ವಿಶೇಷವಾಗಿ ಆಕರ್ಷಣೆಗೊಂಡ ಪೋತುರಾಜು ಕುಣಿತ.
ಯಾದಗಿರಿ/ ಗುರುಮಠಕಲ್: ಪಟ್ಟಣದ ಹೃದಯ ಭಾಗದಲ್ಲಿರುವ ನಗರೇಶ್ವರ ದೇವಸ್ಥಾನ ಆವರಣದಲ್ಲಿರುವ ಪೊಲೆಪಲ್ಲಿ ಯಲ್ಲಮ್ಮ ದೇವಿಯ 5 ನೆಯ ವರ್ಷದ ಜಾತ್ರಾ ಮಹೋತ್ಸವ ಇಂದು ಸಂಭ್ರಮದಿಂದ ಜರುಗಿತು.
ಪ್ರತಿ ವರ್ಷದ ಜಾತ್ರೆಯ ಸಂಪ್ರದಾಯದಂತೆ ಶ್ರಾವಣ ಮಾಸದ ಪ್ರಾರಂಭದ ಭೀಮನ ಅಮಾವಾಸ್ಯೆಯಂದು ಪಟ್ಟಣದಲ್ಲಿ ದೇವಿಯ ಜಾತ್ರೆ ಶ್ರದ್ಧಾಭಕ್ತಿ, ಸಡಗರ, ಹರ್ಷೋದ್ಘಾರ, ಸಂಭ್ರಮದೊಂದಿಗೆ ಜರುಗಿತು.
ಆಶಿರೆಡ್ಡಿ ಕೊಸ್ಗಿ ದಂಪತಿಗಳಿಂದ ದೇವಿಗೆ ಪೂಜೆ, ವಿಘ್ನೇಶ್ವರ ಪೂಜೆ, ಗುರುಪೂಜೆ, ದೇವಿಯ ಪಾದುಕೆ ಪೂಜೆ, ಮಂಗಳಾರತಿ ಕಾರ್ಯಕ್ರಮಗಳು ಸಂಪ್ರದಾಯದಂತೆ ನಡೆದವು.
ಪೋತುರಾಜು ವೇಷದಾರಿಗಳು ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಎಲ್ಲರ ಗಮನ ಸೆಳೆದರು. ಇನ್ನೂ ಮಹಿಳೆಯರು, ಪುರುಷರು, ಮಕ್ಕಳು, ಯುವತಿಯರು ದೇವಿಗೆ ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಭಕ್ತರು ಸರದಿಯಲ್ಲಿ ನಿಂತು ದೇವಿಗೆ ಕಾಯಿಕರ್ಪೂರ, ನೈವೇದ್ಯ ಅರ್ಪಿಸಿ, ದರ್ಶನ ಪಡೆದರು. ಅನ್ನದ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
ಮಳೆಯಲ್ಲಿಯೇ ಕೈ ಕುಸ್ತಿ ಪಂದ್ಯಗಳು ಜರುಗಿದವು, ಯಾವುದೇ ಅಹಿತಕರ ಘಟನೆಗಳಾಗದಂತೆ ಪೊಲೆಪಲ್ಲಿ ಯಲ್ಲಮ್ಮ ತಾಯಿಯ ಜಾತ್ರೆ ಈ ವರ್ಷ ಸಂಪನ್ನಗೊಂಡಿತು.
ವರದಿ: ಜಗದೀಶ್ ಕುಮಾರ್ ಭೂಮಾ



















