
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿಯಲ್ಲಿ ಹಿಂಗಾರು ಪೈರುಗಳ ನಡುವೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ” ಹುಲ್ಲಲಿಗೋ ಚಲಾಂಮ್ರಿಗೋ ” ಎನ್ನುತ್ತಾ ಭೂಮಿ ತಾಯಿಗೆ ಚರಗ ಚಲ್ಲುವ ಮೂಲಕ ರೈತಾಪಿ ಕುಟುಂಬದವರು ಎಳ್ಳ ಅಮವಾಸ್ಯೆಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ರೈತರ ಮನೆಯಲ್ಲಿ ತಯಾರಿಸಿದ ಉಂಡಗಡಬು, ಪುಂಡಿ ಪಲ್ಯೆ, ಕುಚ್ಚಿದ ಮೆಣಸಿನಕಾಯಿ ಪಲ್ಲೆ, ಎಳ್ಳು ಹಚ್ಚಿದ ರೊಟ್ಟಿ, ಸಜ್ಜೆ, ಜೋಳದ ರೊಟ್ಟಿ ಸೇರಿದಂತೆ ನಾನಾ ಬಗೆಯ ಚಟ್ನಿ, ಮಡಿಕೆಕಾಳು, ಹೆಸರ ಕಾಳು, ಎಣ್ಣೆಗಾಯಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಮೊಸರು, ಕರಿದ ಕಡಬು, ಹಪ್ಪಳ, ಸಂಡಿಗೆ, ಮಿರ್ಚಿ, ಬಜ್ಜಿ, ಉಪ್ಪಿನಕಾಯಿ ಸೇರಿದಂತೆ ನಾನಾ ತರಹದ ಅಡುಗೆಗಳನ್ನು ಹಿಂದಿನ ದಿನ ರೈತಾಪಿ ಮಹಿಳೆಯರು ರಾತ್ರಿಯಲ್ಲಾ ತಯಾರಿಸಿ ದೊಡ್ಡ ಬುತ್ತಿ ಗಂಟು ಕಟ್ಟಿಕೊಂಡು ಕುಟುಂಬದವರು, ಸಂಬಂಧಿಕರು, ಊರಿನ ಹಿತೈಷಿಗಳನ್ನು, ಸ್ನೇಹಿತರನ್ನು ಹೊಲಕ್ಕೆ ಕರೆದೊಯ್ದು ಚರಗ ಚೆಲ್ಲಿದ ನಂತರ ಸಾಮೂಹಿಕವಾಗಿ ಕುಳಿತು ಊಟ ಸವಿದರು.
ನಂತರ ಹೊಲದ ತುಂಬೆಲ್ಲಾ ಸುತ್ತಾಡಿ ಬೆಳದ ಪೈರಿನ ಜೊತೆಗೆ ಸೆಲ್ಪಿ ಪೋಟೋ ಕ್ಲಿಕ್ಕಿಸಿ ಸಂತಸ ಅನುಭವಿಸಿದರು.
ಹಿರಿಯ ರೈತರಿಗೆ ಭೂಮಿ ಪೂಜೆ ಸಲ್ಲಿಸಿದ ಧನ್ಯತೆಯಾದರೆ, ಮಕ್ಕಳು ಕಡಲೆ ಗಿಡವನ್ನು ಕಿತ್ತುಕೊಂಡು ಕಡಲೆ ತಿಂದ ಸಂಭ್ರಮದಲ್ಲಿದ್ದರು.
ರೈತ ಮಹಿಳೆಯರು ಬಣ್ಣ ಬಣ್ಣದ ಸೀರೆ ಉಟ್ಟುಕೊಂಡು ತಂದೆ-ತಾಯಿ, ಅಣ್ಣ-ತಮ್ಮ, ಬೀಗರು-ಬಿಜ್ಜರು ಹಾಗೂ ಸ್ನೇಹಿತರನ್ನು ಕರೆದುಕೊಂಡು , ಎತ್ತು ಚಕ್ಕಡಿ, ಟ್ರ್ಯಾಕ್ಟರ್ ಗಳನ್ನು ಸಿಂಗರಿಸಿಕೊಂಡು ಹೊಲಕ್ಕೆ ಹೋಗುವ ಗ್ರಾಮೀಣ ಸೊಗಡು ಎಲ್ಲೆಡೆ ಎದ್ದು ಕಾಣುತಿತ್ತು.
ವರದಿ ನಿಂಗರಾಜ ತಾಳಿ




















