ಶಿವಮೊಗ್ಗ : ಸಂತೋಷ್ ಎಂ.ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಾತನಾಡಿ
ಪರಿತ್ಯಕ್ತ ಸೇರಿದಂತೆ ಯಾವುದೇ ಮಕ್ಕಳು ಆಧಾರ್ ಇಲ್ಲದೇ ಸರ್ಕಾರಿ ಸೌಲಭ್ಯ ಪಡೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳಲು ‘ಸಾಥಿ’ ಅಭಿಯಾನ ಕೈಗೊಳ್ಳಲಾಗಿದ್ದು, ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.
ಪಾಲನೆ ಮತ್ತು ಸಂರಕ್ಷಣೆ ಬೇಕಾಗಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರ್ಯಾಕಿಂಗ್ಗಾಗಿ ‘ಸಾಥಿ’ ಅಭಿಯಾನದ ಅಂಗವಾಗಿ ಸಮಿತಿ ಸದಸ್ಯರುಗಳಿಗೆ ಶುಕ್ರವಾರ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವನ್ವಯ ತಂದೆ-ತಾಯಿ ಇಲ್ಲದಿರುವ ಪರಿತ್ಯಕ್ತ ಮಕ್ಕಳು, ವಲಸೆ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೀಡಲು ‘ಸಾಥಿ’ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಪರಿತ್ಯಕ್ತ, ವಲಸೆ, ಹಾಗೂ ಇನ್ನಿತರೆ ಕಾರಣಗಳಿಂದ ಆಧಾರ್ ನೋಂದಣಿಯಾಗದ ಮಕ್ಕಳನ್ನು ಗುರುತಿಸಲು ಈಗಾಗಲೇ ಸರ್ವೇ ನಡೆಸಿ, ಹಲವು ಮಕ್ಕಳನ್ನು ಗುರುತಿಸಲಾಗಿದೆ.
ಗುರುತಿಸಲಾದ ಅನೇಕ ಮಕ್ಕಳಿಗೆ ಪೊಷಕರು ಇದ್ದಾರೆ. ಆದರೂ ಸಹ ಅವರಿಗೆ ಆಧಾರ್ ಇಲ್ಲ. ಉದಾಹರಣೆಗೆ ಹಕ್ಕಿಪಿಕ್ಕಿ ಕ್ಯಾಂಪ್, ಮರ ಕಡೆಯುವ ಕಾರ್ಮಿಕರು, ಇತರೆ ವಲಸೆ ಕಾರ್ಮಿಕರ ಪೋಷಕರಲ್ಲಿ ಯಾವುದೇ ದಾಖಲೆಗಳು ಇಲ್ಲದ ಕಾರಣ ಆಧಾರ್ ಮಾಡಿಸಲು ಸಾಧ್ಯವಾಗಿಲ್ಲ.
ಪೋಷಕರಿಗೆ ಯಾವುದೇ ರೀತಿಯ ದಾಖಲೆಗಳು ಇಲ್ಲದಿದ್ದರೆ, ಅಂತಹ ಪೋಷಕರು ತಮ್ಮ ಮೂಲ ನಿವಾಸಿ ದೃಢೀಕರಣ ಪಡೆದು, ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ, ಗುರುತಿನ ಚೀಟಿ ಪಡೆದು, ಆ ದಾಖಲೆಯನ್ನು ನೀಡಿ ಆಧಾರ್ ಪಡೆಯಬಹುದು.
ಎಷ್ಟೋ ಜನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಇಲ್ಲ. ಇಂತಹ ಪ್ರಕರಣದಲ್ಲಿ ಪೋಷಕರು ವಿಶೇಷವಾಗಿ ತಾಯಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಬಂದು ಪೋಷಕರ ಹೆಸರು, ಮಗುವಿನ ಜನ್ಮ ದಿನ, ಜನ್ಮ ಸ್ಥಳದ ವಿವರ ನೀಡಿ ಅರ್ಜಿ ಸಲ್ಲಿಸಿದಲ್ಲಿ ಪ್ಯಾನೆಲ್ ವಕೀಲರ ಮೂಲಕ ಸಂಬoಧಿಸಿದ ಅಧಿಕಾರಿಗಳೊಂದಿಗೆ ನಿಯಮಾನುಸಾರ ವ್ಯವಹರಿಸಿ ಜನನ ಪ್ರಮಾಣ ಪತ್ರದ ಪ್ರಕರಣವನ್ನು ಜೂನ್ 12 ರಂದು ನಡೆಯುವ ಲೋಕ್ ಅದಾಲತ್ನಲ್ಲಿ ವಿಲೇವಾರಿ ಮಾಡಲಾಗುವುದು. ಆದ್ದರಿಂದ ಜನನ ಪ್ರಮಾಣ ಪತ್ರ ಇಲ್ಲದ ಪೋಷಕರು ಪ್ರಾಧಿಕಾರವನ್ನು ಸಂಪರ್ಕಿಸಿದರೆ ಅನುಕೂಲವಾಗುತ್ತದೆ.
ಶಾಲೆಗಳಲ್ಲಿ ಅರಿವು ಅಭಿಯಾನ:
ಜಿಲ್ಲೆಯ ಎಲ್ಲಾ ಖಾಸಗಿ, ಅನುದಾನಿತ, ಅನುದಾನರಹಿತ ಮತ್ತು ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಮುಂದಿನ ತಿಂಗಳಿನಿoದ ಸಂವಿಧಾನ, ಮಾದಕ ವ್ಯಸನ, ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳು, ಪೊಕ್ಸೋ ಕುರಿತು ಕಾನೂನು ಅರಿವು ಅಭಿಯಾನವನ್ನು ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವರ ಸಹಯೋಗದೊಂದಿಗೆ ಮಾಡಲಾಗುವುದು ಎಂದರು.
ಜನನ ಪ್ರಮಾಣ ಪತ್ರ ಸೇರಿದಂತೆ ಕಾನೂನಿನ ಕುರಿತಾದ ಯಾವುದೇ ವಿಷಯದ ಬಗ್ಗೆ ಸ್ಪಷ್ಟೀಕರಣದ ಅವಶ್ಯಕತೆ ಇದ್ದಲ್ಲಿ ರಾಷ್ಟಿಯ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಹಾಗೂ ಮಕ್ಕಳ ವಿಷಯಕ್ಕೆ ಸಂಬಒಧಿಸಿದಂತೆ ಸಹಾಯ ಬೇಕಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, 112 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪರಿತ್ಯಕ್ತ ಮಕ್ಕಳು ಸೇರಿದಂತೆ ಯಾವುದೇ ಮಕ್ಕಳು ಆಧಾರ್ ನೋಂದಣಿಯಿಂದ ಹೊರಗುಳಿಯದಂತೆ ಅವರನ್ನು ಗುರುತಿಸಿ ಆಧಾರ್ ನೋಂದಣಿ ಮಾಡಿಸಲು ಎಲ್ಲ ಸಂಬoಧಿಸಿದ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದರು.
ಸಭೆಯಲ್ಲಿ ಡಿಡಿಪಿಐ ಮಂಜುನಾಥ್, ಡಿವೈಎಸ್ಪಿ ಬಾಬು ಅಂಜನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಡಿಎಲ್ಓ ಡಾ.ಕಿರಣ್, ಸಿಡಬ್ಲುಸಿ ಅಧ್ಯಕ್ಷ ತಾಜುದ್ದೀನ್ ಖಾನ್, ಆಧಾರ್ ಸಂಯೋಜಕರು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ಯಾನಲ್ ವಕೀಲರು ಸೇರಿದಂತೆ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















