(ಬುದ್ಧ ಬಸವ ಅಂಬೇಡ್ಕರ್ ಓಶೋ ಅವರ ವಿಚಾರಗಳಿಂದ ಪ್ರೇರಣೆ ಪಡೆದ ವೈಚಾರಿಕ ಕಥೆ)
ಮಾನವ ಇತಿಹಾಸದ ಹಾದಿಯಲ್ಲಿ ಧರ್ಮ ಮತ್ತು ದೇವರು ಎಂಬ ಪರಿಕಲ್ಪನೆಗಳು ಮನುಷ್ಯನಿಗೆ ಸಾಂತ್ವನ ನೀಡುವ ಬದಲು, ಹೆಚ್ಚಾಗಿ ಭಯ ಮತ್ತು ಗುಲಾಮಗಿರಿಯ ಸಂಕೋಲೆಗಳನ್ನೇ ತೊಡಿಸಿವೆ. ನಾವು ಸೃಷ್ಟಿಸಿಕೊಂಡ ದೇವರು ನಮ್ಮ ಅಹಂಕಾರದ ಪ್ರತಿಬಿಂಬವಾದರೆ, ನಾವು ನಂಬಿರುವ ಧರ್ಮವು ಅಂಧಶ್ರದ್ಧೆಯ ವ್ಯಾಪಾರವಾಗಿ ಮಾರ್ಪಟ್ಟಿದೆ.
’ಮುಕ್ತಿ’ ಕಥೆಯು ಕೇವಲ ಒಂದು ಸಂಘರ್ಷದ ಕಥೆಯಲ್ಲ; ಇದು ಮನುಷ್ಯ ತನ್ನೊಳಗಿನ ಪಾರತಂತ್ರ್ಯದಿಂದ ಬಿಡುಗಡೆ ಹೊಂದುವ ಹಾದಿ. ಓಶೋ ಅವರ ಕ್ರಾಂತಿಕಾರಕ ವಿಚಾರಧಾರೆಗಳಿಂದ ಪ್ರೇರಿತವಾದ ಈ ಕಥೆ, ದೇವರ ಹೆಸರಿನಲ್ಲಿ ನಡೆಯುವ ಮಾನಸಿಕ ಹಿಪ್ನಾಟಿಸಂ ಅನ್ನು ಪ್ರಶ್ನಿಸುತ್ತದೆ. ಇಲ್ಲಿ ಸಿದ್ಧಾರ್ಥ ಎಂಬ ಪಾತ್ರವು ನಮ್ಮೊಳಗಿನ ಸುಪ್ತ ಪ್ರಜ್ಞೆಯ ಧ್ವನಿಯಾಗಿ ಮೂಡಿಬಂದಿದೆ.
ಆಕಾಶದ ಕಡೆಗೆ ಕೈಚಾಚಿ ಬೇಡುವ ದೈನ್ಯತೆಯಿಂದ, ತನ್ನೊಳಗೆ ತಾನು ಬೆಳಕಾಗುವ (ಅಪ್ಪ ದೀಪೋ ಭವ) ಸ್ವಾತಂತ್ರ್ಯದ ಕಡೆಗಿನ ಪಯಣವೇ ಈ ಕಥೆಯ ಸಾರ… ಇದನ್ನು ಒಂದು ಸಲ ಓದಿ.
ಅದು ದೇವಸ್ಥಾನ!
ಭಕ್ತರೆಲ್ಲರೂ ಭಯದಿಂದ ಕೈಮುಗಿದು ನಿಂತಿದ್ದಾರೆ. ಸಿದ್ಧಾರ್ಥನು ಗರ್ಭಗುಡಿಯ ಮುಂದೆ ನಿಂತು ಪ್ರತಿಮೆಯನ್ನು ದಿಟ್ಟಿಸಿ ನೋಡುತ್ತಿದ್ದಾನೆ.
ಗುರುದೇವ ಗಟ್ಟಿಯಾದ ಧ್ವನಿಯಲ್ಲಿ –
“ಸಿದ್ಧಾರ್ಥ! ಭಕ್ತಿಯಿಂದ ತಲೆ ತಗ್ಗಿಸಿ ನಿಲ್ಲು. ದೇವರ ಎದುರು ನಿನ್ನ ತರ್ಕ ನಡೆಯದು. ನೀನು ಪಾಪಿ, ನಿನ್ನ ಜನ್ಮವೇ ಅಶುದ್ಧ. ಶರಣಾಗತಿಯೊಂದೇ ನಿನಗೆ ದಾರಿ!”
ಸಿದ್ಧಾರ್ಥ ಶಾಂತವಾಗಿ –
“ಗುರುದೇವ, ನಾನು ಅಶುದ್ಧ ಎನ್ನುವುದಾದರೆ ನನ್ನನ್ನು ಸೃಷ್ಟಿಸಿದ ನಿಮ್ಮ ದೇವರು ಶುದ್ಧನಾಗಿರಲು ಹೇಗೆ ಸಾಧ್ಯ? ಸೃಷ್ಟಿಕರ್ತನ ಗುಣ ಸೃಷ್ಟಿಯಲ್ಲೂ ಇರಬೇಕಲ್ಲವೇ?”
”ಬಾಯಿ ಮುಚ್ಚು! ಆಕಾಶದಲ್ಲಿ ಕುಳಿತು ನಮ್ಮ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ಆ ಪರಮಾತ್ಮನ ಮರ್ಜಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು. ನೀನು ಕೇವಲ ಒಂದು ಗೊಂಬೆ ಅಷ್ಟೆ.”
”ಹಾಗಿದ್ದರೆ ಈ ಜಗತ್ತಿನಲ್ಲಿ ನಡೆಯುತ್ತಿರುವ ಹಸಿವು, ಅತ್ಯಾಚಾರ, ಅನ್ಯಾಯಗಳೆಲ್ಲವೂ ಆ ದೇವರ ಮರ್ಜಿಯೇ? ಒಬ್ಬ ಮನುಷ್ಯ ಇನ್ನೊಬ್ಬನನ್ನು ಕೊಲ್ಲುವುದು ದೇವರ ಇಚ್ಛೆಯಾದರೆ, ಆ ಕೊಲೆಗಾರನಿಗೆ ಶಿಕ್ಷೆ ಏಕೆ? ದೇವರ ಹೆಸರಿಗೆ ಎಫ್ಐಆರ್ ದಾಖಲಿಸಬಾರದೇ?”
”ಇದು ಅಹಂಕಾರ! ನಿನಗೆ ನರಕದ ಭಯವಿಲ್ಲವೇ? ಅಲ್ಲಿ ಕುದಿಯುವ ಎಣ್ಣೆಯ ಕೊಪ್ಪರಿಗೆಗಳು ನಿನಗಾಗಿ ಕಾಯುತ್ತಿವೆ. ಕ್ಷಮೆ ಕೇಳು, ಇಲ್ಲದಿದ್ದರೆ ದೇವಸ್ಥಾನದಿಂದ ಹೊರಹಾಕುವೆ!”
”ನೋಡಿ ಗೆಳೆಯರೇ, ಇವರು ದೇವಸ್ಥಾನ ಕಟ್ಟಿಲ್ಲ, ಒಂದು ದೊಡ್ಡ ವ್ಯಾಪಾರ ಮಳಿಗೆಯನ್ನು ನಡೆಸುತ್ತಿದ್ದಾರೆ. ಇಲ್ಲಿ ದೇವರು ‘ವಸ್ತು’, ಭಯವೇ ‘ಬಂಡವಾಳ’. ನೀವು ತೆಂಗಿನಕಾಯಿ ನೀಡುವುದು ಭಕ್ತಿಯಿಂದಲ್ಲ, ಲಂಚದ ರೂಪದಲ್ಲಿ. ನಿಮ್ಮ ಮಗ ಪಾಸಾಗಲು, ನಿಮ್ಮ ವ್ಯಾಪಾರ ವೃದ್ಧಿಯಾಗಲು ದೇವರಿಗೆ ಲಂಚ ನೀಡಲು ಇಲ್ಲಿಗೆ ಬರುತ್ತೀರಿ. ದೇವರು ನಿಮ್ಮ ಲಂಚಕ್ಕೆ ಕಾಯುವ ಭ್ರಷ್ಟ ಅಧಿಕಾರಿಯೇ?”
”ಜನರ ಧರ್ಮದ ಶ್ರದ್ಧೆಯನ್ನು ಕೆಡಿಸಬೇಡ! ನಿನಗೆ ದೇವರೇ ಇಲ್ಲವೆಂದು ವಾದಿಸುವ ಹಕ್ಕು ಕೊಟ್ಟವರು ಯಾರು?”
”ನಾನು ದೇವರು ಇಲ್ಲ ಎಂದು ಹೇಳುತ್ತಿಲ್ಲ ಗುರುದೇವ. ನಿಮ್ಮ ಕಲ್ಪನೆಯ ‘ಆಕಾಶದ ಡ್ಯಾಡಿ’ ಇಲ್ಲ ಎಂದು ಹೇಳುತ್ತಿದ್ದೇನೆ. ಅಸ್ತಿತ್ವ ಎಂಬುದು ಒಂದು ಶಕ್ತಿ. ಅದಕ್ಕೆ ಹೆಸರಿಲ್ಲ, ರೂಪವಿಲ್ಲ. ಧ್ಯಾನದ ಮೂಲಕ ನಮ್ಮೊಳಗಿನ ಪ್ರಜ್ಞೆಯನ್ನು ಎಚ್ಚರಿಸಿಕೊಂಡಾಗ ನಾವೇ ಪರಮಾತ್ಮರಾಗುತ್ತೇವೆ.”
”ನಾವು ಪರಮಾತ್ಮನಾಗಲು ಸಾಧ್ಯವೇ ಇಲ್ಲ! ನಾವು ಅವನ ಗುಲಾಮರು!”
”ಅಲ್ಲೇ ನೀವು ತಪ್ಪು ಮಾಡುತ್ತಿರುವುದು. ಬೀಜವು ಒಡೆದಾಗ ಮಾತ್ರ ಮರವಾಗಲು ಸಾಧ್ಯ. ಹಾಗೆಯೇ ನಮ್ಮ ಅಹಂಕಾರ ಮತ್ತು ಈ ಸುಳ್ಳು ದೇವರ ಕಲ್ಪನೆ ಎಂಬ ಕವಚ ಒಡೆದಾಗ ಮಾತ್ರ ನಾವೂ ಸತ್ಯವನ್ನು ಕಾಣಬಲ್ಲೆವು. ‘ಅಪ್ಪ ದೀಪೋ ಭವ’ – ನಮಗೆ ನಾವೇ ಬೆಳಕಾಗಬೇಕು. ಕಲ್ಲುಗಳಲ್ಲಿ ದೇವರನ್ನು ಹುಡುಕುವ ಬದಲು, ಕಣ್ಣೀರು ಸುರಿಸುತ್ತಿರುವ ಮನುಷ್ಯರಲ್ಲಿ ದೇವರನ್ನು ಕಾಣೋಣ. ಭಯದ ಧರ್ಮ ನಮಗೆ ಬೇಡ, ಆನಂದದ ಮತ್ತು ಸಂಭ್ರಮದ ಧರ್ಮ ನಮಗೆ ಬೇಕು.”
”ಹಾಗಾದರೆ ನೀನು ಒಬ್ಬ ನಾಸ್ತಿಕನಾ?”
”ಅಲ್ಲ ಗುರುದೇವ. ಆಸ್ತಿಕ ಮತ್ತು ನಾಸ್ತಿಕ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ತಿಳಿಯದೇ ನಂಬುತ್ತಾರೆ. ನಾನೊಬ್ಬ ‘ಅನ್ವೇಷಕ’. ನಾನು ಸತ್ಯವನ್ನು ತಿಳಿಯಬಯಸುತ್ತೇನೆ. ಸತ್ಯವು ಅಪಾಯಕಾರಿಯಾಗಿರಬಹುದು, ಆದರೆ ಅದು ನಮ್ಮನ್ನು ಮುಕ್ತಗೊಳಿಸುತ್ತದೆ.”
ಸಿದ್ಧಾರ್ಥ ದೇವಸ್ಥಾನದಿಂದ ಹೊರಬರುತ್ತಿದ್ದಾನೆ.
ಅವನ ಮುಖದಲ್ಲಿ ಭಯವಿಲ್ಲ, ಬದಲಾಗಿ ಸೂರ್ಯನ ಪ್ರಕಾಶದಂತಹ ಶಾಂತಿಯಿದೆ.
ಕೆಲವು ಜನರು ದೇವಸ್ಥಾನದ ಒಳಗೆ ಹೋಗುವುದನ್ನು ನಿಲ್ಲಿಸಿ, ತಮ್ಮ ಕೈಲಿದ್ದ ಹೂವುಗಳನ್ನು ಪಕ್ಕದಲ್ಲಿದ್ದ ಹಸಿದ ಮಗುವಿಗೆ ನೀಡುತ್ತಾ ಸಿದ್ಧಾರ್ಥನ ಹಿಂದೆ ಹೆಜ್ಜೆ ಹಾಕಿದರು.
ಸಿದ್ಧಾರ್ಥ ದೇವಸ್ಥಾನದ ಮೆಟ್ಟಿಲು ಇಳಿಯುತ್ತಿದ್ದಂತೆ, ಜನರ ಗುಂಪಿನಿಂದ ಒಬ್ಬ ವೃದ್ಧ ವ್ಯಕ್ತಿ ನಡುಗುವ ಧ್ವನಿಯಲ್ಲಿ ಕೂಗಿದನು –
“ನಿಲ್ಲು ಮಗನೇ! ನೀನು ಹೇಳುತ್ತಿರುವುದು ಕೇಳಲು ಚೆನ್ನಾಗಿದೆ. ಆದರೆ, ನೂರಾರು ವರ್ಷಗಳಿಂದ ನಮ್ಮ ತಂದೆ-ತಾಯಂದಿರು ಈ ದೇವರನ್ನು ನಂಬುತ್ತಾ ಬಂದಿದ್ದಾರೆ. ಈ ವಿಗ್ರಹವನ್ನು ನಂಬದಿದ್ದರೆ ನಮಗೆ ದಾರಿ ತೋರಿಸುವವರು ಯಾರು? ಈ ಒಂಟಿ ಜಗತ್ತಿನಲ್ಲಿ ನಮಗೆ ಆಸರೆ ಬೇಡವೇ?”
ಸಿದ್ಧಾರ್ಥ ವೃದ್ಧನ ಬಳಿ ಬಂದು ಅವರ ಕೈ ಹಿಡಿದು –
“ಅಜ್ಜ, ನಿಮ್ಮ ತಂದೆ-ತಾಯಂದಿರು ನೀಡಿದ್ದು ನಿಮಗೆ ಮಾರ್ಗದರ್ಶನವಲ್ಲ, ಅದು ಕೇವಲ ಒಂದು ‘ಬೆತ್ತ’. ಕಾಲಿಲ್ಲದವನಿಗೆ ಬೆತ್ತ ಬೇಕು ನಿಜ. ಆದರೆ ನಿಮಗೆ ಕಾಲುಗಳಿವೆ ಎಂದು ಮರೆಸುವುದೇ ಈ ಪುರೋಹಿತರ ಕೆಲಸ. ನಿಮ್ಮ ಅಂತರಂಗದ ಶಕ್ತಿಯನ್ನು ನೀವು ನಂಬದಂತೆ ಮಾಡುವುದೇ ಇವರ ತಂತ್ರ. ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಒಬ್ಬ ‘ಕಾಲ್ಪನಿಕ ದೇವ’ ಬೇಕಿಲ್ಲ, ಬದಲಾಗಿ ನಿಮ್ಮೊಳಗಿನ ‘ಅರಿವು’ ಬೇಕು” ಎಂದು ಹೇಳಿದನು.
ಗುರುದೇವನಿಗೆ ಪರಿಸ್ಥಿತಿ ಕೈಮೀರುತ್ತಿರುವುದು ಅರ್ಥವಾಯಿತು.
ಅವನು ಜನರನ್ನು ಪ್ರಚೋದಿಸಲು ಮುಂದಾದನು.
ಗುರುದೇವ –
“ನೋಡಿ ಇವನ ಸೊಕ್ಕನ್ನು! ನಮ್ಮ ಶಾಸ್ತ್ರಗಳನ್ನು, ವೇದಗಳನ್ನು ಸುಳ್ಳು ಎನ್ನುತ್ತಿದ್ದಾನೆ. ಇವನಿಗೆ ಶಾಸ್ತ್ರದ ಜ್ಞಾನವಿದೆಯೇ? ಶಾಸ್ತ್ರ ಹೇಳುತ್ತದೆ – ಈ ಜಗತ್ತು ಮಾಯೆ, ದೇವರು ಮಾತ್ರ ಸತ್ಯ!”
ಸಿದ್ಧಾರ್ಥ ತಕ್ಷಣ ತಿರುಗಿ –
“ಶಾಸ್ತ್ರಗಳು ಕೇವಲ ನಕ್ಷೆಗಳು ಗುರುದೇವ. ನಕ್ಷೆಯನ್ನು ನೋಡಿ ಊರು ಸೇರಿದ ಹಾಗಲ್ಲ. ನೀವು ನಕ್ಷೆಯನ್ನೇ ಊರು ಎಂದು ನಂಬಿ ಕುಳಿತಿದ್ದೀರಿ. ಜಗತ್ತು ಮಾಯೆಯಾದರೆ, ನೀವು ದೇವಸ್ಥಾನದ ಹುಂಡಿಗೆ ಹಾಕುವ ಹಣವೂ ಮಾಯೆಯಲ್ಲವೇ? ಅದನ್ನು ಯಾಕೆ ಸಂಗ್ರಹಿಸುತ್ತೀರಿ? ಅಸಲಿ ಸತ್ಯವೇನೆಂದರೆ, ಧರ್ಮ ಎಂಬುದು ವ್ಯಾಪಾರವಲ್ಲ, ಅದೊಂದು ಜೀವನ ಕಲೆ. ನೀವು ನರಕದ ನಕ್ಷೆ ತೋರಿಸಿ ಜನರನ್ನು ಬೆದರಿಸುತ್ತಿದ್ದೀರಿ. ಬಿಸಿ ಎಣ್ಣೆಯ ಕೊಪ್ಪರಿಗೆಯ ಕಥೆ ಹೇಳುವ ನೀವು ಸಾಡಿಸ್ಟ್ ಗಳಂತೆ ವರ್ತಿಸುತ್ತಿದ್ದೀರಿ!”
ಅಷ್ಟರಲ್ಲಿ ಗುಂಪಿನಲ್ಲಿದ್ದ ಯುವತಿಯೊಬ್ಬಳು ಧೈರ್ಯ ಮಾಡಿ ಕೇಳಿದಳು –
“ಸಿದ್ಧಾರ್ಥ, ನೀನು ಹೇಳುವಂತೆ ನಾವು ಪಾಪಿಗಳಲ್ಲದಿದ್ದರೆ, ಈ ಬದುಕಿನ ನೋವುಗಳಿಗೆ ಕಾರಣವೇನು? ನಾವು ಯಾರನ್ನು ಪ್ರಾರ್ಥಿಸಬೇಕು?”
“ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿ, ಗಮನಿಸುವುದನ್ನು ಕಲಿಯಿರಿ. ಪ್ರಾರ್ಥನೆಯಲ್ಲಿ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತೀರಿ, ಆದರೆ ಧ್ಯಾನದಲ್ಲಿ ನೀವು ಸತ್ಯವನ್ನು ಕೇಳಿಸಿಕೊಳ್ಳುತ್ತೀರಿ. ನೀವು ರೇಡಿಯೋ ಸ್ಟೇಷನ್ನಂತೆ ನಿಮ್ಮ ಮನಸ್ಸನ್ನು ಅಸ್ತಿತ್ವದ ಕಂಪನಕ್ಕೆ ಹೊಂದಿಸಬೇಕು. ಅಸ್ತಿತ್ವವು ಮನುಷ್ಯನಲ್ಲ, ಅದು ಹೂವಿನ ಸುಗಂಧದಂತೆ, ಹರಿಯುವ ನದಿಯಂತೆ. ನೀವು ನಿಮ್ಮ ‘ಅಹಂಕಾರ’ ಎಂಬ ಗೋಡೆಯನ್ನು ಕೆಡವಿದರೆ, ನೀವೇ ಆ ಮಹಾನ್ ಚೇತನವಾಗುತ್ತೀರಿ. ಅಂದು ನೀವು ಬೇಡುವವರಾಗುವುದಿಲ್ಲ, ನೀಡುವವರಾಗುತ್ತೀರಿ”ಎಂದು ಸಿದ್ದಾರ್ಥ ಹೇಳಿದನು.
ಅದಕ್ಕೆ ಗುರುದೇವ ರೊಚ್ಚಿಗೆದ್ದು –
“ಇವನನ್ನು ಇಲ್ಲಿಂದ ಹೊರದಬ್ಬಿ! ಇವನು ಅಧರ್ಮದ ಹಾದಿ ಹಿಡಿದಿದ್ದಾನೆ!” ಎಂದು ಕೂಗಿದನು.
ಆದರೆ ಅಲ್ಲಿ ಚಿತ್ರ ವಿಚಿತ್ರ ಘಟನೆ ನಡೆಯಿತು.
ಜನರು ಸಿದ್ಧಾರ್ಥನ ಮೇಲೆರಗುವ ಬದಲು, ಒಬ್ಬೊಬ್ಬರಾಗಿ ತಮ್ಮ ಕೈಯಲ್ಲಿದ್ದ ಪೂಜಾ ತಟ್ಟೆಗಳನ್ನು ಕೆಳಗಿಡಲಾರಂಭಿಸಿದರು.
“ಧರ್ಮ ಎಂದರೆ ದೇವಸ್ಥಾನದ ಪ್ರದಕ್ಷಿಣೆ ಮಾಡುವುದಲ್ಲ, ನಿಮ್ಮ ಅಹಂಕಾರದ ಪ್ರದಕ್ಷಿಣೆ ನಿಲ್ಲಿಸಿ ನಿಮ್ಮ ಕೇಂದ್ರಕ್ಕೆ ಮರಳುವುದು. ಸತ್ತ ಮೇಲೆ ಸ್ವರ್ಗ ಸಿಗುತ್ತದೆ ಎಂದು ಕಾಯುವವರು ಮೂರ್ಖರು. ಜೀವನ ಇರುವುದು ಈ ಕ್ಷಣದಲ್ಲಿ. ಇಲ್ಲಿ ನಗಲು ಸಾಧ್ಯವಾಗದವನು ಸತ್ತ ಮೇಲೆ ಅಪ್ಸರೆಯರ ಜೊತೆ ನಗುತ್ತಾನೆ ಎನ್ನುವುದು ಎಷ್ಟು ದೊಡ್ಡ ಹಿಪ್ನಾಟಿಸಂ ? ಎಚ್ಚರಗೊಳ್ಳಿ! ಈ ಬಂಧನವನ್ನು ಮುರಿಯಿರಿ. ನಾನು ನಿಮಗೆ ಹೊಸ ದೇವರನ್ನು ನೀಡುವುದಿಲ್ಲ. ಬದಲಾಗಿ ನಿಮ್ಮ ಕೈಯಲ್ಲಿದ್ದ ಸುಳ್ಳು ದೇವರ ಬೆತ್ತವನ್ನು ಕಿತ್ತುಕೊಳ್ಳುತ್ತಿದ್ದೇನೆ. ನೀವು ಬೀಳಬಹುದು, ಪರವಾಗಿಲ್ಲ. ಬಿದ್ದ ಮೇಲೆ ಎದ್ದು ನಿಂತಾಗ ಮಾತ್ರ ನಿಮಗೆ ಸ್ವಂತ ಕಾಲಿನ ಬೆಲೆ ತಿಳಿಯುತ್ತದೆ. ಅಂದು ನೀವು ಕುರಿಗಳಾಗಿರುವುದಿಲ್ಲ, ಸಿಂಹಗಳಾಗುತ್ತೀರಿ!”ಎಂದು ಹೇಳಿದನು ಸಿದ್ದಾರ್ಥ.
ಸೂರ್ಯ ಮುಳುಗುತ್ತಿದ್ದಾನೆ.
ದೇವಸ್ಥಾನದ ಗಂಟೆ ಸದ್ದು ಮಾಡುತ್ತಿದೆ!
ಆದರೆ ಅದರಲ್ಲಿ ಮುಂಚಿನ ಭಯವಿಲ್ಲ.
ಸಿದ್ಧಾರ್ಥ ಒಬ್ಬನೇ ಕಾಡಿನ ಹಾದಿ ಹಿಡಿದ್ದಾನೆ.
ಅವನ ಹಿಂದೆ ಯಾರೂ ಇಲ್ಲ!
ಆದರೆ ಅವನ ಮಾತುಗಳು ಆ ಊರಿನ ಪ್ರತಿ ಮನೆಯ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿವೆ.
ಗುರುದೇವ ಶೂನ್ಯ ದೃಷ್ಟಿಯಿಂದ ಖಾಲಿಯಾಗುತ್ತಿರುವ ದೇವಸ್ಥಾನವನ್ನು ನೋಡುತ್ತಿದ್ದಾನೆ.
ಅವನಿಗೆ ಮೊದಲ ಬಾರಿಗೆ ಅರ್ಥವಾಯಿತು – ದೇವಸ್ಥಾನದ ಕಲ್ಲು ವಿಗ್ರಹಕ್ಕಿಂತ ಸಿದ್ಧಾರ್ಥನ ಮೌನ ಹೆಚ್ಚು ಶಕ್ತಿಯುತವಾಗಿದೆ ಎಂದು.
ಅದು ಕಾಡು!
ಅಲ್ಲಿ ನದಿ ಹರಿಯುತ್ತಿದೆ.
ಸಿದ್ಧಾರ್ಥ ಕಾಡಿನ ನದಿಯ ದಂಡೆಯ ಮೇಲೆ ಮೌನವಾಗಿ ಕುಳಿತಿದ್ದಾನೆ.
ಸಿದ್ದಾರ್ಥ ಅತ್ತೆ ಕಡೆ ನೋಡಿದನು.
ದೂರದಿಂದ ನೂರಾರು ಪಂಜುಗಳ ಬೆಳಕು ಮತ್ತು ಆಕ್ರೋಶದ ಧ್ವನಿ ಕೇಳಿಸಿತು.
ಊರಿನ ಜನರು ಮತ್ತು ರಾಜನ ಸೈನಿಕರು ಗುರುದೇವನ ನೇತೃತ್ವದಲ್ಲಿ ಅಲ್ಲಿಗೆ ಬಂದಿದ್ದಾರೆ.
ಗುರುದೇವ ಅಟ್ಟಹಾಸದಿಂದ –
“ಸಿದ್ಧಾರ್ಥ! ನಿನ್ನ ನಾಸ್ತಿಕವಾದದ ವಿಷ ಊರನ್ನೆಲ್ಲ ಹರಡುತ್ತಿದೆ. ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ, ಹರಕೆಗಳನ್ನು ಮರೆತಿದ್ದಾರೆ. ರಾಜಧರ್ಮದ ಪ್ರಕಾರ, ದೇವರ ಅಸ್ತಿತ್ವವನ್ನು ಪ್ರಶ್ನಿಸುವುದು ದೇಶದ್ರೋಹಕ್ಕೆ ಸಮ! ಈಗಲೂ ಕಾಲ ಮಿಂಚಿಲ್ಲ, ಆಕಾಶದ ಕಡೆಗೆ ಕೈ ಎತ್ತಿ ಕ್ಷಮೆ ಕೇಳು, ಇಲ್ಲವೇ ಈ ನದಿಯಲ್ಲೇ ನಿನ್ನ ಅಂತ್ಯವಾಗಲಿ!”
ಜನರು ಸಿದ್ಧಾರ್ಥನನ್ನು ಕಲ್ಲುಗಳಿಂದ ಹೊಡೆಯಲು ಸಿದ್ಧರಾಗಿ ನಿಂತಿದ್ದಾರೆ.
ಸಿದ್ಧಾರ್ಥ ನಿಧಾನವಾಗಿ ಎದ್ದು ನಿಂತು ನಕ್ಕನು.
”ಗುರುದೇವ, ನೀವು ನನ್ನನ್ನು ಕೊಲ್ಲಬಹುದು. ಆದರೆ ನಾನು ಸತ್ತರೆ ನಿಮಗೆ ದೊಡ್ಡ ನಷ್ಟವಾಗುತ್ತದೆ. ಗೊತ್ತೇ?”
ಗುರುದೇವ ಗಲಿಬಿಲಿಯಾಗಿ –
“ಏನು? ನಿನ್ನ ಸಾವಿನಿಂದ ನಮಗೆ ನಷ್ಟವೇ? ಉಲ್ಟಾ, ನಮಗೆ ನೆಮ್ಮದಿ ಸಿಗುತ್ತದೆ!”
ಸಿದ್ಧಾರ್ಥ –
“ತಪ್ಪು. ನೀವು ಸೃಷ್ಟಿಸಿರುವ ಈ ಸುಳ್ಳು ದೇವರಿಗೆ ನಾನು ಅತ್ಯಂತ ಅಗತ್ಯವಾದ ವ್ಯಕ್ತಿ. ಏಕೆಂದರೆ, ನನ್ನಂತಹ ‘ಶತ್ರು’ ಅಥವಾ ‘ಪಾಪದ ಕಲ್ಪನೆ’ ಇಲ್ಲದಿದ್ದರೆ ನಿಮ್ಮ ದೇವರಿಗೆ ಬೆಲೆಯೇ ಇರುವುದಿಲ್ಲ. ಕತ್ತಲೆ ಇಲ್ಲದಿದ್ದರೆ ಬೆಳಕಿನ ವ್ಯಾಪಾರ ಹೇಗೆ ಮಾಡುತ್ತೀರಿ? ನನ್ನನ್ನು ಕೊಂದರೆ, ನೀವು ನಿಮ್ಮ ಭಯದ ವ್ಯಾಪಾರಕ್ಕೆ ಒಬ್ಬ ದೊಡ್ಡ ಸವಾಲನ್ನು ಕಳೆದುಕೊಳ್ಳುತ್ತೀರಿ. ಆಗ ಜನರಿಗೆ ತಿಳಿಯುತ್ತದೆ-ಕೊಲ್ಲುವುದು ದೇವರಲ್ಲ, ದೇವರ ಹೆಸರಿನಲ್ಲಿರುವ ಅಹಂಕಾರ ಎಂದು!”
ಜನರ ಕೈಯಲ್ಲಿದ್ದ ಕಲ್ಲುಗಳು ಸಡಿಲವಾದವು.
ಸಿದ್ಧಾರ್ಥ ಮುಂದುವರಿದನು –
”ನೋಡಿ, ಗುರುದೇವ ಹೇಳುತ್ತಿದ್ದಾರೆ ‘ಆಕಾಶದ ಕಡೆಗೆ ಕೈ ಎತ್ತಿ ಕ್ಷಮೆ ಕೇಳು’ ಎಂದು. ಆದರೆ ಆಕಾಶ ಖಾಲಿಯಿದೆ! ನಕ್ಷತ್ರಗಳ ಆಚೆಗೂ ಅನಂತವಾದ ಶೂನ್ಯವಿದೆ. ನೀವು ಕ್ಷಮೆ ಕೇಳಬೇಕಿರುವುದು ಆಕಾಶಕ್ಕಲ್ಲ, ಭೂಮಿಗೆ! ನೀವು ತುಳಿಯುತ್ತಿರುವ ಈ ಮಣ್ಣಿಗೆ, ನೀವು ಕಡೆಗಣಿಸಿದ ನಿಮ್ಮೊಳಗಿನ ಮನುಷ್ಯತ್ವಕ್ಕೆ. ಇಷ್ಟು ದಿನ ದೇವರಿಗಾಗಿ ಬದುಕಿದ್ದೀರಿ, ಇಂದಿನಿಂದ ನಿಮಗಾಗಿ ಬದುಕುವುದು ಯಾವಾಗ?”ಎಂದು ಕೇಳಿದಾಗ, ಆ ಊರಿನ ಅತ್ಯಂತ ಶ್ರೀಮಂತ ವರ್ತಕನೊಬ್ಬ ಮುಂದೆ ಬಂದು –
“ಸಿದ್ಧಾರ್ಥ, ನಾನು ದೇವರಿಗಾಗಿ ಕೋಟಿಗಟ್ಟಲೆ ದಾನ ಮಾಡಿದ್ದೇನೆ. ಈಗ ನೀನು ಹೇಳುವಂತೆ ದೇವರು ಇಲ್ಲದಿದ್ದರೆ, ನನ್ನ ಆ ಹಣವೆಲ್ಲ ವ್ಯರ್ಥವೇ? ನನ್ನ ಪುಣ್ಯದ ಕಥೆಯೇನು?”
ಸಿದ್ಧಾರ್ಥ ಅವನ ಕಣ್ಣಲ್ಲಿ ಕಣ್ಣಿಟ್ಟು –
“ಪುಣ್ಯ ಎಂಬುದು ಬ್ಯಾಂಕ್ ಬ್ಯಾಲೆನ್ಸ್ ಅಲ್ಲ ವರ್ತಕನೇ. ನೀವು ದೇವರಿಗೆ ನೀಡಿದ್ದು ‘ಲಂಚ’, ದಾನವಲ್ಲ. ನಿಜವಾದ ದಾನವು ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. ನೀವು ಸ್ವರ್ಗದಲ್ಲಿ ಸೀಟು ಬುಕ್ ಮಾಡಲು ಹಣ ನೀಡಿದ್ದೀರಿ. ಆ ಸ್ವರ್ಗವೇ ಇಲ್ಲದ ಮೇಲೆ ನಿಮ್ಮ ಟಿಕೆಟ್ ಕೇವಲ ಕಾಗದದ ಚೂರು! ಆ ಹಣದಿಂದ ಹಸಿದ ಹೊಟ್ಟೆಗಳಿಗೆ ಅನ್ನ ನೀಡಿದ್ದರೆ, ಅದು ಪ್ರಾರ್ಥನೆಯಾಗುತ್ತಿತ್ತು. ಈಗ ಹೇಳಿ, ನಿಮ್ಮ ದೇವರು ದಯಾಮಯಿಯೋ ಅಥವಾ ನಿಮ್ಮ ಹಣಕ್ಕೆ ಕಾಯುವ ಆಸೆಬುರುಕನೋ?” ಎಂದು ಕೇಳಿದಾಗ
ವರ್ತಕ ತಲೆ ತಗ್ಗಿಸಿದನು.
ಸೈನಿಕರ ಕೈಯಲ್ಲಿದ್ದ ಆಯುಧಗಳು ಕೆಳಬಿದ್ದವು.
ಅಷ್ಟರಲ್ಲಿ ಗುರುದೇವ ತಾನೇ ಕತ್ತಿಯೊಂದನ್ನು ಹಿಡಿದು ಸಿದ್ಧಾರ್ಥನ ಕಡೆಗೆ ನುಗ್ಗಿದನು.
ಸಿದ್ಧಾರ್ಥ ಪಕ್ಕಕ್ಕೆ ಸರಿಯಲಿಲ್ಲ, ಕಣ್ಣು ಮುಚ್ಚಲಿಲ್ಲ. ಆದರೆ ಗುರುದೇವ ಸಿದ್ಧಾರ್ಥನ ಸನಿಹಕ್ಕೆ ಬಂದಾಗ, ಸಿದ್ಧಾರ್ಥನ ಕಣ್ಣುಗಳಲ್ಲಿ ಕಂಡದ್ದು ಕ್ರೋಧವಲ್ಲ, ಬದಲಾಗಿ ಅಪಾರವಾದ ಕರುಣೆ.
ಸಿದ್ಧಾರ್ಥ ಮೆಲ್ಲನೆ ಹೇಳಿದನು –
“ಗುರುದೇವ, ನನಗಾಗಿ ನೀವು ಅಳಬೇಡಿ. ನಿಮ್ಮ ದೇವರಿಗಾಗಿ ಅಳಿ. ಏಕೆಂದರೆ ಇಂದು ನಿಮ್ಮ ದೇವರು ಮರಣ ಹೊಂದಿದ್ದಾನೆ. ಅವನನ್ನು ರಕ್ಷಿಸಲು ನೀವು ಶಸ್ತ್ರ ಹಿಡಿಯಬೇಕಾಯಿತು ಅಂದರೇ ಆ ದೇವರು ಎಷ್ಟು ಅಸಹಾಯಕನಿರಬಹುದು? ಸೃಷ್ಟಿಕರ್ತನನ್ನು ಸೃಷ್ಟಿಯೇ ರಕ್ಷಿಸಬೇಕೇ?”
ಗುರುದೇವನ ಕೈಯಲ್ಲಿದ್ದ ಕತ್ತಿ ಕೆಳಗೆ ಬಿದ್ದಿತು.
ಅವನಿಗೆ ಜ್ಞಾನೋದಯವಾದ ಕ್ಷಣವದು.
ಅವನು ಸಿದ್ಧಾರ್ಥನ ಪಾದಕ್ಕೆ ಬೀಳಲು ಹೋದಾಗ, ಸಿದ್ಧಾರ್ಥ ಅವನನ್ನು ತಡೆದು ನಿಲ್ಲಿಸಿದನು.
”ಯಾರ ಪಾದಕ್ಕೂ ಬೀಳಬೇಡಿ. ಮೇಲೆ ಏಳಿ. ಮೊದಲು ಮನುಷ್ಯರಾಗಿ. ಇಲ್ಲಿ ಯಾರೂ ಗುಲಾಮರಲ್ಲ, ಯಾರೂ ಮಾಲೀಕರಲ್ಲ. ಈ ಇಡೀ ಬ್ರಹ್ಮಾಂಡದ ಶಕ್ತಿ ನಿಮ್ಮ ಉಸಿರಾಟದಲ್ಲಿದೆ. ದೇವಸ್ಥಾನದ ಬಾಗಿಲು ಮುಚ್ಚಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಅಲ್ಲಿ ಸತ್ಯವಿದೆ”ಎಂದು ಹೇಳಿದನು ಸಿದ್ದಾರ್ಥ.
ಅದು ದೇವಸ್ಥಾನ!
ರಾತ್ರಿ ಹೊತ್ತಿನ ಸಮಯ.
ಊರಿನ ಆ ದೇವಸ್ಥಾನದಲ್ಲಿ… ಅಂದಿನಿಂದ ಅಲ್ಲಿ ಈಗ ದೀಪಗಳು ಉರಿಯುತ್ತಿಲ್ಲ.
ಅಲ್ಲಿ…ಆ ದೇವಸ್ಥಾನದಲ್ಲಿ ದೇವರಿಲ್ಲ!
ಸ್ವಾರ್ಥ ಸಾಧನೆಗಾಗಿ ಗುರು ದೇವ ಸೃಷ್ಟಿಸಿದ ದೇವರು ಈಗ ಸತ್ತಿದ್ದಾನೆ.
ಜನರು ಈಗ ಮುಕ್ತಿಯ ಮಾರ್ಗದಲ್ಲಿ ಸಾಗಿದ್ದಾರೆ.
ಪ್ರತಿ ಮನೆಯ ಅಂಗಳದಲ್ಲಿ ಜನರು ಒಟ್ಟಾಗಿ ಕುಳಿತು ನಗುತ್ತಿದ್ದಾರೆ, ಹಾಡುತ್ತಿದ್ದಾರೆ.
ಅಲ್ಲಿ ಭಯವಿಲ್ಲ!
ಲಂಚದ ಪ್ರಾರ್ಥನೆ ಈಗ ಅಲ್ಲಿಲ್ಲ…!
ಸಿದ್ಧಾರ್ಥ ನದಿಯ ಹರಿವಿನಲ್ಲಿ ಮಾಯವಾಗಿದ್ದಾನೆ. ಅವನು ಹೋಗುವ ಮುನ್ನ ಮರಳಿನ ಮೇಲೆ ಒಂದು ವಾಕ್ಯ ಬರೆದಿದ್ದಾನೆ –
“ದೇವರು ಸತ್ತಾಗ ಮಾತ್ರ ಮನುಷ್ಯ ಜನ್ಮ ತಾಳುತ್ತಾನೆ.”
- ಜಿ. ಎಲ್. ನಾಗೇಶ್




















