ಕಂಪ್ಲಿ : ತಾಲೂಕಿನ ಸಣಾಪುರ ಗ್ರಾ. ಪಂ. ಯ ಇಟಗಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಯುವಕರ ಸಂಘ ಹಾಗೂ ಗಂಗಾಮತಸ್ಥರ ಸಂಘದ ಸಹಯೋಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ ಹಿನ್ನಲೆ ಭಾವಚಿತ್ರ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಇಲ್ಲಿನ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಶರೀಫ್ ತಾತ ಮಠದವರೆಗೆ ತೆರಳಿ, ಪುನಃ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸಂಪನ್ನಗೊಂಡಿತು.
ಡೊಳ್ಳು ಕುಣಿತ, ಮಂಗಳವಾದ್ಯ ಹಾಗೂ ಮಹಿಳೆಯರ ಕುಂಭ, ಕಳಸ ಮೆರವು ನೀಡಿದವು.
ಅಂಬಿಗರ ಚೌಡಯ್ಯ ಯುವಕರ ಸಂಘದ ಅಧ್ಯಕ್ಷ ಮಣ್ಣೂರು ವೆಂಕಟೇಶ ಮಾತನಾಡಿ, ಗಂಗಾಮತ ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ ಟಿ) ಸೇರಿಸಬೇಕು. ಸಮಾಜವು ಶಿಕ್ಷಣದಲ್ಲಿ ಹಿಂದುಳಿದಿದ್ದು, ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಾಗ ಉನ್ನತ ಹುದ್ದೆಯೊಂದಿಗೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರವು ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಯಲ್ಲಪ್ಪ, ಶಾಮೀಲ್ ವಿರೇಶ, ಅಯೋಧ್ಯ ಪಕ್ಕಿರಪ್ಪ, ಉಮಾಪತಿ, ಜಂಬುನಾಥಗೌಡ, ಅಯೋಧ್ಯ ಶರಣಬಸುವ, ಸಣ್ಣ ವೆಂಕಟೇಶ, ಜಂತಕಲ್ ಮಂಜು, ದೊಡ್ಡ ವೆಂಕಟೇಶ, ಕಂಪ್ಲಿ ಶರಣ, ಎ.ನರಸಪ್ಪ, ಸೂಗೂರು ಮದಿಯಪ್ಪ ಸೇರಿದಂತೆ ಮಹಿಳೆಯರು, ಮುಖಂಡರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















