ಬಳ್ಳಾರಿ / ಕಂಪ್ಲಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಪಾಲಿಗೆ ವರವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ಕಂಪ್ಲಿ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಸ್ವಸಹಾಯಕ ಸಂಘದ ಸಬಲೀಕರಣವಾಗಿದೆ. ಬಡವರ ಹಾಗೂ ನೊಂದವರ ಕಣ್ಣೀರು ವರೆಸುವ ಕಾರ್ಯಕ್ರಮವಾಗಿದೆ. ಕೋಟ್ಯಾಂತರ ಜನರು ಸ್ವಸಹಾಯಕ ಸಂಘದ ಪಾಲುದಾರರಾಗಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡುವುದರ ಜತೆಗೆ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಂಜೀವಿನಿಯಾಗಿದೆ’ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಎಚ್. ಸಿ. ರಾಘವೇಂದ್ರ ಇವರು ಮಹಿಳೆ ಮತ್ತು ಮಕ್ಕಳಿಗೆ ಇರುವ ಕಾನೂನುಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಶಿವಾನಿ ಮಹಿಳಾ ವಿಕಾಸ ಜ್ಞಾನ ಕೇಂದ್ರದ ಅಧ್ಯಕ್ಷೆ ನಿರ್ಮಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು. ಕರಕುಶಲ ಪ್ರದರ್ಶನ ಪ್ರದರ್ಶಿಸಲಾಯಿತು. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಎಲ್, ಪಿಎಸ್ಐ ಅವಿನಾಶ ಕಾಂಬ್ಳೆ, ಎಎಸ್ಐ ಬಸವರಾಜ, ಪತ್ರಕರ್ತರಾದ ಕುರುಗೋಡು ವಾಗೀಶ್, ಬಳ್ಳಾರಿ ವಿರೇಶ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ. ಶಾರದಾ ಹಿರೇಮಠ, ಸಪ್ತಗಿರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ವೆಂಕಟೇಶ ಸಿ.ಭರಮಕ್ಕನವರ್, ಪುರಸಭೆ ಮಾಜಿ ಸದಸ್ಯ ರಾಮಾಂಜನೇಯ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಉಮಾ ಮಹೇಶ್ವರಿ, ಧರ್ಮಸ್ಥಳ ಸಂಘದ ರೇಖಾ, ಸಂಜೀವಕುಮಾರ ಸೇರಿದಂತೆ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















