
ಯಾದಗಿರಿ/ ಶಹಾಪುರ:
ತಾಲೂಕಿನ ಸುಕ್ಷೇತ್ರ ಸಗರ ಗ್ರಾಮದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಶಾಖಾ ನಾಗಠಾಣ ಹಿರೇಮಠದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಶ್ರೀ ಗುರು ಉದಯ ಮಹಾಂತೇಶ್ವರರ ಜಾತ್ರಾ ಮಹೋತ್ಸವ ಮತ್ತು ಶ್ರೀ ಷ|| ಬ್ರ|| ಸೋಮೇಶ್ವರ ಶಿವಾಚಾರ್ಯರ ಗುರು ಪಟ್ಟಾಧಿಕಾರ ದ್ವಾದಶ ವರ್ಧಂತಿ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನೆಯ ನಿಮಿತ್ತವಾಗಿ ಶ್ರೀ ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಭಕ್ತರ ಜೈಕಾರ ಮುನ್ನೂರಕ್ಕೂ ಅಧಿಕ ಮಹಿಳೆಯರ ಹೊತ್ತ ಕುಂಭದೊಂದಿಗೆ ಅದ್ದೂರಿಯಾಗಿ ಜರುಗಿತು.

ಅಡ್ಡಪಲ್ಲಕ್ಕಿ ಮಹೋತ್ಸವದ ನಂತರ ಶ್ರೀಮಠದ ಆವರಣದಲ್ಲಿ ವೇದಿಕೆ ಆಯೋಜಿಸಲಾಗಿತ್ತು, ಪ್ರವಚನ ರತ್ನ ವೇ. ಶ್ರೀ ಮಡಿವಾಳಯ್ಯ ಶಾಸ್ತ್ರಿಗಳು ಮಹಾದಾಸೋಹಿ ಶ್ರೀ ಕಲಬುರಗಿ ಶರಣಬಸವೇಶ್ವರ ಪುರಾಣಕ್ಕೆ ಮಂಗಳ ಹಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ದೇವಪುರ ಶ್ರೀಗಳು ಮಾತಾನಾಡಿ ರಂಭಾಪುರಿ ಶ್ರೀಗಳು ಇರುವ ಮಠಗಳ ಬೆಳೆಸಲಿಲ್ಲ ಬದಲಾಗಿ ಬಿದ್ದಿರುವ ಮಠಗಳನ್ನು ಬೆಳೆಸಿ ಧರ್ಮ ಸಂವರ್ಧನೆಯ ಮಾಡುವದರ ಮುಖಾಂತರ ವೀರಶೈವ ಧರ್ಮದ ಚಕ್ರವರ್ತಿಗಳಾಗಿದ್ದಾರೆ ಎಂದು ಹೇಳಿದರು.
ತದ ನಂತರ ರಂಭಾಪುರಿ ಪೀಠದ ಜಗದ್ಗುರುಗಳು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು, ಮಾನವ ಜನ್ಮ ಸಾರ್ಥಕತೆಗೆ ಪರೋಪಕಾರಿಯಾಗಿ ಬಾಳುವದನ್ನು ಕಲಿಯಬೇಕು, ದೇಶಾಭಿಮಾನ ಹಾಗೂ ಧರ್ಮಾಭಿಮಾನ ಪ್ರತಿಯೊಬ್ಬರಲ್ಲೂ ಬೆಳೆದು ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗಠಾಣ ಹಿರೇಮಠದ ಪರಮ ಪೂಜ್ಯರಾದ ಶ್ರೀ ಸೋಮೇಶ್ವರ ಶಿವಾಚಾರ್ಯರು, ಸೇರಿದಂತೆ ವಿವಿಧ ಮಠದ ಪೀಠಾಧಿಪತಿಗಳು, ಗವಾಯಿಗಳಾದ ವೀರಭದ್ರಪ್ಪ ಕಟ್ಟಿ ಸಂಗಾವಿ, ರಾಜಶೇಖರ ಕಟ್ಟಿ ಸಂಗಾವಿ, ಸುಬೇದಾರ್ ಕುಟುಂಬ, ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ಶ್ರೀಮಠದ ಸಹಸ್ರಾರು ಭಕ್ತರು, ಸ್ಥಳೀಯ ಹಿರಿಯರು, ಕಿರಿಯರು ಮಾತೆಯರು, ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















