
ಯಾದಗಿರಿ/ಗುರುಮಠಕಲ್: ಡಿ.20 ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಇಂದು ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅಧಿಕಾರಿಗಳಿಂದ ಸೌಲಭ್ಯಗಳ ಮಾಹಿತಿ ಪಡೆದರು.
ಹತ್ತು ದಿನಗಳ ಹಿಂದೆ ಕಲುಷಿತ ನೀರು, ಆಹಾರ ಸೇವನೆಯಿಂದ ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಮಕ್ಕಳ ಆರೋಗ್ಯ ವಿಚಾರಿಸಿ ವಸತಿ ನಿಲಯದಲ್ಲಿನ ಸಮಸ್ಯೆಗಳ ಕುರಿತು ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು.
ಈ ವೇಳೆ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ‘ಶುಚಿ’ ಪ್ಯಾಡ್ ಕಳೆದ ಒಂದು ವರ್ಷದಿಂದ ಆರೋಗ್ಯ ಇಲಾಖೆಯಿಂದ ಸರಬರಾಜು ಆಗುತ್ತಿಲ್ಲ ಎಂದು ಮೇಲ್ವಿಚಾರಕಿ ಮಂಜುಳಾ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ನಾರಾಯಣಕರ್ ಮಾಹಿತಿ ನೀಡಿದರು.
ವಸತಿ ನಿಲಯದಲ್ಲಿ ಮೇಲ್ವಿಚಾರಕರು, ಕುಡಿಯುವ ನೀರು, ಶುಚಿಯಾದ ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ ಎಂದು ವಿದ್ಯಾರ್ಥಿನಿಯರು ಅಧಿಕಾರಿಗಳ ಮುಂದೆ ವಾಸ್ತವಂಶ ತಿಳಿಸಿದರು.
ವಸತಿ ನಿಲಯದ ವ್ಯವಸ್ಥೆ, ಅಡುಗೆ ಕೋಣೆ, ಹಾಸಿಗೆ, ವಸತಿ ಕೋಣೆಗಳು, ಶೌಚಾಲಯ, ಆರ್ಒ ಘಟಕ, ಮಕ್ಕಳ ಹಾಜರಾತಿ, ಬಯೋಮೆಟ್ರಿಕ್ ವ್ಯವಸ್ಥೆ, ಅಡುಗೆ, ಉಪಹಾರ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಸಮಸ್ಯೆಗಳಿದ್ದರೆ ಸಹಾಯವಾಣಿ 1098 ಕರೆಮಾಡಿ ತಕ್ಷಣ ತಿಳಿಸಲು ಶಶಿಧರ್ ಕೊಸಂಬೆ ಸಲಹೆ ನೀಡಿದರು.
ಡಿಡಿಪಿಐ ಚನ್ನಬಸಪ್ಪ ಮುಧೋಳ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಭೀಮರಾಯ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂತೋಷರೆಡ್ಡಿ, ಬಿಇಒ ವೀರಪ್ಪ ಕನ್ನಳ್ಳಿ, ಸಿಡಿಪಿಒ ಶರಣಬಸವ, ಇಸಿಒ ರವೀಂದ್ರ ಚವಾಣ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















