ಚುರುಮುರಿ ಉತ್ತರ ಕರ್ನಾಟಕದ ಜನಜೀವನದ ಬಿಡಿಸಲಾಗದ ಬಂಧವಾಗಿದೆ. ಚುಡುವಾ, ವಗ್ಗರಣೆ, ಸುಸ್ಲಾದಂತಹ ಉಪಹಾರಕ್ಕೂ, ಖಾಲಿ ಕುಂತಾಗ ಉಪ್ಪಿನ ಶೇಂಗಾ, ಶೇವಾ ಜೊತೆಗೆ ಬಾಯಾಡಿಸಲು, ಮನೆಯ ಕೆಲವು ಕಾರ್ಯಗಳಿಗೆ ಚುರುಮುರಿ ಬೇಕೇಬೇಕು. ಜಾತ್ರೆಯ ಫಲಾಹಾರಕ್ಕೂ, ಬಡವರ ಸಂತೆಯ ಸಡಗರಕ್ಕೂ ಚುರುಮುರಿಯೇ ಪ್ರಧಾನ. ವಿಶೇಷವೆಂದರೆ ನಮ್ಮ ಉತ್ತರ ಕರ್ನಾಟಕದ ಮನೆಗಳ ಪ್ರತಿದಿನದ ಸಂಜೆ ಸ್ನಾಕ್ಸ್ ಲ್ಲಿ ಕೂಡಾ ಚಹಾ ಜೊತೆಗೆ ಚುರುಮುರಿಯೆ ಹೀರೋ.
ಈಗ ಆ ಚುರುಮುರಿಯ ಹೆಸರಿನಲ್ಲಿ ಕನ್ನಡ ಕಲಾತ್ಮಕ ಚಿತ್ರವೊಂದು ಬಂದಿದೆ. ಕನ್ನಡ ಸಾಹಿತ್ಯದಲ್ಲಿ ಮತ್ತು ಚಲನಚಿತ್ರ ರಂಗದಲ್ಲಿ ಹೊಸ ಹೊಸ ಪ್ರಯತ್ನಗಳು ಆಗಿವೆ, ಆಗುತ್ತಲೇ ಇವೆ. ಈ ಚುರುಮುರಿಯಾ ಚಿತ್ರ ಕೂಡ ಹೊಸದು ಮತ್ತು ಹೊಸಬರ ಚಿತ್ರವಾಗಿದೆ. ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರ ‘ನೆಲ’ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ರಂಗಭೂಮಿ ಕಲಾವಿದರಾದ ಮಹಾದೇವ ಹಡಪದ ಮತ್ತು ಜಮಖಂಡಿಯ ಹಿರಿಯ ಸಾಹಿತಿಗಳಾದ ಶಾರದಾ ಮುಳ್ಳೂರ ಅವರ ಮುಖ್ಯ ಭೂಮಿಕೆಯಲ್ಲಿ, ಸುಪ್ರಿಯಾ ನಿಪ್ಪಾಣಿ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿದ್ದು, ರಬಕವಿ, ಬನಹಟ್ಟಿ, ಮಹಾಲಿಂಗಪುರ, ಜಮಖಂಡಿಗಳಲ್ಲಿ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣಗೊಂಡಿದೆ.
ಚಿತ್ರತಂಡ ತಮ್ಮ ಪೋಸ್ಟರನಲ್ಲಿ ‘ಒಬ್ಬ ಬಡಪಾಯಿ ಚುರುಮುರಿ ಮಾರುವವನ ಚಿತ್ರ ‘ ಎಂದರೂ ಕೂಡಾ ಈ ಚಲನಚಿತ್ರದಲ್ಲಿ ಅವನೇ ಹೃದಯ ಶ್ರೀಮಂತನಾಗಿ ಕಾಣುತ್ತಾನೆ. ಜೊತೆಗೆ ಒಬ್ಬ ಹಿರಿಯ ಮಹಿಳಾ ಸಾಹಿತಿ ಕೂಡ ಇಲ್ಲಿ ಬಹಳ ಮೇರು ವ್ಯಕ್ತಿತ್ವವಾಗಿ ಕಾಣುತ್ತಾರೆ. ಇಡೀ ಚಿತ್ರ ಈ ಇಬ್ಬರ ಮೇಲೆ ನಿಂತಿದೆ. ಅಚಾನಕ್ಕಾಗಿ ಚುರುಮುರಿ ಮಾರುವವ ಸಾಹಿತಿಯ ಮನೆಗೆ ಚುರುಮುರಿ ಮಾರಲು ಬಂದಾಗ ಇಬ್ಬರಲ್ಲೂ ಸ್ನೇಹ, ಆತ್ಮೀಯತೆ, ಗೌರವ ಬೆಳೆಯುತ್ತದೆ. ಚುರುಮುರಿ ಮಾರುವವನ ಬಗ್ಗೆ ಲೇಖಕಿ ಪುಸ್ತಕ ಮಾಡಲು ಮುಂದಾದಾಗ ಆ ವ್ಯಕ್ತಿ ತನ್ನ ನೈಜ ಜೀವನ ಮರೆಮಾಚಿ ಬೇರೆಯದೆ ಕತೆ ಹೇಳುತ್ತಾನೆ. ಆದಾಗ್ಯೂ ಆ ಲೇಖಕಿ ಅದನ್ನು ಪುಸ್ತಕ ರೂಪದಲ್ಲಿ ತರುತ್ತಾರೆ. ಅನಾರೋಗ್ಯದ ಕಾರಣಕ್ಕಾಗಿ ಲೇಖಕಿ ತೀರಿಹೋದಾಗ ಆ ಚುರುಮುರಿ ಮಾರುವವ ಪಡುವ ವ್ಯಥೆಗೆ ಆ ಮರವೇ ಸಾಕ್ಷಿಯಾಗುವದರ ಜೊತೆಗೆ ನೋಡುಗರ ಅಂತ:ಕರಣ ಮರುಗುತ್ತದೆ.
ಈ ಚಿತ್ರದಲ್ಲಿ ಚುರುಮರಿ ಮಾರುವವ ಉದಾರಿಯಾಗಿ, ವೈರಾಗಿಯಾಗಿ, ಪದಕಾರನಾಗಿ, ಸಂಚಾರಿಯಾಗಿ ದೊಡ್ಡ ಮನುಷ್ಯನಾಗಿ ಕಾಣುತ್ತಾನೆ. ಅದೇ ರೀತಿ ಮಹಿಳಾ ಸಾಹಿತಿಯೂ ಕೂಡ ಬಹಳ ಪ್ರಮುಖವಾಗಿ ಕಾಣುತ್ತಾರೆ. “ನಾವು ಚುರುಮುರಿ ಆನ್ಲೈನ್ ಅಲ್ಲಿ ತರ್ತೀವಿ, ಬಜಾರ್ ಅಲ್ಲಿ ತರ್ತೀವಿ “ಎಂದು ಹೇಳುವ ಸನ್ನಿವೇಶದಲ್ಲಿ ನಿರ್ದೇಶಕರು ವೀಕ್ಷಕರ ಮನಸ್ಸಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಮಾಡಿದ್ದಾರೆ. ಎಲ್ಲವೂ ಹೀಗೆ ಅಯೋಮಯ ಆದಾಗ ಈ ರೀತಿ ಊರೂರು ತಿರುಗಿ ವಸ್ತುಗಳನ್ನು ಮಾರುವ ಅನೇಕ ಬಡ ಜೀವಿಗಳು ಬದುಕುವದಾದರೂ ಹೇಗೆ? ಎಂಬ ಸೂಕ್ಷ್ಮತೆಯನ್ನು ತೆರೆ ಮೇಲೆ ಮೌನವಾಗಿಯೇ ಪ್ರಶ್ನಿ ಸಿದ್ದಾರೆ. ಈ ಸಿನಿಮಾ ತೆರೆ ಮೇಲೆ ನೋಡುತ್ತಿದ್ದೇವೆ ಎನ್ನುವದಕ್ಕಿಂತ ಕಣ್ಣಮುಂದೆ ನಡೆಯುತ್ತಿದೆ ಎಂದೆನಿಸುವಷ್ಟು ಆಪ್ತವೆನಿಸುತ್ತದೆ. ಅಬ್ಬರಿಸುವ ಹೊಡೆದಾಟ, ಅರೆಬರೆಯ ಐಟಂ ಸಾಂಗ್, ಡಬಲ್ ಮೀನಿಂಗ್ ಡೈಲಾಗಗಳಿಲ್ಲದೇ, ಎಕ್ಸ್ಟ್ರಾ ಯಾವುದೇ ಮಸಾಲಾ ಸೇರಿಸದೇ ಕತೆಯನ್ನು ತೆಗೆದುಕೊಂಡು ಹೋಗುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. ಕತೆ ಅಥವಾ ಕಾದಂಬರಿಯನ್ನು ಮೂಲ ಕತೆಗೆ ದಕ್ಕೆ ಬರದಂತೆ ದೃಶ್ಯ ಮಾಧ್ಯಮಕ್ಕಿಳಿಸುವುದು ಸುಲಭದ ಕೆಲಸವಲ್ಲ. ಇಲ್ಲಿ ಅಭಿನಯ, ನಿರ್ದೇಶನ ಛಾಯಾಗ್ರಹಣ, ಸಣ್ಣನೇ ಸಂಗೀತ ಎಲ್ಲವೂ ಪರಿಪೂರ್ಣವಾಗಿದೆ. ಕನ್ನಡ ಕಲಾ ರಸಿಕರು, ಶಿಕ್ಷಕರು, ಸಾಹಿತಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇಂತಹ ಸಿನಿಮಾಗಳನ್ನು ವೀಕ್ಷಿಸಿ, ನಮ್ಮ ಸುತ್ತಲಿನ ಪ್ರತಿಭೆಗಳನ್ನು ಬೆಳೆಸುವದರ ಜೊತೆಗೆ ಕನ್ನಡ ಸಾಹಿತ್ಯ, ಚಿತ್ರೋದ್ಯಮ ಕೂಡಾ ಬೆಳೆಯಬೇಕಾಗಿದೆ. ನೀವು ಹೋಗಿ ಚಿತ್ರ ನೋಡಿ ಖಂಡಿತ ನಿಮ್ಮ ಸಹೃದಯಿ ಮನಸ್ಸಿಗೆ ಚಿತ್ರ ಇಷ್ಟವಾಗುತ್ತದೆ.
- ಚಿರಂಜೀವಿ ರೋಡಕರ್, ಶಿಕ್ಷಕರು – ಸಾಹಿತಿಗಳು.
