಪತಿಗಳು ಮುದನೂರು ಗ್ರಾಮದಲ್ಲಿ ಅತ್ಯಂತ ಅನ್ಯೋನ್ಯತೆಯಿಂದ ಬದುಕನ್ನು ಸಾಗಿಸಿದರು.
ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಸತಿಪತಿಗಳೊಂದಾಗದವರ ಭಕ್ತಿ ಅಮೃತದೊಳು ವಿಷ ಬೆರೆಸಿದಂತೆ ಕಾಣಾ ರಾಮನಾಥ
ಎಂದು ಅನನ್ಯ ದಾಂಪತ್ಯದ ಕುರಿತು ವಚನವನ್ನು ರಚಿಸಿರುವ ದಾಸಿಮಯ್ಯನವರು ಪತ್ನಿ ದುಗ್ಗಳೆಯ ವಿನಮ್ರತೆಯ ಕುರಿತು ಹೀಗೆ ಬರೆದಿದ್ದಾರೆ
ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ
ಎಂದು ಆಕೆಯ ಮಿತವ್ಯಯ, ಪತಿಭಕ್ತಿ, ಸೌಮ್ಯ ಮತ್ತು ಸಾತ್ವಿಕತೆಯ ಕುರಿತು, ಕುರಿತು ಆತ ಹೇಳುತ್ತಾನೆ.
ಸುಮಾರು 12 ವರ್ಷಗಳ ಕಾಲ ನೇಯ್ದ ಅತ್ಯಂತ ಸುಂದರವಾದ ದಿವ್ಯಾಂಬರವನ್ನು ಮಾರುಕಟ್ಟೆಗೆ ಕೊಂಡು ಹೋದಾಗ ಅದರ ಸೌಂದರ್ಯ ಮತ್ತು ನೇಯ್ಗೆಯನ್ನು ಕಂಡ ಅದನ್ನು ಖರೀದಿಸಲು ಯಾರೂ ಮುಂದಾಗುವುದಿಲ್ಲ… ಮಾರಾಟವಾಗದ ಅಂಬರವನ್ನು ಮರಳಿ ಮನೆಗೆ ತರುವಾಗ ದಾರಿಯಲ್ಲಿ ಕಂಡ ಮುಪ್ಪಿನ ಮುದುಕ ಚಳಿಯಿಂದ ನಡುಗುತ್ತಿದ್ದು ಇದನ್ನು ಕಂಡು ಆತನಿಗೆ ದಾಸಿಮಯ್ಯನವರು ಆ ದಿವ್ಯಾಂಬರವನ್ನು ನೀಡುತ್ತಾರೆ. ಆದರೆ ಆ ಮುಪ್ಪಿನ ಮುದುಕ ತನಗೆ ನೀಡಿದ ಆ ಬಟ್ಟೆಯನ್ನು ಹರಿದು ಚೂರು ಚೂರು ಮಾಡಿ ತಲೆಗೆ ಮತ್ತು ಸೊಂಟಕ್ಕೆ ಸುತ್ತಿಕೊಳ್ಳುತ್ತಾನೆ. ಇದನ್ನು ನೋಡಿ ದಾಸಿಮಯ್ಯನ ಜೊತೆಗಿದ್ದವರು ಇಷ್ಟು ಸುಂದರವಾಗಿ ನೀನು ನೇಯ್ದ ಬಟ್ಟೆಯನ್ನು ಆ ಮುದುಕ ಹರಿದು ಹಾಕಿದ. ನಿನಗೆ ಸ್ವಲ್ಪವೂ ಬೇಸರವಾಗಲಿಲ್ಲವೇ? ಎಂದು ಕೇಳಿದ. ಅದಕ್ಕೆ ಮುಗುಳ್ನಗುತ್ತಾ ನಾನು ಕೊಡುವವರೆಗೆ ಅದು ನನ್ನದಿತ್ತು… ಆದರೆ ಆ ಮುದುಕನಿಗೆ ದಿವ್ಯಾಂಬರವನ್ನು ಕೊಟ್ಟ ಮೇಲೆ ಅದರ ಮೇಲೆ ನನಗೆ ಯಾವುದೇ ಅಧಿಕಾರವಿಲ್ಲ ಅದು ಪಡೆದುಕೊಂಡವನ ಸೊತ್ತು ಅವನು ಅದನ್ನು ಏನು ಮಾಡಿದರೂ ನನಗೆ ಬಾಧಿಸುವುದಿಲ್ಲ ಎಂದು ಹೇಳಿದ. ನಂತರ ಕೋಪದಿಂದ ಮುಸುಗರೆದ ಮುದುಕನಿಗೆ ಹಸಿವಾಗಿರಬಹುದು ಎಂದು ಭಾವಿಸಿ ಆತನಿಗೆ ಬನ್ನಿ ನಮ್ಮ ಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸಿ ಎಂದು ಕೇಳಿಕೊಂಡನು. ತುಸು ಕೋಪಿತನಾಗಿ ಹೂಂ ಎಂದು ಒಪ್ಪಿಕೊಂಡು ದಾಸಿಮಯ್ಯನೊಂದಿಗೆ ಮಾತನಾಡಿದ ವೃದ್ಧನನ್ನು ದಂಪತಿಗಳಿಬ್ಬರೂ ಪ್ರೀತಿಯಿಂದ ಕರೆದು ಕೈಕಾಲಿಗೆ ನೀರು ಕೊಟ್ಟು ಹೊಟ್ಟೆ ತುಂಬಾ ಉಣಬಡಿಸಿದರು.
ದಂಪತಿಗಳ ಈ ಭಕ್ತಿ ಮತ್ತು ಪ್ರೀತಿಯನ್ನು ಕಂಡು
ಸಾಕ್ಷಾತ್ ಶಿವನೇ ಅವರನ್ನು ಪರೀಕ್ಷಿಸಲು ಬಂದಿದ್ದನು ಎಂಬ ಈ ದಂತಕಥೆ ಅವರ ಕಾಯಕ ಮತ್ತು ದಾಸೋಹಕ್ಕೆ ಸಾಕ್ಷಿ.
ದಾಸಿಮಯ್ಯನವರ ಭಕ್ತಿಯನ್ನು ಕುರಿತು ‘ಬಸವಣ್ಣನವರು ತಮ್ಮ ವಚನದಲ್ಲಿ ಭಕ್ತಿ ಎಂತಹುದಯ್ಯ ದಾಸಯ್ಯ ಮಾಡಿದಂತಹದು’
ಎಂದು ತಮ್ಮ ವಚನಗಳಲ್ಲಿ ಬಣ್ಣಿಸಿದ್ದಾರೆ.
ಇಂತಹ ದಾಸಿಮಯ್ಯನವರು ತಮ್ಮ ವೃತ್ತಿಯಾದ ನೇಕಾರಿಕೆಯಿಂದ ಜೇಡರ ದಾಸಿಮಯ್ಯ ಎಂಬ ನಾಮಧೇಯದಿಂದ ದೇವರ ದಾಸಿಮಯ್ಯ ಎಂದು ಹೆಸರಾದರು. ಆಗ ಆ ಪ್ರದೇಶವನ್ನು ಆಳುತ್ತಿದ್ದ ಚಾಲುಕ್ಯರ ರಾಜ 2ನೇ ಜಯ ಸಿಂಹನ ರಾಣಿ ಸುಗ್ಗಲಾದೇವಿಯು ದಾಸಿಮಯ್ಯನವರ ವಚನಗಳು ಮತ್ತು ಸಾತ್ವಿಕ ಬದುಕಿನ ಶೈಲಿಯಿಂದ ಪ್ರೇರೇಪಿತಳಾಗಿ ಅವರ ಶಿಷ್ಯಳಾಗಿ ಬದಲಾದರು.
ದೇವರ ದಾಸಿಮಯ್ಯ ಮತ್ತು ದುಗ್ಗಳೆಯರ ದಾಂಪತ್ಯವಂತೂ ಅನುರೂಪ ದಾಂಪತ್ಯ ಎಂದು ಹೆಸರಾಗಿದ್ದು ಅಂತಹ ಸದ್ಗುಣಿ ಸುಶೀಲೆ ಪತ್ನಿಯನ್ನು ಪಡೆದು ತಾನು ಧನ್ಯನಾದೆ ಎಂದು ದೇವರ ದಾಸಿಮಯ್ಯನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ.
ದೇವರ ದಾಸಿಮಯ್ಯ ಮತ್ತು ದುಗ್ಗಳೆಯರಿಗೆ ಸುವರ್ಚಲೆ ಎಂಬ ಓರ್ವ ಮಗಳಿದ್ದಳು. ದೇವರ ದಾಸಿಮಯ್ಯನವರು ಬಸವಾದಿ ಶರಣರಿಗೆ ಮುನ್ನವೇ ಈ ಧರೆಯಲ್ಲಿ ಜನಿಸಿ ತಮ್ಮ ವಚನಗಳ ಮೂಲಕ ಕಾಯಕ, ದಾಸೋಹ, ಲಿಂಗನಿಷ್ಠೆಯ ಮೂಲಕ ಜನ ಮಾನಸದಲ್ಲಿ ನೆಲೆ ನಿಂತಿದ್ದಾರೆ. ಅಂತಹ ಸಾತ್ವಿಕತೆಯೇ ಮೈವೆತ್ತ ದಂಪತಿಗಳಿಗೆ ಇದೋ ನಮ್ಮ ಶರಣು.
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ.
