ಲ್
ತುಮಕೂರು/ ಪಾವಗಡ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲಲ್ಲೇ ಮನೆಗೆ ನುಗ್ಗಿದ ಆಗಂತುಕರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕಪಾಟಿನಲ್ಲಿದ್ದ ಸುಮಾರು 200 ಗ್ರಾಂ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ. ರೊಪ್ಪ ಗ್ರಾಮದ ಟೀಚರ್ಸ್ ಕಾಲೋನಿ ಮುಖ್ಯರಸ್ತೆಯಲ್ಲಿರುವ ನಿವೃತ್ತ ಶಿಕ್ಷಕ ಅಂತರಗಂಗೆ ಶಂಕರಪ್ಪ (68) ಎಂಬುವರ ಮನೆಯಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ,
ಘಟನೆ ನಡೆದ ಸಮಯದಲ್ಲಿ ಶಂಕರಪ್ಪ ಒಬ್ಬರೇ ಮನೆಯಲ್ಲಿದ್ದರು. ಅವರ ಪತ್ನಿ ಪುಷ್ಪಾವತಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಶಾಲೆಯಿಂದ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶಂಕರಪ್ಪನವರ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು, ಪ್ರಜ್ಞೆ ತಪ್ಪಿಬಿದ್ದಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ಯಲಾಗಿದೆ. ಪುಷ್ಪಾವತಿಯವರು ನೀಡಿದ ದೂರಿನ ಮೇರೆಗೆ ಮಧುಗಿರಿ ಡಿವೈಎಸ್ ಪಿ ಮಂಜುನಾಥ್, ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿ ಪೃಥ್ವಿರಾಜು ಜಿ. ವಿ




















