
ಬೆಳಗಾವಿ /ಅಥಣಿ: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡುವುದರಿಂದ ರೈತರಿಗೆ ನಷ್ಟವಾಗುತ್ತದೆ, ರೈತರಿಗೆ ನಷ್ಟವಾದರೆ ಯಾರಿಗೂ ಉಳಿಗಾಲವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಹೇಳಿದರು.
ಸಹಕಾರ ಕ್ಷೇತ್ರವು ರೈತರಿಗೆ ‘ಕಾಮಧೇನು’ ಇದ್ದಂತೆ ಎಂದ ಅವರು, ಈ ಕ್ಷೇತ್ರದಲ್ಲಿ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಅವರು ಅಥಣಿ ಪಟ್ಟಣದಲ್ಲಿ ಅಥಣಿ ತಾಲ್ಲೂಕಾ ಪ್ರಾಥಮಿಕ ಸಹಕಾರಿ ಮತ್ತು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ನವೀಕೃತ ಕಟ್ಟಡವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಸಹಕಾರ ಕ್ಷೇತ್ರವು ರೈತರ ಪಾಲಿಗೆ ದೊಡ್ಡ ಆಧಾರವಾಗಿದೆ. ಇಲ್ಲಿ ರೈತರಿಗೆ ಸುಲಭವಾಗಿ ಸಾಲ ಲಭ್ಯವಾಗುವುದರಿಂದ ಅವರಿಗೆ ದೊಡ್ಡ ಸಹಾಯವಾಗುತ್ತದೆ.
ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಆದಷ್ಟು ಠೇವಣಿ ಗಳನ್ನು ಸಂಗ್ರಹಿಸುವ ಕೆಲಸ ಮಾಡಬೇಕು ಹಾಗೂ ರೈತರಿಂದ ಸಂಗ್ರಹಿಸಿದ ಠೇವಣಿಯನ್ನು ಮತ್ತೆ ರೈತರಿಗೆ ಸಾಲವಾಗಿ ನೀಡಿ, ಬ್ಯಾಂಕನ್ನು ಇನ್ನಷ್ಟು ಬೆಳೆಸಬೇಕು” ಎಂದು ಕಿವಿಮಾತು ಹೇಳಿದರು.
ಗ್ರಾಹಕರಿಗೆ ಉತ್ತಮ ಸೇವೆ ಸೌಲಭ್ಯ ನೀಡದಿದ್ದಲ್ಲಿ ಅಂತ ಬ್ಯಾಂಕುಗಳು ದಿವಾಳಿಯಾಗುತ್ತವೆ. ಇದನ್ನು ಗಮನವಿಟ್ಟು ಸಹಕಾರಿ ರಂಗದಲ್ಲಿನ ಬ್ಯಾಂಕುಗಳು ವ್ಯವಹಾರ ನಡೆಸಬೇಕು. ರೈತರಿಗೆ ಮೊದಲ ಆದ್ಯತೆ ನೀಡಿ ಸಾಲ ಸೌಲಭ್ಯ ಕಲ್ಪಿಸಬೇಕು. ರೈತರ ಕಲ್ಯಾಣಕ್ಕಾಗಿ ಬ್ಯಾಂಕುಗಳು ವಿಶೇಷ ಕೊಡುಗೆಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಇದೆ ಕಾರ್ಯಕ್ರಮದಲ್ಲಿ ಶೆಟ್ಟರ ಮಠದ ಮ.ನಿ.ಪ್ರ. ಮರುಳಸಿದ್ಧ ಮಹಾಸ್ವಾಮೀಜಿಗಳು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದುಂಡಪ್ಪ ಅಸ್ಕಿ, ಕೃ.ಸ.ಸ.ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಭರತ ಮಾಳಿ, ಎಸ್. ಸಂಗಮೇಶ, ರಾಜು ಭೈರುಗೋಳ, ಜ್ಯೋತಿಕುಮಾರ್ ಪಾಟೀಲ್ , ಅಶೋಕ್ ಪಡನಾಡ, ಕಲಗೌಡ ಪಾಟಿಲ,ವ್ಯವಸ್ಥಾಪಕರಾದ ಆರ್. ಎಚ್ .ತೇರದಾಳ, ಅಶೋಕ್ ಪಡನಾಡ, ಶ್ರೀಶೈಲ್ ನಾಯಿಕ, ರವೀಂದ್ರ ಗಾಣಿಗೇರ್, ಶೇಖರ್ ವಳಸಂಗ ಸೇರಿದಂತೆ ಆಡಳಿತ ಮಂಡಳಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಅಥಣಿ.




















