ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೊಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಕಲಿ, ಗೋವಿನಕೊಪ್ಪ, ನಾಗರಮಡ ವು.ತಂಗೋಡ ಗ್ರಾಮಗಳ ರೈತರು ಇಂದು ಕೊಗನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಪಶು ಆಸ್ಪತ್ರೆ ಸ್ಥಾಪನೆಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಗ್ರಾಮ ಪಂಚಾಯತಿಯ ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದರೂ, ಯಾವುದೇ ಪಶು ಆಸ್ಪತ್ರೆ ಅಥವಾ ಚಿಕಿತ್ಸಾ ಕೇಂದ್ರ ಇಲ್ಲದಿರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಮನವಿಯಲ್ಲಿ ವಿವರಿಸಲಾಗಿದೆ.
ಗ್ರಾಮಸ್ಥರು ಹೇಳುವಂತೆ, ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ದೂರದ ಊರಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜಾನುವಾರುಗಳು ಮೃತಪಟ್ಟ ಘಟನೆಗಳೂ ನಡೆದಿವೆ. ಈ ಸಮಸ್ಯೆಗಳನ್ನು ಪರಿಗಣಿಸಿ, ಕೂಡಲೇ ಕೊಗನೂರಿನಲ್ಲಿ ಪಶು ಆಸ್ಪತ್ರೆಯನ್ನು ಸ್ಥಾಪಿಸುವಂತೆ ಮನವಿ ಮಾಡಲಾಯಿತು.
ಕೊಗನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮನವಿ ಸ್ವೀಕರಿಸಿ, ಈ ಬೇಡಿಕೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಅಲ್ಲದೆ, ರೈತರ ಹಿತದೃಷ್ಟಿಯಿಂದ ಪಶು ಆಸ್ಪತ್ರೆ ಸ್ಥಾಪನೆಗೆ ಸರ್ಕಾರದ ನೆರವು ಪಡೆಯಲು ಪ್ರಯತ್ನಿಸುವುದಾಗಿಯೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಖೇಶ ಬೂದಿಹಾಳ, ರಾಜು ಎಚ್, ನಾಗೇಂದ್ರ ಬೀರಬ್ಬಿ, ಶರಣಪ್ಪ ಎನ್ ಕೂರಗುಂದ, ಚನ್ನವೀರಯ್ಯ ಹಿರೇಮಠ, ಗಂಗಪ್ಪ ಇತರೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಶು ಆಸ್ಪತ್ರೆ ಸ್ಥಾಪನೆಯಿಂದ ಗ್ರಾಮದ ಆರ್ಥಿಕತೆಗೆ ಮತ್ತು ರೈತರ ಜೀವನಮಟ್ಟಕ್ಕೆ ಸಹಕಾರಿಯಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ರಾಖೇಶ ಬೂದಿಹಾಳ, ಶಿರಹಟ್ಟಿ ವರದಿಗಾರರು




















