” ಬೆಳೆಯುವ ಸಿರಿ ಮೊಳಕೆಯಲ್ಲಿ ” ಎಂಬಂತೆ, ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತೆ. ನಾವು ಯಾವ ಬೀಜವನ್ನು ಬಿತ್ತುತ್ತೇವೆಯೋ, ಅದೇ ವೃಕ್ಷವಾಗಿ ಬೆಳೆಯುತ್ತದೆ. ಮಕ್ಕಳು ಕೇವಲ ನಮ್ಮ ಮನೆತನದ ಅಥವಾ ಕುಟುಂಬದ ಪ್ರತಿನಿಧಿಗಳಲ್ಲ, ಅವರು ನಮ್ಮ ಸಮಾಜದ ಭವಿಷ್ಯದ ಕನ್ನಡಿಗಳು.
ಹಿರಿಯರ ನಡವಳಿಕೆಗಳು, ಮಾತುಗಳು ಮತ್ತು ಜೀವನಶೈಲಿಯೇ ಮಕ್ಕಳು ಬೆಳೆಯುವ ವಾತಾವರಣ. ಆದುದರಿಂದ, ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರು ಮತ್ತು ಶಿಕ್ಷಕರ ಪ್ರಥಮ ಕರ್ತವ್ಯವಾಗಿದೆ.
ಮೌಲ್ಯಗಳು ಏಕೆ ಮುಖ್ಯ?
ಇಂದಿನ ತಂತ್ರಜ್ಞಾನ ಆಧಾರಿತ ಮತ್ತು ವೇಗದ ಜಗತ್ತಿನಲ್ಲಿ, ಮಕ್ಕಳು ಸುಲಭವಾಗಿ ಸತ್ಯ ಮತ್ತು ಅಸತ್ಯದ ನಡುವೆ ಗೊಂದಲಕ್ಕೊಳಗಾಗುತ್ತಾರೆ.
ಕೇವಲ ಹಣ ಮತ್ತು ಯಶಸ್ಸಿನ ಬೆನ್ನು ಹತ್ತದೆ, ಬದುಕಿನ ನೈಜ ಮೌಲ್ಯಗಳಾದ ಪ್ರೀತಿ, ದಯೆ, ಪ್ರಾಮಾಣಿಕತೆ, ಮತ್ತು ಸಹಾನುಭೂತಿಯನ್ನು ಅರಿತಾಗ ಮಾತ್ರ ಅವರು ಸದೃಢ ವ್ಯಕ್ತಿತ್ವ ಹೊಂದಲು ಸಾಧ್ಯ. ಮೌಲ್ಯಗಳು ಅವರಿಗೆ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತವೆ.
ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ವಿಧಾನಗಳು
1. ಸ್ವತಃ ನೀವೇ ಆದರ್ಶರಾಗಿರಿ (ರೋಲ್ ಮಾಡೆಲ್ ಆಗಿರಿ)
ಮಕ್ಕಳು ಯಾರ ಮಾತನ್ನೂ ಅಷ್ಟಾಗಿ ಕೇಳುವುದಿಲ್ಲ, ಆದರೆ ಎಲ್ಲವನ್ನೂ ಗಮನಿಸುತ್ತಾರೆ. ಪೋಷಕರಾಗಿ ನೀವು ಸುಳ್ಳು ಹೇಳುತ್ತಿದ್ದರೆ, ನಿಮ್ಮ ಮಗುವೂ ಅದನ್ನೇ ಕಲಿಯುತ್ತದೆ. ನೀವು ವೃದ್ಧಾಶ್ರಮ ಅಥವಾ ಅನಾಥಾಶ್ರಮಕ್ಕೆ ಭೇಟಿ ನೀಡಿ ಸಹಾಯ ಮಾಡುವ ಗುಣ ತೋರಿಸಿದರೆ, ಆ ಗುಣ ಮಗುವಿನಲ್ಲೂ ಬೆಳೆಯುತ್ತದೆ.
ನೀವು ನಿಮ್ಮ ಮನೆಯಲ್ಲಿ ಹಿರಿಯರಿಗೆ ಗೌರವ ನೀಡಿದರೆ, ಮಗು ಅದನ್ನು ಅನುಕರಿಸುತ್ತದೆ. ನಿಮ್ಮ ನಡವಳಿಕೆಯೇ ಮಕ್ಕಳಿಗೆ ಪ್ರಥಮ ಪಾಠ.
2. ಪ್ರಾಮಾಣಿಕತೆಯ ಪಾಠ
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸತ್ಯ ಹೇಳುವ ಮತ್ತು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಕಲಿಸಬೇಕು. ಸುಳ್ಳು ಹೇಳಿದಾಗ ಶಿಕ್ಷೆ ನೀಡುವುದಕ್ಕಿಂತ, ಸತ್ಯ ಹೇಳಿದಾಗ ಪ್ರೋತ್ಸಾಹಿಸಬೇಕು. ಇದರಿಂದ, ಅವರು ಕಷ್ಟದ ಸಮಯದಲ್ಲಿಯೂ ಪ್ರಾಮಾಣಿಕ ಮಾರ್ಗವನ್ನು ಆರಿಸಲು ಕಲಿಯುತ್ತಾರೆ.
3. ಸಹಾಯ ಮಾಡುವ ಮನೋಭಾವ
ಮಕ್ಕಳಿಗೆ ಕೇವಲ ತಮ್ಮ ಲೋಕವನ್ನು ಮೀರಿ ನೋಡಲು ಕಲಿಸಬೇಕು. ಹುಟ್ಟುಹಬ್ಬದಂತಹ ವಿಶೇಷ ದಿನಗಳಲ್ಲಿ ದುಬಾರಿ ಪಾರ್ಟಿಗಳನ್ನು ಮಾಡುವ ಬದಲು, ಅವರನ್ನು ವೃದ್ಧಾಶ್ರಮ ಅಥವಾ ಅಗತ್ಯವಿರುವವರ ಬಳಿಗೆ ಕರೆದುಕೊಂಡು ಹೋಗಿ. ಹಂಚಿ ತಿನ್ನುವ, ಇನ್ನೊಬ್ಬರಿಗೆ ಸಹಾಯ ಮಾಡುವ ಸುಖವು ಎಲ್ಲಕ್ಕಿಂತ ದೊಡ್ಡದು ಎಂದು ತಿಳಿಸಿ. ಬಡವರ ಜೀವನದ ವಾಸ್ತವಿಕ ಅರಿವು ಮೂಡಿಸುವುದರಿಂದ ಮನುಷ್ಯತ್ವ ಬೆಳೆಯುತ್ತದೆ.
4. ಕೃತಜ್ಞತೆ ಮತ್ತು ಗೌರವ
ತಮಗೆ ಸಿಕ್ಕಿರುವ ಸೌಲಭ್ಯಗಳ ಬಗ್ಗೆ ಕೃತಜ್ಞರಾಗಿರಲು ಕಲಿಸಿ. ಊಟ ಮಾಡುವ ಮೊದಲು ಅನ್ನದಾತನನ್ನು ನೆನಪಿಸುವುದು, ಶಿಕ್ಷಕರು, ಹಿರಿಯರು, ಮತ್ತು ಮನೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಗೌರವ ನೀಡುವುದು – ಇಂತಹ ಸಣ್ಣ ಸಂಗತಿಗಳು ಜೀವನದ ದೊಡ್ಡ ಮೌಲ್ಯಗಳಾಗಿ ಪರಿವರ್ತನೆಯಾಗುತ್ತವೆ.
5. ಸಾಮಾಜಿಕ ಜವಾಬ್ದಾರಿ
ಪರಿಸರ ಸ್ವಚ್ಛತೆ, ನೀರನ್ನು ಉಳಿಸುವುದು, ಪ್ರಾಣಿಗಳ ಬಗ್ಗೆ ದಯೆ ತೋರುವುದು – ಈ ಎಲ್ಲವೂ ಮೌಲ್ಯಗಳೇ. ತಮ್ಮ ಸುತ್ತಮುತ್ತಲಿನ ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿರಲು ಮಕ್ಕಳಿಗೆ ಕಲಿಸಿದರೆ, ಅವರು ಉತ್ತಮ ಪೌರರಾಗಿ ಬೆಳೆಯುತ್ತಾರೆ.
ಕೊನೆಯ ಮಾತು
ಮಕ್ಕಳು ನಮ್ಮ ಭರವಸೆ ಮತ್ತು ಹೂಡಿಕೆ. ನಾವು ಅವರಲ್ಲಿ ಉತ್ತಮ ಮೌಲ್ಯಗಳೆಂಬ ಬುನಾದಿಯನ್ನು ಹಾಕಿ ಬೆಳೆಸಿದರೆ, ನಾಳಿನ ಸಮಾಜವು ಸುಸಂಸ್ಕೃತ, ಮಾನವೀಯ ಮತ್ತು ಸದೃಢವಾಗಿರುತ್ತದೆ. ಮಕ್ಕಳು ನಮ್ಮ ಕನ್ನಡಿಗಳು – ಕನ್ನಡಿಯ ಪ್ರತಿಬಿಂಬ ಸುಂದರವಾಗಿರಬೇಕೆಂದರೆ, ಮೂಲ ಪ್ರತಿರೂಪವಾದ ನಾವು ಸರಿ ಇರಬೇಕು. ಆದುದರಿಂದ, ನಮ್ಮ ಜೀವನವನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳುತ್ತಾ, ನಮ್ಮ ಮಕ್ಕಳನ್ನೂ ಅದೇ ಹಾದಿಯಲ್ಲಿ ಕರೆದೊಯ್ಯೋಣ. ಈ ಮೂಲಕ ಈ ಮಕ್ಕಳ ದಿನಾಚರಣೆಗೆ ಮಕ್ಕಳಿಗೆ ಉಡುಗೊರೆ ನೀಡೋಣವೇ…..

- ಡಾ. ಡಿ. ಫ್ರಾನ್ಸಿಸ್ ,ಮಕ್ಕಳ ಸಾಹಿತಿಗಳು
ಹರಿಹರ, ದಾವಣಗೆರೆ ಜಿಲ್ಲೆ
9731395908.



















