
ಗುರುಮಠಕಲ್: ಜ. 07 ತಾಲ್ಲೂಕಿನ ಹಲವು ಸರ್ಕಾರಿ ಕಚೇರಿಗಳ ಕಾರ್ಯಪದ್ಧತಿ ಮತ್ತು ಸ್ವಚ್ಛತೆಯ ಕುರಿತು ಲೋಕಾಯುಕ್ತ ನ್ಯಾಯಾಧೀಶ ನ್ಯಾ. ರಮಾಕಾಂತ ಚವ್ಹಾಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸುಧಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಅವರು ಪಟ್ಟಣದ ಪ್ರಮುಖ ಕಚೇರಿಗಳಾದ ಪುರಸಭೆ, ತಾಪಂ, ತಹಶೀಲ್ದಾರ್, ಬಸ್ ನಿಲ್ದಾಣ, ಅಂಗನವಾಡಿ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದರು.
ಕಚೇರಿಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳ ಕುರಿತಾದ ಹಾಗೂ ಲೋಕಾಯುಕ್ತ ದೂರು ನೀಡಲು ಉಪಯೋಗಕರ ಮಾಹಿತಿ ಸೂಚನಾ ಫಲಕಗಳೂ ಸರಿಯಾಗಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆಯ ವಾಣಿಜ್ಯ ಮಳಿಗೆಗಳ ಮರು ಟೆಂಡರ್ ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವಧಿ ಮುಗಿದ ಮಳಿಗೆಗಳಿಗೆ ಮರು ಟೆಂಡರ್ ಕರೆದು ಆದಷ್ಟು ಬೇಗ ವರದಿ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಶರಣಪ್ಪ ಮಾಡಿವಾಳರವರಿಗೆ ಲೋಕಾಯುಕ್ತ ತಾಕೀತು ಮಾಡಿದರು.
ತಾಲ್ಲೂಕು ಪಂಚಾಯಿತಿ ದಾಖಲೆ ನಿರ್ವಹಣೆ, ಸಕಾಲ ಮಾಹಿತಿ ಫಲಕ ಇಲ್ಲದಿರುವದು ಹಾಗೂ ಹಾಜರಾತಿ ನಿರ್ವಹಣೆಯಲ್ಲಿನ ಲೋಪದೋಷಗಳ ಬಗ್ಗೆ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.
“ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಅಗತ್ಯ ದಾಖಲೆಗಳನ್ನು ಸರಿಯಾಗಿ ಸಂಗ್ರಹಿಸಿ, ಮಾಹಿತಿ ಫಲಕಗಳನ್ನು ಕೂಡಲೇ ಅಳವಡಿಸಿ,” ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಪಿಡಿಓ ಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಎನ್ನುವ ದೂರುಗಳ ಕುರಿತು ತಾ ಪಂ ಯೋಜನಾಧಿಕಾರಿ ಅಂಬರೀಷ ಪಾಟೀಲರವರಿಗೆ ಈ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಶೀಘ್ರ ವರದಿ ನೀಡಬೇಕೆಂದು ಲೋಕಾಯುಕ್ತ ನ್ಯಾಯಾಧೀಶರು ಸೂಚಿಸಿದರು.
ತಹಶೀಲ್ದಾರ್ ಕಚೇರಿಗೆ ಬರುವ ಮಾರ್ಗ ಸರಿ ಪಡಿಸಲು, ಕಂದಾಯ ಸಿಬ್ಬಂದಿಯ ಡಿಜಿಟಲ್ ಪಾವತಿ (ಫೋನ್ಪೇ ಮುಂತಾದ) ಮಾಹಿತಿಯನ್ನೂ ವಿವರಿಸಲು ಸೂಚಿಸಿದರು. “ವರದಿ ಸಲ್ಲಿಸದಿದ್ದರೆ ನೊಟೀಸ್ ನೀಡಲಾಗುವುದು” ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ರಮಾಕಾಂತ ಚೌವ್ಹಾಣ್ ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರ ಸರಬರಾಜು ಹಾಗೂ ಮೊಟ್ಟೆ ವಿತರಣೆ ಕುರಿತು ಮಾಹಿತಿ ಪಡೆದರು. ಸ್ವಚ್ಛತೆ ಕುರಿತು ಹೆಚ್ಚಿನ ಗಮನ ನೀಡಲು ಸೂಚನೆ ನೀಡಿದರು.
ಬಸ್ ನಿಲ್ದಾಣದಲ್ಲಿನ ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆ, ಕಸದ ತೊಟ್ಟಿ ವಿಚಾರವಾಗಿ ಗಂಭೀರವಾಗಿ ಬಸ್ ಘಟಕ ವ್ಯವಸ್ಥಾಪಕರಿಗೆ ಮಾಹಿತಿ ಕೇಳಿ ನೊಟೀಸ್ ನೀಡಲಾಗುವುದು,” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಜೆ.ಎಚ್.ಇನಾಮದಾರ, ಮಲ್ಲಿಕಾರ್ಜುನ ಚುಕ್ಕಿ, ಇನ್ಸ್ಪೆಕ್ಟರ್ಗಳಾದ ಉಮಾಮಹೇಶ, ಭೀಮನಗೌಡ ಬಿರಾದರ, ಪ್ರದೀಪ, ಮಲ್ಲಿಕಾರ್ಜುನ, ಧನರಾಜ, ಶರಭಣ್ಣ, ಮಲ್ಲಿಕಾರ್ಜುನ ಶ್ರೀಮಧಿ, ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಾಲಪ್ಪ ತಲಾರಿ, ನಾಗೇಶ್ ಗದ್ದಗಿ, ಶ್ರೀಕಾಂತ್ ತಲಾರಿ, ಸಂಜು ಅಳೆಗಾರ, ಇನ್ನಿತರರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















