
ಬಳ್ಳಾರಿ/ ಕಂಪ್ಲಿ : ಬಳ್ಳಾರಿ ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಿಯೂ ಯೂರಿಯಾ ರಸಗೊಬ್ಬರದ ಕೊರತೆ ಕಂಡು ಬಂದಿಲ್ಲ. ಒಂದು ವೇಳೆ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲೆಯ ಕೃಷಿ ಇಲಾಖೆಯ ಉಪ ನಿರ್ದೇಶಕ ಎಸ್. ಎನ್. ಮಂಜುನಾಥ್ ತಿಳಿಸಿದರು.
ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಸ್ತುತ 11,500 ಮೆಟ್ರಿಕ್ ಟನ್ ಯೂರಿಯಾ ಮಾರುಕಟ್ಟೆಯಲ್ಲಿದ್ದು, ಸದ್ಯದಲ್ಲೇ ಇನ್ನೂ 17 ಸಾವಿರ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಬರಲಿದೆ. ಯೂರಿಯಾ ದಾಸ್ತಾನು ಇದ್ದರೂ ರೈತರಿಗೆ ಮಾರಾಟ ಮಾಡದಿದ್ದರೆ, ಹಾಗೂ ಸರ್ಕಾರ ನಿಗಧಿ ಮಾಡಿದ ದರಕ್ಕೆ ಮಾರಾಟ ಮಾಡದಿದ್ದರೆ, ಮಾರಾಟಗಾರರ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕಗಳ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ರೈತರಿಗೆ ರಸಗೊಬ್ಬರದೊಂದಿಗೆ ಬೇರೆ ಏನನ್ನು ಲಿಂಕ್ ಮಾಡಿ ಮಾರಾಟ ಮಾಡಬಾರದು ರೈತರು ರಸಗೊಬ್ಬರ ಕೊರತೆ, ಹೆಚ್ಚಿನ ದರ ವಸೂಲಿ ಸೇರಿದಂತೆ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರುಗಳನ್ನು ನೀಡಿದಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಎನ್.ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಕೆ.ಸೋಮಶೇಖರ್, ರೇಖಾ, ಮನೋಹರ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















