ಕಂಪ್ಲಿ: ಇತ್ತೀಚೆಗೆ ಹೈದರಾಬಾದಿನ ಗಚ್ಚಿಬೋಲಿ ಸ್ಟೇಡಿಯಂನಲ್ಲಿ ಭಾರತ ಆರ್ಟ್ಸ್ ಅಕಾಡೆಮಿ ಹಾಗೂ ತೆಲಂಗಾಣ ಸರ್ಕಾರದ ಸಂಯುಕ್ತಾಶ್ರಯದಲ್ಲಿ ನಡೆದ ಕೂಚುಪುಡಿ ಕಲಾವೈಭವಂ-2ರಲ್ಲಿ 5800 ಕೂಚುಪುಡಿ ಕಲಾವಿದರೊಂದಿಗೆ ಭಾಗವಹಿಸಿದ ಕಂಪ್ಲಿ ಪಟ್ಟಣದ ಕಮ್ಮವಾರಿ ಸಂಘದ ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಖುಷಿ ವಿರಾಜ್, ಇಷಿತಾ ಹಾಗೂ ವಂದನಾ ಗಿನ್ನಿಸ್ ವಿಶ್ವ ದಾಖಲೆ ಪುಟವನ್ನು ಸೇರುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ನೆನಪಿನ ಕಾಣಿಕೆಗಳನ್ನು ನೀಡಿ ಮಾತನಾಡಿದ ಶಾಲೆಯ ಅಧ್ಯಕ್ಷರಾದ ಕೆ.ಎಸ್.ಎಸ್.ವಿ.ಬಿ. ಸುಬ್ಬರಾವು ಬದುಕಿನಲ್ಲಿ ಗುರಿ ಅತ್ಯಂತ ಅವಶ್ಯಕವಾಗಿದೆ. ಮುಂದೆ ಗುರಿ, ಹಿಂದೆ ಗುರು ಇದ್ದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಇಂತಹ ಅಪರೂಪದ ಸಾಧನೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಮಾಡಿರುವುದು ನಮ್ಮ ಶಾಲೆಗೆ, ತಾಲ್ಲೂಕಿಗೆ, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ನಂತರ ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದ ವಿದ್ಯಾರ್ಥಿಗಳು ಖುಷಿ ವಿರಾಜ್, ಇಷಿತಾ ಮತ್ತು ವಂದನಾ ಅವರನ್ನು ಶಾಲೆಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ವಿಷ್ಣು, ಕಮ್ಮವಾರಿ ಸಂಘದ ಕಾರ್ಯದರ್ಶಿ ಪಿ.ರಾಮಚಂದ್ರರಾವು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















