ನನ್ನ ಅಪ್ಪ ನನಗೆ ಅಮ್ಮನಷ್ಟೇ ಆತ್ಮೀಯ ನಾನು ಅಪ್ಪನಿಗೆ ಅಪ್ಪಾಜಿ ಎಂದು ಕರೆಯುವೆ ಅಪ್ಪ ನಾನು ಮತ್ತು ನನ್ನ ತಮ್ಮನನ್ನು ಒಂದೇ ರೀತಿ ಬೆಳೆಸಿದ್ದಾರೆ. ಅವರು 10ನೇ ತರಗತಿ ಮಾತ್ರ ಕಲಿತಿದ್ದರು ತುಂಬಾ ತಿಳಿದುಕೊಂಡಿದ್ದಾರೆ. ಅಪ್ಪಟ ದೈವ ಭಕ್ತರು.
ನನ್ನ ಅಪ್ಪ 7ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದಾರೆ. ಅವರು ಹಿರಿಯ ಮಗ ಆದ್ದರಿಂದ 4 ಜನ ಸಹೋದರರು ಮತ್ತು ಇಬ್ಬರು ಸಹೋದರಿಯರ ಸಾಕುವ ಸಂಸಾರದ ಹೊಣೆ ಹೊತ್ತುಕೊಳ್ಳುತ್ತಾರೆ. ಬೆಳಗ್ಗೆ 5 ಗಂಟೆಗೆ ಎದ್ದು ಕೂಲಿ ಮಾಡಿ ನಂತರ ಶಾಲೆಗೆ ಹೋಗುತ್ತಿದ್ದರಂತೆ. ಹೀಗೆ ಕಷ್ಟ ಪಟ್ಟು ಓದಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಬಂದು ಡಿಕ್ಷನರಿ ಬಹುಮಾನ ಪಡೆದುಕೊಂಡಿದ್ದಾರೆ. ಆದರೆ ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಶುಲ್ಕ ಕಟ್ಟಲಾಗದೆ ವಿದ್ಯಾಭ್ಯಾಸ ಅಲ್ಲಿಗೆ ನಿಲ್ಲುತ್ತದೆ. ಇದ್ದ ಒಂದು ಎಕರೆ ಜಮೀನು ಮಿಶ್ರ ಬೆಳೆ ಕೃಷಿ ಜೊತೆಗೆ ತರಕಾರಿ ವ್ಯಾಪಾರ ಮಾಡಿ, ಆಲೆಮನೆ, ಬಾಡಿಗೆಗೆ ಸೌದೆ ಗಾಡಿಯಲ್ಲಿ ಏರಿಕೊಂಡು ಬರುವುದು ಈ ರೀತಿ ಅವಿರತ ದುಡಿಮೆ ಮಾಡಿ ಒಂದು ಎಕರೆ ಜಮೀನು ಕೊಂಡುಕೊಳ್ಳುತ್ತಾರೆ. ಸಹೋದರ,ಸಹೋದರಿಯರ ಮದುವೆ ಮಾಡಿ ಹೊಸಮನೆ ಕಟ್ಟಿಸುತ್ತಾರೆ. ನನಗೆ ಮತ್ತು ನನ್ನ ತಮ್ಮನಿಗೆ ಕೂಡಾ ಉನ್ನತ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಅದಕ್ಕಿಂತ ಮಿಗಿಲಾಗಿ ಇದ್ದರಲ್ಲೇ ಹಂಚುವ ಸರಳ ಜೀವನ ಶೈಲಿ, ಎಲ್ಲರೊಂದಿಗೆ ಬೆರೆಯುವ, ಕಷ್ಟ ಪಟ್ಟು ದುಡಿಯುವ, ಪ್ರಾಮಾಣಿಕವಾಗಿ ಬದುಕುವುದು ಕಲಿಸಿದ್ದಾರೆ. ಆಗಿನ ಕಾಲದವರಾದರೂ ನನ್ನ ನನಗೆ ತುಂಬಾ ಸ್ವಾತಂತ್ರ್ಯ ಕೊಟ್ಟಿದ್ದರು.ಈಗಲೂ ನನ್ನ ಎಲ್ಲಾ ಕೆಲಸಕ್ಕೂ ಪ್ರೋತ್ಸಾಹ ಕೊಡುತ್ತಿದ್ದಾರೆ.
ನನ್ನ ಅಪ್ಪನಿಗೆ ತುಂಬಾ ಇಷ್ಟವಾದ ಸ್ಥಳ ಅಂದರೆ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಸೀತಾಳಯ್ಯನಗಿರಿ ಮಠ. ಆ ಮಠದ ಜಾತ್ರೆ ಉತ್ಸವ, ವಿಶೇಷ ಪೂಜೆಗಳಲ್ಲಿ ನನ್ನ ಅಪ್ಪಾಜಿ ದಾಸೋಹದ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ನಮ್ಮ ಅಪ್ಪಾಜಿ ಮನೆಗೆ ಮತ್ತು ಊರಿಗೂ ಉಪಕಾರಿ. ಕಷ್ಟವೆಂದು ಕೇಳಿದವರಿಗೆ ಅವರು ಎಂದಿಗೂ ಎಲ್ಲ ಎಂದು ಹೇಳದೆ, ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಊರಿನವರಿಗೆ ಮತ್ತು ನಮ್ಮ ಸಂಭಂಧಿಕರ ಮನೆಗಳಲ್ಲಿ ಏನಾದರೂ ಜಗಳವಾದರೆ ಮಧ್ಯಸ್ತಿಕೆ ವಹಿಸಿ ರಾಜೀಮಾಡುತ್ತಾರೆ. ಹೆಣ್ಣು, ಗಂಡು ತೋರಿಸುವ ಕೆಲಸದಲ್ಲಿ ನನ್ನ ಅಪ್ಪಾಜಿ ಎತ್ತಿದ ಕೈ. ಅದು ದುಡ್ಡಿ ಮಾಡುವ ದಲ್ಲಾಳಿಯಾಗಿ ಅಲ್ಲ ಅದು ಒಂದು ಕಲ್ಯಾಣ ಕೆಲಸ ಎಂದು ನಿಸ್ವಾರ್ಥವಾಗಿ ಮಾಡುತ್ತಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕು ಬೆಣ್ಣೂರು ಕೃಷಿ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಸತತವಾಗಿ ಮೂರು ಬಾರಿ ಅವಿರೋದವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಹಾಗೆ ನನ್ನ ಅಪ್ಪಾಜಿ ಬೆಳೆಯದ ಬೆಳೆ ಇಲ್ಲ 70 ದಾಟಿದರು 20ರ ಹರೆಯದಂತೆ ಹುರುಪಿನಿಂದ ದಣಿವರಿಯದೆ ದುಡಿಯುತ್ತಿರುವ ನನ್ನ ಅಪ್ಪಾಜಿ ಕಾಯಕ ಯೋಗಿ ಬಗ್ಗೆ ಎಷ್ಟು ಬರೆದರೂ ಸಾಲದು. ಇವರ ಮಗಳಾಗಿ ಹುಟ್ಟಿರುವುದು ನನ್ನ ಸುಯೋಗವಾಗಿದೆ.
✍️ಭವ್ಯ ಸುಧಾಕರ ಜಗಮನೆ , ಶಿವಮೊಗ್ಗ
