ಬಳ್ಳಾರಿ / ಕಂಪ್ಲಿ : ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ 2025ರ ಜು.25ರಿಂದ ಆ.24ರತನಕ ನಿತ್ಯ ಸಂಜೆ 6.30ರಿಂದ 63ನೇವರ್ಷದ ಮಹಾಮಹಿಮ ಪವಾಡಪುರುಷ ಕಲಬುರ್ಗಿ ಶ್ರೀಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ ಜರುಗಲಿದೆ ಎಂದು ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಇಟಗಿ ಬಸವರಾಜಗೌಡ ತಿಳಿಸಿದ್ದಾರೆ.
ಜು.25ರಂದು ಬೆಳಿಗ್ಗೆ 10.15ಕ್ಕೆ ಬುಕ್ಕಸಾಗರದ ಶ್ರೀವಿಶ್ವಾರಾಧ್ಯ ಶಿವಾಚಾರ್ಯರು ಷಟ್ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಕೊಪ್ಪಳ ಗವಿಮಠದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿ, ಹೊಸಪೇಟೆ ಕೊಟ್ಟೂರುಮಠದ ಜಗದ್ಗುರು ಶ್ರೀಬಸವಲಿಂಗ ಮಹಾಸ್ವಾಮಿಗಳು, ಹೆಬ್ಬಾಳ ಶ್ರೀನಾಗಭೂಷಣ ಶಿವಾಚಾರ್ಯರು, ಎಮ್ಮಿಗನೂರು ಹಂಪಿಸಾವಿರದೇವರಮಠದ ಶ್ರೀವಾಮದೇವ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ. ಸಂಜೆ 6.30ಕ್ಕೆ ಗುಡುದೂರಿನ ಶ್ರೀನೀಲಕಂಠಾರ್ಯತಾತನವರು ಪುರಾಣಕ್ಕೆ ಚಾಲನೆ ನೀಡಲಿದ್ದಾರೆ.
ಶ್ರಾವಣ ಮಾಸ ಪೂರ್ತಿ ಗದುಗಿನ ಗವಿಸಿದ್ಧೇಶ್ವರ ಶಾಸ್ತಿçಗಳು ಪುರಾಣ ಪ್ರಸ್ತುತಪಡಿಸಲಿದ್ದು, ರಾರಾವಿಯ ಶ್ರೀಬಿ.ಚಿದಾನಂದಪ್ಪ ಗವಾಯಿಗಳಿಂದ ಸಂಗೀತ, ಹಂಪಿ ಕನ್ನಡ ವಿವಿಯ ಶಿಕ್ಷಕ ಶ್ರೀಕೆ.ದೊಡ್ಡಬಸಪ್ಪರಿಂದ ತಬಲವಾದನ ಸೇವೆ ಜರುಗಲಿದೆ.
ಆ.24ರಂದು ಬೆಳಗಿನಜಾವ ಈಶ್ವರ, ನಂದಿ, ಬೊಚ್ಚಯ್ಯಸ್ವಾಮಿ, ಗುರುಸಿದ್ಧಮರಿದೇವರ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ ಜರುಗಲಿದೆ. ಬೆಳಿಗ್ಗೆ 8ಗಂಟೆಗೆ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಹಾಗೂ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ, ಮಧ್ಯಾಹ್ನ 2ಗಂಟೆಗೆ ಜಂಗಮ ಗಣಾರಾಧನೆ, ಮಹಾಪ್ರಸಾದ, ಸಂಜೆ 6.30ಕ್ಕೆ ಪುರಾಣ ಮಹಾಮಂಗಳಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ



















