ಉರಗ ರಕ್ಷಣೆಗೆ ಸದಾ ಸಿದ್ದ!
ಯಾದಗಿರಿ/ಗುರುಮಠಕಲ್: ಮಳೆಗಾಲ ಬಂತೆಂದರೆ ಅಲ್ಲಲ್ಲಿ ಜೀವಜಂತುಗಳು ಜನವಸತಿ ಪ್ರದೇಶದತ್ತ ನುಗ್ಗುವದು ಸಾಮಾನ್ಯವಾಗಿದೆ.
ನಗರೀಕರಣದ ಹೆಸರಿನಲ್ಲಿ ಅರಣ್ಯ ಪ್ರದೇಶ ನಾಶದಿಂದ ಹಾವುಗಳು ಅಲ್ಲಲ್ಲಿ ಕಂಡು ಬರುತ್ತವೆ, ಜನರಿಗೆ ಹಾವಿನ ಕುರಿತು ಕಡಿಮೆ ತಿಳಿವಳಿಕೆ ಮತ್ತು ಅನಗತ್ಯ ಭಯದ ಕಾರಣದಿಂದ ಜನವಸತಿ ಪ್ರದೇಶ ಕಡೆಗೆ ಬಂದರೆ ಮೊದಲು ಸಾಯಿಸಲು ಮುಂದಾಗುತ್ತಾರೆ. ಆದರೆ ಗುರುಮಠಕಲ್ ಪಟ್ಟಣದ 20 ವರ್ಷದ ಯುವಕ ಅಂಜಪ್ಪ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡುವ ಮಾನವೀಯ ಕೆಲಸಕ್ಕೆ ತೊಡಗಿಸಿಕೊಂಡಿರುವುದು ಶ್ಲಾಘನೀಯ ಸಂಗತಿ.
ಹಾವುಗಳು ಕಂಡರೆ ಧೈರ್ಯಗೆಡುವವರೇ ಹೆಚ್ಚು, ಇದಕ್ಕೆ ಅಪವಾದವೆಂಬಂತೆ ಅಂಜಪ್ಪ ಕಂದೂರ್ ಯಾವ ಭಯವೂ ಇಲ್ಲದೇ ನಾಗರ ಹಾವು, ಕೇರೆ ಹಾವು, ಹಸಿರು ಹಾವು, ಕೊಳಕು ಮಂಡಲ, ನೀರ ಹಾವು ಸೇರಿದಂತೆ ನಾನಾ ಜಾತಿಯ 2000 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ಸೈ ಎನಿಸಿದ್ದಾರೆ. ಅವುಗಳಿಗೆ ಯಾವುದೇ ಗಾಯ ಮಾಡದೇ ಪ್ಲಾಸ್ಟಿಕ್ ಚೀಲ, ಡಬ್ಬದಲ್ಲಿ ಹಾಕಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಾರೆ.
ಹಾವುಗಳ ರಕ್ಷಣೆ ಸಮಯದಲ್ಲಿ ಮೂರು ಬಾರಿ ಅವುಗಳಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಮತ್ತೆ ಅದೇ ಪ್ರವೃತ್ತಿಯಲ್ಲಿ ಮುಂದುವರೆದಿದ್ದಾರೆ, ಹಾವು ಬಂದಿದೆ ಎಂದು ಯಾರೇ ಕರೆ ಮಾಡಿದರೂ ಸ್ಥಳಕ್ಕೆ ಧಾವಿಸಿ, ಹಾವನ್ನು ಹಿಡಿದು ಹಾವುಗಳನ್ನು ಸಾಯಿಸದೇ ಅವುಗಳಿಗೂ ಬದುಕುವ ಅವಕಾಶ ನೀಡಿ ಎಂದು ಜನರಿಗೆ ತಿಳಿ ಹೇಳುತ್ತಾನೆ, ಹಾವು ಕೈಯಿಂದಲೇ ಅದರ ಬಾಲ ಹಿಡಿದು ಅದನ್ನು ಚೀಲಕ್ಕೆ ಹಾಕಿ ಊರಿನ ಹೊರ ವಲಯದಲ್ಲಿ ಬಿಟ್ಟು ಬರುವುದು ನಾಲ್ಕು ವರ್ಷಗಳಿಂದ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ನಗುತ್ತಾ ಹೇಳುತ್ತಾರೆ ಅಂಜಪ್ಪ.
ಅಂಜಪ್ಪನ ಸೇವೆಗೆ ನಾಗರೀಕರು ಪ್ರಶಂಸೆ ಸಲ್ಲಿಸಿದ್ದಾರೆ, ನಿಮ್ಮ ಸೇವೆಗೆ ನಮ್ಮದೊಂದು ಸಲಾಮ್.. ನಿಮ್ಮ ಈ ಸೇವೆ ಹೀಗೆಯೇ ಮುಂದುವರೆಯಲಿ ಎಂಬುದು ಎಲ್ಲರ ಮನದಾಶಯ.
ವರದಿ: ಜಗದೀಶ್ ಕುಮಾರ್ ಭೂಮಾ



















