
ಕಂಪ್ಲಿ: ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣ ಹೊಂದಿದಾಗ ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯ ಎಂದು ನಿವೃತ್ತ ಮುಖ್ಯಶಿಕ್ಷಕಿ ಡಾ.ಅಕ್ಕಮಹಾದೇವಿ ಹೇಳಿದರು.
ಸ್ಥಳೀಯ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಕಂಪ್ಲಿ ತಾಲೂಕು ಬಣಜಿಗ ಮಹಿಳಾ ಸಂಘದಿಂದ ಹಮ್ಮಿಕೊಂಡಿದ್ದ ಎರಡು ದಿನದ ಬಣಜಿಗರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ನಂತರ ಉಪನ್ಯಾಸ ನೀಡಿ ಮಾತನಾಡಿ, ಮಹಿಳೆಯರು ಸಬಲೀಕರಣ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿಯೆ ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳಾ ಸಂಘಟನೆಯ ಮೂಲಕ ಮಹಿಳೆಯರು ಆತ್ಮವಿಶ್ವಾಸದ ಮೂಲಕ ಸ್ವಯಂ ಉದ್ಯೋಗವನ್ನು ಮೆಗೂಡಿಸಿಕೊಳ್ಳಬೇಕು. ಆಗ ಮಾತ್ರ ಮಹಿಳೆಯರಲ್ಲಿರುವ ಅಂಜಿಕೆ, ಹಿಂಜರಿಕೆ, ಮನೋಭಾವ ದೂರವಾಗಿ ಆತ್ಮಸ್ಥೆರ್ಯ ಹೊಂದಲು ಸಾಧ್ಯ ಎಂದು ತಿಳಿಸಿದರು.
ಮಹಿಳಾ ಸಂಘದ ಅಧ್ಯಕ್ಷೆ ಚೈತ್ರಾ ಗಡಾದ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಮುಖೇನ ಸಮಾಜದ ಮುಖ್ಯವಾಹಿನಿಗೆ ಕರೆತರಲಾಗುತ್ತಿದೆ. ಶಿಕ್ಷಣದ ಜೊತೆಗೆ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಕೊಂಡು ಸಾಗಿದರೆ ಜೀವನ ಉತ್ತಮವಾಗಿರುತ್ತದೆ ಎಂದರು.
ಇಂದಿನ ಸಾಂಪ್ರದಾಯಿಕ ಉಡುಪು ಸ್ಪರ್ಧೆಯಲ್ಲಿ ಸೌಮ್ಯ ವಾಲಿ(ಪ್ರಥಮ), ಸುನಿತಾ ಬೂದಗುಂಪಿ, ಲತಾ ಕೋರಿ (ದ್ವಿತೀಯ), ರೂಪಾ ಪಾಟೀಲ್ (ತೃತೀಯ) ವಿಜೇತರಾಗಿ ಬಹುಮಾನ ಪಡೆದರು. ಮೊದಲ ದಿನದಂದು ನಡೆದ ವರ್ಣರಂಜಿತ ರಂಗೋಲಿ ಸ್ವರ್ಧೆಯಲ್ಲಿ ಟಿ.ಲಕ್ಷ್ಮಿದೇವಿ (ಪ್ರಥಮ), ಚೈತ್ರಾ ತೆಂಗಿನಕಾಯಿ (ದ್ವಿತೀಯ), ರಶ್ಮಿ ಕಲ್ಗುಡಿ (ತೃತೀಯ) ಇವರು ಬಹುಮಾನ ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಾಲಿ ಶಕುಂತಲಾ, ವಿಜಯಲಕ್ಷ್ಮಿ ಮರಿಶೆಟ್ರು, ಅನ್ನಪೂರ್ಣ, ಮಮತಾ ಕಾಕುಬಾಳು, ವಿನೂತ ಉಗಾದಿ, ಕೊಟ್ರಮ್ಮ ಅಯ್ಯನಗೌಡ, ಶರಣಮ್ಮ ಕೋರಿ, ಬೂದಗುಂಪಿ ಪಾರ್ವತಮ್ಮ, ಶಾಂತಮ್ಮ, ಟಿ.ಈರಮ್ಮ, ಎಂ.ಸುಧಾ, ಪಿ.ಸೌಮ್ಯ, ಪ್ರಸಾದ್ ಗಡಾದ್, ಸುರೇಶಗೌಡ, ಯುಗಾದಿ ಶಿವರಾಜ, ಬೂದಗುಂಪಿ ಶಿವಾನಂದ, ಕೋರಿ ಸಣ್ಣ ಶರಣಪ್ಪ, ಹೆಚ್.ಎಸ್.ವಿರೇಶ, ತೆಂಗಿನಕಾಯಿ ಸಂತೋಷ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















