ಬೆಳಗಾವಿ/ ರಾಯಬಾಗ : ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಬಲ ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಫೌಂಡೇಶನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ರಾಯಬಾಗ ಪಟ್ಟಣದ ಸ್ಥಳೀಯ ಕಚೇರಿಯಲ್ಲಿ 500 ಪ್ರತಿಭಾವಂತ ಉನ್ನತ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಬಸವರಾಜ ಮಹಾಸ್ವಾಮಿಗಳು ಆಶೀರ್ವಚನದಲ್ಲಿ ನೀಡುತ್ತಾ “ಶ್ರೀರಾಮ್ ಫೈನಾನ್ಸ್ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಕ್ತಿ ತುಂಬಿರುವುದು ಸಮಾಜ ಸೇವೆಯ ಮಾದರಿ ಕಾರ್ಯ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ದುಶ್ಚಟಗಳಿಂದ ದೂರವಿದ್ದು, ಶ್ರಮದ ಮೂಲಕ ತಂದೆ-ತಾಯಿ ಮತ್ತು ಸಮಾಜದ ಕೀರ್ತಿಗೆ ಪಾತ್ರರಾಗಬೇಕು” ಎಂದು ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾದೇವ ಸನ್ಮೂರೆ ತಾಲೂಕಾ ದಂಡಾಧಿಕಾರಿಗಳು ರಾಯಬಾಗ ,ವಿ. ಎಸ್ .ಚಂದರಗಿ , ಶ್ರೀ ಅಪ್ಪಾಸಾಬ ಕುಲಗೋಡೆ ಯವರು ಹಾಗೂ ಅಶೋಕ್ ಅಂಗಡಿ ಕರವೇ ಅಧ್ಯಕ್ಷರು ರಾಯಬಾಗ, ಸಂಸ್ಥೆಯ ಸಾಧನೆಯ ಕುರಿತು ಮಾತನಾಡಿದರು. “ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಪಯಣ 1974 ರಲ್ಲಿ ಶ್ರೀ ರಾಮ್ ಚಿಟ್ ಆಗಿ ಆರಂಭವಾಗಿ, 1979ರಲ್ಲಿ ‘ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿ ಲಿಮಿಟೆಡ್’ ಎಂಬ ಹೆಸರಿನಿಂದ ಗುರುತಿಸಿಕೊಂಡಿತು. 2022ರಲ್ಲಿ ಇದು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಗಿ ಪರಿವರ್ತನೆಗೊಂಡು ಇಂದು ದೇಶದ ಅಗ್ರಗಣ್ಯ ಗ್ರಾಹಕ ಆರ್ಥಿಕ ಸೇವಾ ಸಂಸ್ಥೆಯಾಗಿ ಬೆಳೆದಿದೆ.
ಈ ಸಂಸ್ಥೆಯನ್ನು ಗೌರವಾನ್ವಿತ ಆರ್. ತ್ಯಾಗರಾಜನ್ ಅವರು ಸ್ಥಾಪಿಸಿದ್ದು, ಅದರ ಸೇವೆ ಮತ್ತು ನಿಷ್ಠೆ ಎಲ್ಲರಿಗೂ ಪ್ರೇರಣೆಯಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ, ವಿನಯ್ ಚನ್ನಣ್ಣವರ, ಈರಣ್ಣ ದಡಿಬಾವಿ, ಫಕ್ರುದ್ದೀನ್ ಪಟಾನ್ ಮತ್ತು ಗುರುರಾಜ್ ತೆರದಾಳ, ಮಹಾವೀರ ಮಗಧುಮ್, ವಿರೂಪಾಕ್ಷ ಹಿರೇಮಠ್ ಹಾಗೂ ಕಿರಣ್ ಚಂದ್ರಕಕುಡೆ ಇತರರು ಭಾಗಿಯಾಗಿದ್ದರು. (ಶಾಖಾ ವ್ಯವಸ್ಥಾಪಕ ಪ್ರಕಾಶ್ ಕೋತ) (ಟಿ.ಪಿ.ಜಿ ವ್ಯವಸ್ಥಾಪಕರ ಅರುಣ ಬಾಗಿ) ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಷಕರು ಉತ್ಸಾಹದಿಂದ ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ ವಿತರಣೆ ಜೊತೆಗೆ ಸನ್ಮಾನ ಕಾರ್ಯಕ್ರಮ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಲಾಯಿತು.
- ಕರುನಾಡ ಕಂದ ಪತ್ರಿಕೆ



















