ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ, ಅಪ್ಪ ಅಂದರೆ ಪ್ರೀತಿ. ಅಪ್ಪ ದೇವರು ಕೊಟ್ಟ ದೇವರು. ಹೀಗೆ ತಂದೆಯನ್ನು ಪದಗಳಲ್ಲಿ ವರ್ಣಿಸಲು, ಹೊಗಳಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ. ಅಪ್ಪ ಎಂದರೆ ಆಕಾಶ. ಅಪ್ಪ ಯಾವತ್ತೂ ಅಮ್ಮನಂತಲ್ಲ. ಆದರೆ, ಮಕ್ಕಳ ಬಾಳು ಹಸನಾಗಿಸಲು ತಾನು ಜೀವನದುದ್ದಕ್ಕೂ ಕಷ್ಟಗಳನ್ನು ಅನುಭಿವಿಸುತ್ತಾನೆ. ಮಕ್ಕಳ ಸಾಧನೆ, ಯಶಸ್ಸಿನಲ್ಲಿ ಖುಷಿ ಕಾಣುತ್ತಾನೆ. ಮಕ್ಕಳ ಬದುಕಿಗೆ ಚೈತನ್ಯದ ಚಿಲುಮೆಯಾಗಿರುವ ‘ಅಪ್ಪನ ದಿನ’ದಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ ಅವರ ತಂದೆ ದಿವಂಗತ ಜೆ.ಎನ್. ವೆಂಕೋಬಪ್ಪ ರವರ ಬಗ್ಗೆ ಒಂದಷ್ಟು ನೆನಪುಗಳು…
ತಂದೆಯೇ ನನಗೆ ಆದರ್ಶ :
ನನ್ನ ತಂದೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಅವರೇ ನನಗೆ ಆದರ್ಶ. ಅವರ ಸಹಾಯ, ಸಹಕಾರದ ಗುಣಗಳಿಂದ ಪ್ರೇರಣೆ ಪಡೆದುಕೊಂಡಿದ್ದೇನೆ, ವೃತ್ತಿಯಲ್ಲಿ ಕೃಷಿಕರಾದರೂ ಅವರಲ್ಲಿನ ಒಳ್ಳೆಯ ಗುಣಗಳಿಂದ ಅವರು ಇತರರಿಗೆ ಮಾದರಿಯಾಗಿದ್ದರು. ಮಗ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು. ಎಲ್ಲರಿಗಿಂತ ಎತ್ತರಕ್ಕೆ ಬೆಳೆಯಬೇಕು, ಪ್ರಸಿದ್ಧಿ ಪಡೆಯಬೇಕು’ ಎಂದು ಅವರು ಸದಾ ಕನವರಿಸುತ್ತಿದ್ದರು. ಅವರ ಪ್ರೋತ್ಸಾಹ, ಆತ್ಮಸ್ಥೈರ್ಯದಿಂದ ಇಂದು ನಾನು ಜನ ಸೇವಕನಾಗಿ ಹೊರಹೊಮ್ಮಿದ್ದೇನೆ. ‘ಏನೂ ಮಾಡದಿದ್ದರೂ ಕೆಟ್ಟದ್ದನ್ನು ಎಂದಿಗೂ ಮಾಡಬೇಡ’ ಎಂಬ ಮೌಲ್ಯಯುತ ಆದರ್ಶವನ್ನು ನಮ್ಮ ತಂದೆ ಹೇಳಿಕೊಟ್ಟಿದ್ದಾರೆ.
ಅವರ ನೇರ ನುಡಿ ನನಗೆ ಇಷ್ಟ. ಸುಳ್ಳು, ಮೋಸವನ್ನು ಯಾವತ್ತೂ ಸಹಿಸುತ್ತಿರಲಿಲ್ಲ. ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದರಿಂದ ಒಳ್ಳೆಯ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮೂರು ಹೊಸಪೇಟೆ ತಾಲ್ಲೂಕಿನ ಚಿಕ್ಕ ಗ್ರಾಮ ಹೊಸೂರು. ಬಸ್ ಸೌಕರ್ಯ ಇರಲಿಲ್ಲ. ನಡೆದುಕೊಂಡೇ ಸಂಚರಿಸಬೇಕಿತ್ತು. ತಂದೆ ಜತೆ ನಡೆಯುತ್ತಿದ್ದ ಆ ದಿನಗಳ ಸಂತಸ ಎಂದಿಗೂ ಮರೆಯಲಾಗದು.
ಜನರಿಗೆ ಸಹಾಯ ಮಾಡುವ ಮೂಲಕ ಜನಪ್ರಿಯರಾದರು. ಸರಳ ಜೀವನದಲ್ಲಿ ನಂಬಿಕೆ ಇಟ್ಟಿದ್ದ ಅವರು ನೀತಿವಂತ ವ್ಯಕ್ತಿಯಾಗಿದ್ದರು. ರೈತರಿಗಾಗಿ ಉದಾರವಾಗಿ ಕೆಲಸ ಮಾಡುವ ಮೂಲಕ ಸಮುದಾಯದಿಂದ ಗೌರವಿಸಲ್ಪಟ್ಟ ಕಠಿಣ ಪರಿಶ್ರಮಿ ವ್ಯಕ್ತಿಯಾಗಿದ್ದರು.
ಇವರು ಹೊಸಪೇಟೆ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಜನಪರ ಕಾರ್ಯಗಳನ್ನು ನಿರ್ವಹಿಸಿದ್ದರು ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು
ತಂದೆಯ ನೆನಪನ್ನು ನೆನಪಿಸಿಕೊಂಡರು.
ವರದಿ : ಜಿಲಾನಸಾಬ್ ಬಡಿಗೇರ್
