ಕೊಪ್ಪಳ/ ಗಂಗಾವತಿ : ಬೆಳೆ ನಷ್ಟ, ಸಾಲದ ಬಾಧೆ ಮತ್ತು ಮಾರುಕಟ್ಟೆಯ ಅನ್ಯಾಯದ ವಿರುದ್ಧವಾಗಿ ಗಂಗಾವತಿಯಲ್ಲಿ ರೈತರು ಧ್ವಜ ಹಿಡಿದು ಬೀದಿಗಿಳಿದರು. ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ (ರಿ.) ದೆಹಲಿಯ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ರೈತರು ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಘೋಷಣೆಗಳ ಮೂಲಕ ಹೊರಹಾಕಿದರು.
ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದರೆ ಅದು ಗ್ರಾಮೀಣ ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು. ಹೋರಾಟದ ನಂತರ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ರೈತರ ಮುಖ್ಯ ಬೇಡಿಕೆಗಳು
- ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದ ರೈತರಿಗೆ ಎಕರೆಗೆ ಕನಿಷ್ಠ 25,000 ರೂ. ಪರಿಹಾರ ನೀಡಬೇಕು.
- ಬೆಳೆ ವಿಮಾ ಯೋಜನೆಗಳು ನಿಜವಾದ ರೈತರಿಗೆ ತಲುಪುವಂತೆ ಕಡ್ಡಾಯವಾಗಿ ಜಾರಿಗೆ ತರಬೇಕು.
- ರೈತರಿಗೆ ಉಚಿತ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಔಷಧಿಗಳನ್ನು ಒದಗಿಸಬೇಕು.
- ಸಾಲಮನ್ನಾ ತಕ್ಷಣ ಜಾರಿಗೆ ಬರಬೇಕು; ರೈತರಿಗೆ ಹೊಸ ಸಾಲ ವಿತರಣೆ ಸುಲಭವಾಗಬೇಕು.
- ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಬಲಪಡಿಸಿ ನಿರುದ್ಯೋಗ ನಿವಾರಣೆ ಮಾಡಬೇಕು.
- ಎಲ್ಲಾ ಬೆಳೆಗಳಿಗೆ MSP (ಕನಿಷ್ಠ ಬೆಂಬಲ ಬೆಲೆ) ನಿಗದಿ ಮಾಡಿ, ಖರೀದಿ ಖಚಿತಪಡಿಸಬೇಕು.
- ರೈತರು ಖಾಸಗಿ ಹಣಕಾಸು ಸಂಸ್ಥೆಗಳ ಬಲೆಗೆ ಸಿಲುಕದಂತೆ ಸಹಕಾರ ಮತ್ತು ಸರ್ಕಾರಿ ಬ್ಯಾಂಕ್ಗಳ ಮೂಲಕವೇ ಸಾಲ ವಿತರಣೆಯಾಗಬೇಕು.
- ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ನೀತಿ ಕ್ರಮಗಳು ರೂಪುಗೊಳ್ಳಬೇಕು.
ದೊಡ್ಡ ಭರಮಣ್ಣರ ಎಚ್ಚರಿಕೆ
ಈ ಹೋರಾಟದಲ್ಲಿ ಮಾತನಾಡಿದ ದೊಡ್ಡ ಬರಮಣ್ಣ, ಕೊಪ್ಪಳ ಜಿಲ್ಲಾ ಅಧ್ಯಕ್ಷರು, ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ (ರಿ.) ದೆಹಲಿ, ಅವರು ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದರು.
“ರೈತರು ದಿನನಿತ್ಯ ಆತ್ಮಹತ್ಯೆಗೆ ದಿಕ್ಕೆಟ್ಟಿದ್ದಾರೆ. ಆದರೆ ಸರ್ಕಾರ ಕೇವಲ ಭರವಸೆಯ ಮಾತುಗಳನ್ನೇ ನೀಡುತ್ತಿದೆ. ಬೆಳೆ ಹಾನಿ ಪರಿಹಾರ, ಸಾಲಮನ್ನಾ, ಬೆಂಬಲ ಬೆಲೆ – ಇವು ರೈತರ ಜೀವಾಳಕ್ಕೆ ಸಂಬಂಧಿಸಿದ ಬೇಡಿಕೆಗಳು. ಈ ಬೇಡಿಕೆಗಳನ್ನು ತಕ್ಷಣ ಪೂರೈಸದಿದ್ದರೆ, ರಾಜ್ಯವ್ಯಾಪಿ ಬೃಹತ್ ಹೋರಾಟ ಆರಂಭಿಸಲು ನಾವು ಹಿಂಜರಿಯುವುದಿಲ್ಲ” ಎಂದು ಎಚ್ಚರಿಸಿದರು.
ಹೋರಾಟದ ಸ್ವರೂಪ
ರೈತರು ಕೈಯಲ್ಲಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿ, ಸರ್ಕಾರವನ್ನು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿರಿಯ ರೈತರು ಹಾಗೂ ಯುವಕರು ತಮ್ಮ ಜೀವನದ ಕಹಿ ಅನುಭವಗಳನ್ನು ಹಂಚಿಕೊಂಡರು.
ಸರ್ಕಾರದ ಪ್ರತಿಕ್ರಿಯೆ?
ಇದೇ ವೇಳೆ, ಮನವಿಯನ್ನು ಸ್ವೀಕರಿಸಿದ ಸ್ಥಳೀಯ ಅಧಿಕಾರಿಗಳು ಬೇಡಿಕೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ, ರೈತರು “ಭರವಸೆಗಳು ಸಾಕಾಯಿತು, ಈಗ ನಿಜವಾದ ಕ್ರಮ ಬೇಕು” ಎಂದು ಗಟ್ಟಿಯಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದಂತ ಎಂ. ಎಂ. ಕುಕನೂರು ಮತ್ತು ನಾಗರಾಜ್ ಬಾವಿಕಟ್ಟಿ ಜಿಲ್ಲಾ ಗೌರವ ಅಧ್ಯಕ್ಷರಾದ ದೇವಪ್ಪ ಹಳ್ಳಿ ಗುಡಿ ಜಿಲ್ಲಾ ಉಪಾಧ್ಯಕ್ಷರು ಹನುಮಂತಪ್ಪ ಬೇವೂರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
- ಕರುನಾಡ ಕಂದ



















