ಬಳ್ಳಾರಿ / ಕಂಪ್ಲಿ : ಪಾರ್ವತಿ ಪರಶಿವನು ಸಮುದ್ರ ದಡದಲ್ಲಿ ಪೂಜೆ ಸಲ್ಲಿಸುವುದರಿಂದ ಶಾಂತಳಾದಳು ಬಹುಪರಾಕ್ ಎಂದು ಸುಗ್ಗೇನಹಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಅರ್ಚಕ ನುಡಿಯುವ ಮೂಲಕ ಈ ವರ್ಷದ ಕಾರಣಿಕ ನುಡಿದನು.
ಅವರು ಕಂಪ್ಲಿ ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಅಂದರೆ ದಸರಾ ಹಬ್ಬದ ಪ್ರಯುಕ್ತವಾಗಿ ಗ್ರಾಮದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೆ ಹಾಗೂ ಹಬ್ಬದ ಕಾರಣಿಕ ಕಾರ್ಯಕ್ರಮದಲ್ಲಿ ಅಗ್ನಿಕುಂಡವನ್ನು ಹಾಯುವ ಮುನ್ನ ದೇವಿಯ ಕಾರಣಿಕವನ್ನು ನುಡಿದರು. ಗ್ರಾಮದಲ್ಲಿ ಪ್ರತಿವರ್ಷ ದಸರಾ ಹಬ್ಬದ ನಿಮಿತ್ತ ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ಅಗ್ನಿಕುಂಡ ಜಾತ್ರೆ ಮತ್ತು ಕಾರಣಿಕ ಕಾರ್ಯಕ್ರಮ ನಡೆಯುತ್ತದೆ.
ಈ ಕಾರಣಿಕದಿಂದ ಈ ವರ್ಷದ ಮುಂಗಾರು, ಹಿಂಗಾರು ಹಂಗಾಮಿನ ಬೆಳೆಗಳ ಸ್ಥಿತಿಗತಿ ಮತ್ತು ಬೆಳೆಗಳ ಮೌಲ್ಯ ಹಾಗೂ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತವೆ.
ಅಂತೆಯೇ ವಿಜಯದಶಮಿಯಂದು ಶ್ರೀ ದುರ್ಗಾದೇವಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ ಅಗ್ನಿಕುಂಡದಲ್ಲಿ ದೇವಸ್ಥಾನದ ಪೂಜಾರಿ ಉಪವಾಸದೊಡನೆ ವಿವಿಧ ವಸ್ತ್ರಗಳಿಂದ ಮತ್ತು ಹೂಗಳಿಂದ ಅಲಂಕಾರಗೊಂಡು ದೇವಿಯ ಒಪ್ಪಿಗೆ ಪಡೆದು ಅಗ್ನಿಕುಂಡವನ್ನು ಹಾಯುವ ಮುನ್ನ ಕಾರಣಿಕ ನುಡಿದರು. ಬಹುಪರಾಕ್ ಬಹು ಎಚ್ಚರ ಪಾರ್ವತಿ ಪರಶಿವನು ಸಮುದ್ರ ದಡದಲ್ಲಿ ಪೂಜೆ ಸಲ್ಲಿಸುವುದರಿಂದ ಗಂಗೆ ಮಾತೆ ಶಾಂತಳಾದಳು. ಭೂಮಿ ತಾಯಿ ಬಾಯಿ ತೆಗೆದು ನಗು ನಗುತ ಕುಳಿತಳು. ಕೆಂಪು ಕುದುರೆ ಗಗನಕ್ಕೆ ಹಾರಿತು. ಪಾಸೇವು ಹೇಲಿಕೆ ಬಹುಪರಾಕ್ ಬಹು ಎಚ್ಚರ ಕಾರುಹುಣ್ಣಿಮೆ ಹಿಂದು ಮುಂದೆ ಜನರಲ್ಲಿ ಸಂಕಷ್ಟ ಎಚ್ಚರ ಬಹುಪರಾಕ್ ಎಂದು ಕಾರಣಿಕ ನುಡಿದರು.
ಈ ಕಾರಣಿಕವನ್ನು ಗ್ರಾಮದ ಜನತೆ ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡರಲ್ಲದೆ ಈ ವರ್ಷ ಹಿಂಗಾರು ಹಂಗಾಮಿನಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಕೆಂಪು ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗಲಿದೆ. ದೊಡ್ಡದಿರುವುದು ಸಣ್ಣದಾಗಲಿದೆ. ಸಣ್ಣದಿರುವುದು ದೊಡ್ಡದಾಗಲಿದೆ ಎಂದು ಕಾರಣಿಕವನ್ನು ವಿಶ್ಲೇಷಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















