ಬೆಳೆಯುವ ಚಿಗುರು ಚಿವುಟಬಾರದೆಂದು ಸಾಮಾನ್ಯವಾಗಿ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ ಅಲ್ವಾ ..?
ಮನುಷ್ಯನ ಬೆಳವಣಿಗೆ ತನ್ನ ಬಾಲ್ಯ ಮತ್ತು ಕುಟುಂಬವನ್ನು ಆಧರಿಸಿರುತ್ತದೆ, ಮೌಲ್ಯಾತ್ಮಕ ಬೆಳವಣಿಗೆಯಿಂದ ಕೂಡಿದ ಬದುಕು ಹಸನಾಗುತ್ತದೆ. ಇಂದಿನ ನವ ಪೀಳಿಗೆಯಲ್ಲಿ ಕೆಲವು ಮಕ್ಕಳಿಂದ ಅದನ್ನು ನಾವು ನಿರೀಕ್ಷಿಸುವುದು ಮೂರ್ಖತನ ಎಂದು ಎದ್ದು ತೋರುತ್ತದೆ. ನಿಜ ಅಲ್ವಾ, ನಾವು ನಮ್ಮ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ಏನು ಕೊಡಬಹುದು? ಆಸ್ತಿ ಅಂತಸ್ತಿಗಿಂತ ಮೀರಿದ್ದು ಬದುಕಿನ ಮೌಲ್ಯಗಳು ಮಾತ್ರ, ಅವು ನಮ್ಮ ಕಡೆಯ ದಿನಗಳವರೆಗೂ ಜೊತೆಯಾಗಿರುತ್ತವೆ. ಒಂದು ಗಾದೆಯಂತೆ, ” ಬೆಳೆಯುವ ಸಿರಿ ಮೊಳಕೆಯಲ್ಲಿ ” ಎಂದು, ಇದು ಕೇವಲ ಒಂದು ಸಾಲಲ್ಲ ಮನುಷ್ಯನ ಬೆಳವಣಿಗೆಯನ್ನು ಆಧರಿಸಿದ ಪದಗಳು. ತಪ್ಪು ಮಾಡಿದಾಗ ಆ ಕ್ಷಣಕ್ಕೆ ತಿದ್ದುವುದು ಹಿರಿಯರ ಕರ್ತವ್ಯ ಅದು.
ತಿದ್ದದೆ ತಪ್ಪು ಮಾಡಿದ್ದು ಚಿಕ್ಕವನು ಎಂದು ಕೈ ಕಟ್ಟಿ ಕುಳಿತರೆ ಸಾಕೇ? ಆ ಮಗು ಬೆಳೆದ ವಯಸ್ಸಿನಲ್ಲೂ ಅದೇ ತಪ್ಪು ಮಾಡಲು ಹಿಂಜರಿಯುವುದಿಲ್ಲ, ತಿದ್ದದ ತಪ್ಪಿಗೆ ಹಿರಿಯರು ತಲೆ ತಗ್ಗಿಸುವಂತ ಪ್ರಸಂಗ ಎದುರಾಗೇ ಆಗುತ್ತದೆ. ಚಿಕ್ಕವರಿಗೆ ತಿದ್ದಬೇಕು ಆ ತಪ್ಪು ಪುನರಾವರ್ತಿಸದಂತೆ ತಿಳಿ ಹೇಳಬೇಕು, ಅವು ಬೆಳೆಯುವ ಅಂಬುಗಳು, ಹಿರಿಯರ ಬಾಳಿನ ನಾಳೆಗಳು, ಅವು ಭವಿಷ್ಯದ ನಿರ್ಧಾರಗಳು. ತಿದ್ದದ ಒಂದು ತಪ್ಪು ಅವರ ಬದುಕಿನ ದಿಕ್ಕನ್ನೇ ಬದಲಿಸಬಹುದು, ದಡ ತಲುಪಬೇಕಿದ್ದ ದೋಣಿ ಸುಳಿಗೆ ಸಿಲುಕಬಾರದು.
ಮಕ್ಕಳಿಗೆ ಬೆಳೆಸುವ ಹಂತದಲ್ಲಿ ಉಣ್ಣಲು ಕಮ್ಮಿಯಿದ್ದರೂ ಪರವಾಗಿಲ್ಲ, ಆದರೆ ಬದುಕಿನಲ್ಲಿ ಮೌಲ್ಯಗಳ ಕೊರತೆ ಇರಬಾರದು.
ಕವಿಯಾದಂತಹ ಖಲೀಲ್ ಗಿಬ್ರಾನ್ ಹೇಳುತ್ತ ಹೋಗುತ್ತಾರೆ,
” ನಾವು ಬಿಲ್ಲು ಅವರು ಬಾಣ
ಭವಿಷ್ಯದ ಗುರಿ ದಿಕ್ಕಿಗೆ ಹಾರುವವ.
ನಮ್ಮ ಪ್ರೀತಿ ಬೆಳಕು ಕೊಡುವುದು, ಆದರೆ ದಾರಿ ತೋರಿಸುವುದು ದೈವ ” ಎಂದು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೇನೆಂದು ಒತ್ತಿ ಹೇಳುವ ಸಾಲುಗಳಿವು,
ಮಕ್ಕಳ ಸ್ವಾತಂತ್ರ್ಯ ಆತ್ಮಕ್ಕೆ ಬಂಧಿಸುವುದು ಸೂಕ್ತವಲ್ಲ ಆದರೆ ಆ ಸ್ವತಂತ್ರ್ಯತೆಯಲ್ಲಿ ಒಳ್ಳೇ ಯೋಚನೆಗಳು ಮತ್ತು ವಿವೇಚನೆಗಳು ಬಿತ್ತುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ನೀವು ಹಾಕಿ ಕೊಡುವ ಬುನಾದಿಯ ಮೇಲೆ ಅವರು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ.
ಇಲ್ಲಿ ಜನಪದರು ಹೇಳಿದಂತೆ,
” ತಾಯಿಯ ಮಾತು ದೇವರ ವಾಣಿ, ತಂದೆಯ ಮಾತು ಧರ್ಮದ ದಾರಿ ಇದೇ ಮಕ್ಕಳ ಬೆಳವಣಿಗೆಗೆ ದಾರಿ “
” ಸತ್ಯವೇ ಬದುಕಿಗೆ ದಾರಿ
ಧರ್ಮವೇ ನಡವಳಿಗೆ ಶಕ್ತಿ
ಮೌಲ್ಯವೇ ಸಮಾಜದ ಆಭರಣ ” ಎಂದೆಲ್ಲಾ ಬದುಕಿನ ಮೌಲ್ಯಗಳನ್ನ ತಿಳಿಸಿಕೊಟ್ಟವರು.
ಒಂದು ಕಥೆ ನೆನಪಾದಂತೆ
ಒಮ್ಮೆ ಒಬ್ಬ ಗುರುಗಳು ತಮ್ಮ ಶಿಷ್ಯನಿಗೆ ಒಂದು ಕಲ್ಲನ್ನು ಕೊಟ್ಟು ಹೇಳಿದರು:
“ ಈ ಕಲ್ಲನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗು. ಆದರೆ ಮಾರಬೇಡ, ಜನರು ಎಷ್ಟು ಬೆಲೆ ಕೊಡುತ್ತಾರೆ ಎಂದು ಮಾತ್ರ ಕೇಳಿ ಬಾ.”
ಶಿಷ್ಯನು ಮಾರುಕಟ್ಟೆಗೆ ಹೋಗಿ ಕಲ್ಲನ್ನು ತೋರಿಸಿದ. ಒಬ್ಬನು ಹೇಳಿದ:
“ಇದು ಚೆನ್ನಾಗಿ ಕಾಣುತ್ತಿದೆ. ನಾನು ₹100 ಕೊಡುತ್ತೇನೆ.”
ಶಿಷ್ಯನು ವಾಪಾಸ್ ಬಂದು ಹೇಳಿದ.
ಗುರುವು ನಗುತ್ತಾ ಹೇಳಿದರು: “ಇದನ್ನು ಈಗ ಆಭರಣದ ಅಂಗಡಿಗೆ ತೆಗೆದುಕೊಂಡು ಹೋಗು.”
ಅಲ್ಲಿ ಕಲ್ಲನ್ನು ನೋಡಿ ಜವಾಹರಿಯೊಬ್ಬನು ಹೇಳಿದ:
“ಇದು ಅಪರೂಪದ ಕಲ್ಲು! ನಾನು ₹10,000 ಕೊಡುತ್ತೇನೆ.”
ಶಿಷ್ಯನು ಆಶ್ಚರ್ಯಗೊಂಡು ಗುರು ಬಳಿ ಬಂದು ಹೇಳಿದ.
ಅವರು ಮತ್ತೊಮ್ಮೆ ಹೇಳಿದರು: “ಇದನ್ನು ಮ್ಯೂಸಿಯಂಗೆ ತೆಗೆದುಕೊಂಡು ಹೋಗು.”
ಮ್ಯೂಸಿಯಂ ಅಧಿಕಾರಿಗಳು ಕಲ್ಲನ್ನು ನೋಡಿ ಹೇಳಿದರು:
“ ಇದು ಅಮೂಲ್ಯ ರತ್ನ! ನಾವು ಲಕ್ಷಾಂತರ ರೂಪಾಯಿ ಕೊಡಲು ಸಿದ್ಧ. ”
ಗುರುವು ಶಿಷ್ಯನತ್ತ ನೋಡಿ ಹೇಳಿದರು:
“ ಬಾಳಿನ ಮೌಲ್ಯ ಅದನ್ನು ನೋಡುವವರ ದೃಷ್ಟಿಯಲ್ಲಿ ಅಡಗಿದೆ. ನಿನ್ನನ್ನು ಅರ್ಥಮಾಡಿಕೊಳ್ಳದವರ ಕೈಯಲ್ಲಿ ನೀನು ಸಾಮಾನ್ಯ ಕಲ್ಲು, ಆದರೆ ನಿನ್ನ ಮೌಲ್ಯವನ್ನು ಗುರುತಿಸುವವರ ಕೈಯಲ್ಲಿ ನೀನು ಅಮೂಲ್ಯ ರತ್ನ. ”
ಇಲ್ಲಿ ನಮ್ಮ ಬದುಕಿನ ಮೌಲ್ಯಗಳು ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು, ಆದರೆ ಮುಖ್ಯವಾಗಿ ಮೌಲ್ಯಗಳಿಲ್ಲದ ಬದುಕು ಮರುಭೂಮಿಂತೆ ಅಲ್ಲಿ ಏನನ್ನೂ ಬೇಳೆಯುವುದಿಲ್ಲ, ಅಲ್ಲಿ ನಿರೀಕ್ಷಿಸುವುದು ಮೂರ್ಖತನ ಎಂದು ,
ಅಂದು ಹಿರಿಯರು ಹೇಳಿದ್ದು ಇದೇ ಮಾತು, ಬೆಳೆಯುವ ಚಿಗುರಿಗೆ ಹೋಲಿಕೆಯಾದದ್ದು ಮಕ್ಕಳು, ಅವರ ಬದುಕಲ್ಲಿ ಮೌಲ್ಯಗಳ ಕೊರತೆಯಾದರೆ ಆ ಬೆಳೆಯುವ ಹಸಿರೆಲೆ ಚಿವುಟಿದಂತೆಯೇ.
- ಆನಂದಿ ರಾಜಶೇಖರ



















