ಬಳ್ಳಾರಿ / ಕಂಪ್ಲಿ : ಸ್ಥಳೀಯ ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬ್ಯುರೋ ಆಫ್ ಎನರ್ಜಿ ಎಫಿಸಿಎನ್ಸಿ (ಬಿ.ಇ.ಇ.) ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್.) ಸಹಯೋಗದಲ್ಲಿ ಕೃಷಿ ಪಂಪ್ಸೆಟ್, ಜಲ ಸಂರಕ್ಷಣೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಳ್ಳಾರಿಯ ಜಿಲ್ಲಾ ಉಪ ಕೃಷಿ ನಿರ್ದೇಶಕ ಎಸ್.ಎನ್. ಮಂಜುನಾಥ್ ರೈತರು ಭವಿಷ್ಯದ ದೃಷ್ಟಿಯಿಂದ ವಿದ್ಯುತ್ನ್ನು ಅವಲಂಭಿಸದೆ ಸೌರ, ಜೈವಿಕ ಸೇರಿದಂತೆ ಪರ್ಯಾಯ ಶಕ್ತಿಗಳ ಬಳಕೆಗೆ ಜಾಗ್ರತೆ ವಹಿಸಬೇಕಾಗಿದೆ ಎಂದರು. ಸರ್ಕಾರ ಸೂಚಿಸಿದ ಕಡಿಮೆ ವಿದ್ಯುತ್ ಬಳಕೆಯ ಮಾದರಿ ದಕ್ಷ ಯಂತ್ರಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯವಾಗಲಿದೆ ಎಂದರು.
ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ ಮಾತನಾಡಿ ಇಂಧನ ಸಂರಕ್ಷಣಾ ಕಾಯ್ದೆ, ಪಂಪ್ಸೆಟ್ ಗುಣಮಟ್ಟ ಕಾಯ್ದುಕೊಳ್ಳುವಿಕೆ, ಗಂಗಾವತಿಯ ಸಹಾಯಕ ಪ್ರಾಧ್ಯಾಪಕ ಆರ್. ಬದರಿ ಪ್ರಸಾದ್ ಜಲಸಂರಕ್ಷಣೆ, ಬಳ್ಳಾರಿಯ ಕೊರ್ಲಗುಂದಿ ಗುರುಪ್ರಸಾದ್ ಬಿಇಇ ಸ್ಟಾರ್ ಲೇಬಲ್ ಹೊಂದಿರುವ ಕೃಷಿ ಪಂಪ್ಸೆಟ್ ಬಳಕೆ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಡಾ. ಅಭಿಲಾಷ ಸಿ.ಆರ್. ರೈತರಿಗೆ ಉಪಯುಕ್ತವಾದ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಹೊಸಮನಿ,ಕೃಷಿ ಅಧಿಕಾರಿಗಳಾದ ನವ್ಯಾ ಪ್ರಶಾಂತ್, ಏಸುಬಾಬು, ಶಿವಪ್ಪ ಬಾರಿಗಿಡದ, ಈಶ್ವರ, ರೈತರಾದ ದೊಡ್ಡ ಬಸಪ್ಪ,ಜೆ.ರುದ್ರಪ್ಪ, ಸರಸ್ವತಿ, ಮಂಜುಗೌಡ, ಹಂದಿಹಾಳ್ ನಿಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















