ಬೆಳಗಾವಿ/ ಬೈಲಹೊಂಗಲ: ಮಲಪ್ರಭೆ ಕೇವಲ ಜಲವಲ್ಲ ಲಕ್ಷಾಂತರ ಜನತೆಯ ದಾಹ ನೀಗಿಸುವ ದೇವತೆ, ಜಲ ತೀರ್ಥವಾಗಿದ್ದು ಸದಾ ಅವಳ ಮಡಿಲನ್ನು ನೈರ್ಮಲ್ಯತೆಯಿಂದ ಕಾಪಾಡಿ ಪ್ರಕೃತಿಯ ಋಣ ತೀರಿಸೋಣ ಎಂದು ಜಾಲಿಕೊಪ್ಪದ ಅಲೌಕಿಕ ಪುಣ್ಯಾಶ್ರಮದ ಪೂಜ್ಯ ಶಿವಾನಂದ ಗುರೂಜಿ ಹೇಳಿದರು.
ಸಮೀಪದ ಜಾಲಿಕೊಪ್ಪ ಸಮೀಪದ ಮಲಪ್ರಭಾ ದಡದಲ್ಲಿ ಆಶ್ರಮದ ಭಕ್ತಮಂಡಳಿ, ಗಣಾಚಾರಿ ಶಿಕ್ಷಣ ಸಂಸ್ಥೆಯ ಎನ್ ಎಸ್.ಎಸ್. ಘಟಕದ ಸಹಯೋಗದಲ್ಲಿ ರವಿವಾರದಂದು ಪ್ರತಿ ವರ್ಷದಂತೆ ಮಲಪ್ರಭಾ ನದಿ ನೈರ್ಮಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಲಪ್ರಭಾ ನದಿಯ ಜಲದಿಂದ ಜನ, ಜಾನುವಾರು, ಕೃಷಿಕರಿಗೆ, ಪಶುಪಕ್ಷಿಗಳಿಗೆ ಜೀವ ಜಂತುಗಳ ಜೀವನಕ್ಕೆ ಆಧಾರ ಸ್ತಂಭವಾಗಿದ್ದು ಅದನ್ನು ಕೇವಲ ನೀರು ಎಂದು ಭಾವಿಸದೆ ಪಾವನ ತೀರ್ಥರೂಪದಲ್ಲಿ ನೋಡಿದಾಗ ನಮ್ಮ ಜೀವನ ಸಾರ್ಥಕವಾಗಲಿದೆ.
ಇಂತಹ ಪಾವನ ನದಿಗೆ ಮನೆಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ಎಸೆಯುವುದು, ಪುಣ್ಯದಿನದಂದು ಸ್ನಾನ ಮಾಡಿ ಶಾಂಪೂ, ಸೋಪು, ಉಟ್ಟ ಬಟ್ಟೆ ಬರೆಗಳನ್ನು ನದಿಯಲ್ಲಿ ಬಿಡುವುದರಿಂದ ಯಾವ ಪುಣ್ಯವೂ ದೊರೆಯದು, ನದಿಯ ಜಲತೀರ್ಥವನ್ನು ಕಲುಷಿತಗೊಳಿಸುವುದರಿಂದ ಜಲಚರ ಪ್ರಾಣಿ ಪಕ್ಷಿಗಳ ಕರ್ಮ ನಿಮ್ಮನ್ನೇ ತಿನ್ನುತ್ತದೆ. ಯಾವುದೇ ತೀರ್ಥಕ್ಷೇತ್ರಕ್ಕೆ ತೆರಳುವ ಮುಂಚೆ ಸ್ವಚ್ಛ ಪರಿಶುದ್ದ ಮನಸ್ಸಿನಿಂದ ಹೋಗಬೇಕು. ಅಲ್ಲಿಯ ಪರಿಸರವನ್ನು ನಿರ್ಮಲದಿಂದಿಡಬೇಕು, ನಿಸರ್ಗದಲ್ಲಿ ಮಾಲಿನ್ಯ ಮಾಡಿದರೆ ಯಾವ ಫಲವೂ ದೊರೆಯುವುದಿಲ್ಲ. ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಂದನ್ನು ಪ್ಲಾಸ್ಟಿಕ್ ಗಳಲ್ಲಿ ಪ್ಯಾಕ್ ಮಾಡಲಾಗುತ್ತಿದೆ. ಸೇವಿಸುವ ಆಹಾರ, ನೀರು ಉಡುಗೆ, ತೊಡುಗೆ ಜೊತೆಗೆ ದಿನ ಉಪಯೋಗಿ ವಸ್ತುಗಳನ್ನು ಕೊಂಡೊಯ್ಯಲು ಬಳಸುವ ಪ್ಲಾಸ್ಟಿಕ್ ದಿಂದ ಪ್ರತಿ ದಿನ ಸಾವಿರಾರು ಟನ್ ಪ್ಲಾಸ್ಟಿಕ್ ನದಿಗಳಿಗೆ ಸೇರಿಸಿ ಪರಿಸರ ನಾಶ ಮಾಡುತ್ತಿರುವ ಮಾನವನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎಂದಿಗೂ ಉತ್ತಮವಾಗಿರಲಾರದು ಎಂದರು.
ನ್ಯಾಯವಾದಿ ಎಫ್. ಎಸ್. ಸಿದ್ದನಗೌಡರ ಮಾತನಾಡಿ, ಜನರಲ್ಲಿ ಸಾಕ್ಷರತೆ ಹೆಚ್ಚಾದಂತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಭಾರತದ ಭವ್ಯ ಸಂಸ್ಕಾರವನ್ನು ಬಿಟ್ಟು ಆಡಂಬರದ ಜೀವನ ಮತ್ತು ಮೂಢ ನಂಬಿಕೆಗಳಿಗೆ ಒಳಗಾಗಿ ನದಿ ನೀರನ್ನು ಮಾಲಿನ್ಯಗೊಳಿಸಿ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಳ್ಳುತಿದ್ದೇವೆ ನಮ್ಮ ಮುಂದಿನ ಪೀಳಿಗೆಗೆ ಯಾವ ಐಶ್ವರ್ಯ ಕೊಟ್ಟು ಹೋಗದೆ ಇದ್ದ ಪರಿಸರವನ್ನು ಇದ್ದ ಹಾಗೇ ಕೊಟ್ಟು ಹೋಗೋಣ ಪರಿಸರದಲ್ಲಿ ಮಾಲಿನ್ಯ ಮಾಡದೆ ಅದರ ಸ್ವಚ್ಛತೆಗೆ ಮೊದಲ ಆದ್ಯತೆ ಇರಲಿ. ಜನರಲ್ಲಿ ಪರಿಸರ ಸ್ವಚ್ಚತಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶಿವಾನಂದ ಸ್ವಾಮಿಜಿಗಳ ಕಾರ್ಯ ಶ್ಲಾಘನೀಯ ಎಂದರು.
ರೈತನಾಯಕ ಮಹಾಂತೇಶ ಕಮತ್ ಹಿರಿಯರಾದ ಮಲ್ಲಪ್ಪ ಮುರಗೋಡ ಮಾತನಾಡಿ, ರಸ್ತೆ, ನದಿ, ಬೆಟ್ಟ ಗುಡ್ಡಗಳು ನಮ್ಮೆಲ್ಲರ ಆಸ್ತಿ ಇವಗಳ ರಕ್ಷಣೆ ನಮ್ಮ ಹೊಣೆ. ನಮ್ಮ ಸ್ವಾರ್ಥ ಸಾಧನೆಗೆ ನೀರು, ಮಣ್ಣು ಮತ್ತು ವಾತಾವರಣ ಹಾಳು ಮಾಡದೆ ಸ್ವಚ್ಚತೆ ಕಾಪಾಡಿಕೊಂಡು ಹೋಗೋಣ ಎಂದರು.
ಗಣಾಚಾರಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಎನ್.ಎಸ್.ಎಸ್.ಘಟಕದ ಮೇಲ್ವಿಚಾರಕ ಪ್ರೋ. ಮಲ್ಲಿಕಾರ್ಜುನ ಪೆಂಟೆದ, ಪ್ರೋ. ಹಳಿಗೌಡರ, ಪ್ರೋ ವಿ.ಡಿ.ಮಾಕಾರ, ಪ್ರೋ ಎಸ್.ವ್ಹಿ.ಹಿರೆಮಠ, ಪ್ರೋ.ಎಮ್.ಆಯ್.ಕದ್ರೋಳ್ಳಿ, ನ್ಯಾಯವಾದಿ ಸಿದ್ದಲಿಂಗ ಬೋಳಶೆಟ್ಟಿ,
ಪ್ರೋ.ಎ.ಎ. ಕೊನ್ನೂರ ಪಿ.ಎಮ್.ಬೊಳಣ್ಣವರ. ಎ.ಪಿ.ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು, ಕೃಷಿಕರು ಹಾಗೂ ಮಠದ ಭಕ್ತವೃಂದ ನದಿಪಾತ್ರದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಮಂಜು .ಎಂ. ಚಿಕ್ಕಣ್ಣವರ




















