ಬಳ್ಳಾರಿ / ಕಂಪ್ಲಿ : ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಮುಖ್ಯ ಶಿಕ್ಷಕಿ ಶ್ರೀಮತಿ ಎಂ. ಪುಷ್ಪ ತಿಳಿಸಿದರು.
ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಕಂಪ್ಲಿ ಶನಿವಾರ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ತಿಳಿದವರೊಂದಿಗೆ ಅರ್ಧಗಂಟೆ ಕಳೆದರೆ ನಾಲ್ಕು ಪುಸ್ತಕಗಳನ್ನು ಓದಿದಂತೆ, ಯೋಗಿಗಳೊಂದಿಗೆ ಅರ್ಧಗಂಟೆ ಕಳೆದರೆ ಅರ್ಧ ಬದುಕನ್ನೇ ದಾಟಿದಂತೆ, ಎನ್ನುವ ಮಾತಿನಂತೆ ಎಲ್ಲರೂ ನಿತ್ಯ ಅರ್ಧಗಂಟೆ ಯೋಗ ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದರು.
ಸಹ ಶಿಕ್ಷಕಿ ಬಿ. ಗಂಗಮ್ಮ ಮಾತಾನಾಡಿ ಭಾರತೀಯ ಪುರಾತನ ಯೋಗಾ ಕಲೆಯನ್ನು ಭಾರತೀಯರು ಕೀಳಾಗಿ ಕಾಣುತ್ತಿದ್ದಾರೆ. ಆದರೆ ವಿದೇಶಿಯರು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ. ಅರ್ಧಗಂಟೆ ಯೋಗಾ ಸಾಧನೆಯಿಂದ ದಿನಪೂರ್ತಿ ಲವಲವಿಕೆಯಿಂದ ಇರಬಹುದು. ಮನಸ್ಸಿಗೆ ಶಾಂತಿ, ದೇಹಕ್ಕೆ ಶಕ್ತಿ ನೀಡುವ ಯೋಗಾವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹ ಶಿಕ್ಷಕ ಜಿ ಸುಭಾಷ್ ರವರು ಯೋಗಾಸನ ಹಾಗೂ ಪ್ರಾಣಾಯಾಮವನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು/ಶಿಕ್ಷಕಿಯರು ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















