ಕಲಬುರಗಿ: ಸರ್ಕಾರಿ ಸ್ವಾಮ್ಯದ ಸ್ಥಳಗಳು ಹಾಗೂ ಸರ್ಕಾರಿ ಅಧೀನ ಸಂಸ್ಥೆಗಳಲ್ಲಿ ಆರ್. ಎಸ್.ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆ೦ಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತಿಪಾದನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ನೀಲೂರ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರ್.ಎಸ್.ಎಸ್. ಮೂಲಭೂತವಾದಿ ಸಿದ್ಧಾಂತದ ಪರಿಣಾಮದಿಂದಲೇ ನ್ಯಾಯಾಂಗದ ಮುಖ್ಯಸ್ಥರ ಮೇಲೆಯೂ ದೌರ್ಜನ್ಯ ನಡೆಯುವ ವಾತಾವರಣ ನಿರ್ಮಾಣವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನೋವೃತ್ತಿ ಬೆಳೆದಿದ್ದು, ಇದು ರಾಷ್ಟ್ರದ ಏಕತೆ ಮತ್ತು ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗಿದೆ. ಇಂತಹ ವಿಚಾರಧಾರೆಗಳನ್ನು ಬಿತ್ತಿ ಬೆಳೆಯುವ ಆರ್.ಎಸ್. ಎಸ್. ಚಟುವಟಿಕೆಗಳು, ಸರಕಾರಿ ಶಾಲೆ ಮತ್ತು ಸರಕಾರದ ಅಧೀನದಲ್ಲಿ ಸಂಸ್ಥೆಗಳಲ್ಲಿ ನಡೆಯುವುದರಿಂದ ಅದು ಮಕ್ಕಳು ಮತ್ತು ಯುವ ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆರ್. ಎಸ್. ಎಸ್. ನಡೆಸುವ ಚಟುವಟಿಕೆಗಳನ್ನು ತಡೆಯುವುದು ಪ್ರತಿ ಸಂವಿಧಾನ ನಂಬಿದ ನಾಗರಿಕನ ಕರ್ತವ್ಯವಾಗಿದೆ. ಸರ್ಕಾರಿ ಕಚೇರಿಗಳು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು, ಸರ್ಕಾರಿ ಮೈದಾನಗಳು ಮತ್ತು ಸರ್ಕಾರಿ ವ್ಯಾಪ್ತಿಯ ಸಂಸ್ಥೆಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ತಮ್ಮ ಖಾಸಗಿ ಸ್ಥಳಗಳಲ್ಲಿ ಚಟುವಟಿಕೆ ನಡೆಸಿಕೊಳ್ಳಬಹುದು ಎನ್ನುವ ವಾದಕ್ಕೆ ತಮ್ಮ ಸಂಪೂರ್ಣ ಸಹಮತ ಇದೆ ಎಂದು ಅವರು ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಧೈರ್ಯ, ಸಂವಿಧಾನದ ನಂಬಿಕೆ ಮತ್ತು ರಾಷ್ಟ್ರಪರ ನಿಲುವಿಗೆ ತಮ್ಮ ಬೆಂಬಲ ಇದೆ. ನೋಂದಣಿ ಇಲ್ಲದ, ರಾಷ್ಟ್ರಧ್ವಜವನ್ನು ಒಪ್ಪದ ಸಂಘಟನೆ ಇಂದು ರಾಷ್ಟ್ರಭಕ್ತಿ ಪಾಠ ಮಾಡುತ್ತಿರುವುದು ವಿಪರ್ಯಾಸ. ಸಂವಿಧಾನ ಪ್ರೀತಿಸುವ ಪ್ರತಿಯೊಬ್ಬರೂ ಪ್ರಿಯಾಂಕ್ ಖರ್ಗೆಯವರ ಜೊತೆಯಲ್ಲಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















