ಕಲಬುರಗಿ/ ಚಿತ್ತಾಪುರ: ಮುಂಗಾರು ಬಿತ್ತನೆ ಸಮಯದಲ್ಲಿ ಬರುವ ರೈತರ ಹಬ್ಬ ಕಾರಹುಣ್ಣಿಮೆ ಹಬ್ಬವನ್ನು ತಾಲೂಕಿನಾದ್ಯಂತ ರೈತರು ತಮ್ಮ ತಮ್ಮ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.
ಹುಣ್ಣಿಮೆ ಹಿಂದಿನ ದಿನ ದನಕರು, ಎತ್ತುಗಳನ್ನು ಕಟ್ಟುವ ಕೊಟ್ಟಿಗೆಗಳ ಸ್ವಚ್ಛತೆ, ಎತ್ತುಗಳ ಕೊಂಬು ಕೆತ್ತಿ ಚೂಪಾಗಿ ಮಾಡುವುದು, ಕೃಷಿ ಪರಿಕರಗಳ ಪೂಜೆ ನಡೆಯಿತು. ಹೊನ್ನಹುಗ್ಗಿಯ ಅಂಗವಾಗಿ ಜಾನುವಾರುಗಳಿಗೆ ಪೂಜೆ, ಆರತಿ, ನೈವೇದ್ಯ ಅರ್ಪಿಸಿ ತಿನ್ನಿಸುವ, ಕೋಳಿ ಮೊಟ್ಟೆಯ ಜೊತೆಗೆ ಇಂದು ಕುಡಿಸುವ ಸಂಪ್ರದಾಯದ ಆಚರಣೆ ಜರುಗಿತು.
ಎತ್ತುಗಳಿಗೆ ಮುಗುಡಾ, ಮುಗರಾಣಿ ದಾರ ಸಿದ್ಧ ಮಾಡಿಕೊಂಡು ಬಣ್ಣದಲ್ಲಿ ಅದ್ದುವ, ಬಣ್ಣ ಬಣ್ಣದ ಪ್ಲಾಸ್ಟಿಕ್ ವೈರ್ ಸುತ್ತುವ ಕೆಲಸವನ್ನು ರೈತರು ಸಂಜೆಯಿಂದ ರಾತ್ರಿವರೆಗೆ ಮಾಡಿದರು.
ಹಬ್ಬದ ಆಚರಣೆಗೆ ಬೇಕಾಗುವ ಸಾಮಾನುಗಳ ಖರೀದಿ ಭರದಿಂದ ನಡೆಯಿತು.
ಬುಧವಾರ ಬೆಳಗ್ಗೆ ಎತ್ತುಗಳನ್ನು ತಮ್ಮ ಗ್ರಾಮಗಳ ಸಮೀಪದ ಬಾವಿ, ನದಿ, ಹಳ್ಳಗಳಿಗೆ ಹೊಡೆದುಕೊಂಡು ಹೋಗಿ ಸ್ವಚ್ಛವಾಗಿ ಮೈ ತೊಳೆದು ಕೊಂಬುಗಳಿಗೆ ತಮಗಿಷ್ಟದ ಆಯಿಲ್ ಪೇಂಟ್ ಹಾಗೂ ಮೈಗೆ ವಿವಿಧ ಬಣ್ಣಗಳನ್ನು ಹಚ್ಚಿದರು. ಹಣೆಗೆ ಬಾಸಿಂಗ, ಹೂವು, ಕೊರಳಿಗೆ ಗೆಜ್ಜೆ ಕಟ್ಟಿ ವಿಶೇಷವಾಗಿ ಅಲಂಕರಿಸಿ ಮನೆಯವರೆಗೆ ಹಲಗಿ, ಬಾಜಾಗಳೊಂದಿಗೆ ಎತ್ತುಗಳ ಮೆರವಣಿಗೆ ಮಾಡಿದರು.
ಎತ್ತುಗಳ ಮೆರವಣಿಗೆಯಲ್ಲಿ ರೈತರು ಬಾರಕೋಲಿನ ಆಟ, ಬಡಿಗೆಯಾಟ, ಪಟ್ಯಾ ತಿರುವುದು, ಹಲಗಿ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಚಿಕ್ಕ ಮಕ್ಕಳು ಕುಣಿದು ಕುಪ್ಪಳಿಸಿದರು. ಮನೆಗೆ ಬಂದ ಎತ್ತುಗಳಿಗೆ ಮಹಿಳೆಯರು ಪಾದಪೂಜೆ, ಆರತಿ ಬೆಳಗಿ ಮೀಸಲು ನೈವೇದ್ಯದ ಹೋಳಿಗೆ, ಅನ್ನ ತಿನ್ನಿಸಿ, ಎತ್ತುಗಳ ಅಲಂಕಾರ ನೋಡಿ ಕಣ್ಣುಂಬಿಕೊಂಡು ಖುಷಿ ಪಟ್ಟರು.
ಸಂಜೆ ಸಮಯದಲ್ಲಿ ಚಿಕ್ಕದಾದ ಚಕ್ರಗಳ ಕಾಲುಬಂಡಿ ಓಟದ ಸ್ಪರ್ಧೆ ನಡೆಯಿತು. ರೈತರು ತಮ್ಮ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂಡಿಸಿ ಓಡಿಸುವ ಮೂಲಕ ಆನಂದಪಟ್ಟರು. ಕಾಳುಬಂಡಿ ಮೇಲೆ ನಿಂತ ವ್ಯಕ್ತಿಯ ಕೂಗಾಟ, ಚೀರಾಟಕ್ಕೆ, ಜೋರಾಗಿ ಹೊಡೆಯುವ ಬಾರುಕೋಲಿನ ಏಟಿಗೆ ಎತ್ತುಗಳು ವೇಗವಾಗಿ ಓಡಿ ಶಕ್ತಿ
ಪ್ರದರ್ಶನ ಮಾಡಿದವು. ಕಾಲುಬಂಡಿಯ ಓಟವು ನೋಡುಗರನ್ನು ಮನರಂಜಿಸಿತು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
