ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸು ಯೋಜನೆಯ 45 ಲಕ್ಷ ರೂ. ಸಾರ್ವಜನಿಕರ ಹಣವನ್ನು ಪಿಡಿಓ ಹಾಗೂ ಅಧ್ಯಕ್ಷ ಸೇರಿ ದುರ್ಬಳಕೆ ಮಾಡಿಕೊಂಡಿದ್ದು, ಅಕ್ರಮ ಎಸಗಿರುವವರ ವಿರುದ್ದ ಇದುವರೆಗೂ ಕ್ರಮವಾಗದೆ ಇರುವುದು ಅಧಿಕಾರಿಗಳು ಭ್ರಷ್ಟರ ರಕ್ಷಣೆಗೆ ನಿಂತು ಅಕ್ರಮವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.
ಕೇಂದ್ರ ಸರ್ಕಾರದ ಈ ಅನುದಾನವನ್ನು ಗ್ರಾಮಗಳ ಅಭಿವೃದ್ಧಿ, ಸ್ವಚ್ಛತೆ ಹಾಗೂ ಇನ್ನಿತರ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು. ಯಾವುದೇ ಜಯಂತಿಗೆ ಅನುದಾನ ಬಳಕೆ ಮಾಡುವುದು ಕಾನೂನು ಬಾಹಿರ. ಆದರೆ ಈ ವಿಚಾರ ತಿಳಿದಿದ್ದರೂ ಸಹ ಬೈಲೂರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಹಾಗೂ ಅಧ್ಯಕ್ಷರ ಧನದಾಹಕ್ಕೆ 15 ನೇ ಹಣಕಾಸು ಯೋಜನೆಯ ಹಣ ದುರ್ಬಳಕೆ ಆಗಿದೆ.
ಎಲ್ಲಾ ಗ್ರಾ.ಪಂ ಗಳಿಗೂ ನೀಡುವಂತೆ ಈ ಪಂಚಾಯ್ತಿಗೂ ಸಹ ಕಳೆದ 2024-25 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ 60 ಲಕ್ಷ ರೂ ಅನುಧಾನದ ಬಂದಿದೆ. ಈ ಪೈಕಿ 45 ಲಕ್ಷ ರೂ.ಗಳನ್ನು ಕೇವಲ ಬೀದಿದೀಪ ನಿರ್ವಹಣೆ, ಪೈಪ್ ಲೈನ್ ರಿಪೇರಿ, ಚರಂಡಿ ಹೂಳು ತೆಗೆಯುವ ಕೆಲಸಕ್ಕೆ ಖರ್ಚು ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಆದರೆ ರಾಷ್ಟ್ರ ನಾಯಕರುಗಳ ಹಾಗೂ ಸಮುದಾಯದ ಮಹನೀಯರ ಜಯಂತಿಗಳಿಗೆ ಕಾನೂನು ಬಾಹಿರವಾಗಿ ಈ ಯೋಜನೆಯ ಹಣವನ್ನೆ ನೀಡುವ ಮೂಲಕ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಕಳೆದ 2025 ರ ಆಗಸ್ಟ್ ನಲ್ಲಿ ಗ್ರಾ. ಪಂ. ವ್ಯಾಪ್ತಿಯ ಹುಣಸೇಪಾಳ್ಯ ಗ್ರಾಮದ ಡಾ. ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಸಂಯೋಜಕ ನಾರಾಯಣ್ ರವರ ಸಮ್ಮುಖದಲ್ಲಿ ನಡೆದ 2024-25 ನೇ ಸಾಲಿನ ನರೇಗಾ ಮತ್ತು 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಈ ಅಕ್ರಮ ಪ್ರಸ್ತಾಪವಾಗಿತ್ತು. ಈ ವೇಳೆ ಗ್ರಾ.ಪಂ. ಪಿಡಿಓ ಗೋವಿಂದಪ್ಪ ಮಾತನಾಡಿ ರಾಷ್ಟ್ರ ನಾಯಕರುಗಳ ಜಯಂತಿಗೆ ವಿವಿಧ ಸಮಾಜದ ಯುವಕರ ಒತ್ತಾಯದಿಂದ 15 ನೇ ಹಣಕಾಸು ಬಳಕೆ ಮಾಡಲಾಗಿದೆ, ಅಲ್ಲದೆ ಹೂಳು ತೆಗೆದಿರುವುದು ಪೈಪ್ ಲೈನ್ ರಿಪೇರಿ ಇನ್ನಿತರ ಕೆಲಸಗಳಿಗೆ ಬಳಸಲಾಗಿದೆ. ಕೆಲವೊಂದು ಇತರೆ ಖರ್ಚುಗಳಿಗೆ ಹಣ ಬಳಕೆಯಾಗಿರುತ್ತದೆ. ಅದನ್ನೆಲ್ಲ ಸಭೆಯಲ್ಲಿ ಜನರ ಮುಂದೆ ಹೇಳೋಕ್ಕಾಗೋದಿಲ್ಲ ಎಂದು ಹೇಳುವ ಮೂಲಕ 15 ನೇ ಹಣಕಾಸು ಯೋಜನೆಯ ಹಣ ದುರ್ಬಳಕೆಯಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದರು.
ಹಾಗೆಯೇ ಸಭೆಯಲ್ಲಿ ತಾಲ್ಲೂಕು ಸಂಯೋಜಕ ನಾರಾಯಣ್ರವರು ನರೇಗಾ ಯೋಜನೆಯಡಿ 76 ಕಾಮಗಾರಿಗಳನ್ನು ಕೈಗೊಂಡಿದ್ದು. 39,25,798 ರೂ. ಕೂಲಿ ಪಾವತಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.
15 ನೇ ಹಣಕಾಸು ಯೋಜನೆಯಡಿ ಖರ್ಚು ಮಾಡಲಾಗಿರುವ 45 ಲಕ್ಷ ರೂ. ಪೈಕಿ 9 ಲಕ್ಷ ರೂಗಳನ್ನು ಆರ್ ಟಿ ಜಿ ಎಸ್ ಮೂಲಕ ಆನ್ ಲೈನ್ ಪೇಮೆಂಟ್ ಮಾಡಿದ್ದು ಉಳಿದ ಹಣವನ್ನು ಚೆಕ್ ಮೂಲಕ ವಿವಿಧ ಏಜೆನ್ಸಿಗಳಿಗೆ ನೀಡಲಾಗಿದೆ. ಕಳೆದ 2025 ರ ಆಗಸ್ಟ್ ನಲ್ಲಿ ಈ ಕುರಿತು ಸಂಜೆ ಪತ್ರಿಕೆಯೊಂದು ವರದಿ ಮಾಡುವ ಮೂಲಕ ಇಲ್ಲಿ ನಡೆದಿರುವ ಅಕ್ರಮವನ್ನು ಬಯಲಿಗೆಳೆದಿತ್ತು. ಆದರೆ ಇಲ್ಲಿನ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ ಭ್ರಷ್ಟರ ರಕ್ಷಣೆಗೆ ಮುಂದಾಗಿದ್ದು ಅಕ್ರಮವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ ಎಂಬ ಅನುಮಾನ ಇದುವರೆಗೂ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ನಡೆಯಿಂದಲೇ ತಿಳಿದು ಬರುತ್ತಿದೆ. ಇಂದು (ಜ.28 ) ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧಿಕಾರವಧಿ ಮುಕ್ತಾಯಗೊಂಡಿದೆ. ಆದರೂ ಕಳೆದ 5 ತಿಂಗಳಿಂದ ಈ ಅಕ್ರಮದ ಬಗ್ಗೆ ಯಾರೂ ಸಹ ಚಕಾರವೆತ್ತಿಲ್ಲ.
ಇನ್ನು ಮುಂದಾದರು ಚುನಾಯಿತ ಪ್ರತಿನಿಧಿಗಳು (ಶಾಸಕರು) ಈ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಅಕ್ರಮದತ್ತ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕಿದೆ, ಯೋಜನೆಯ ಉದ್ದೇಶ ಮತ್ತು ನಿಯಮವನ್ನು ಗಾಳಿಗೆ ತೂರಿ ಅಕ್ರಮ ನಡೆಸಿರುವ ಪಿಡಿಓ ಗೋವಿಂದಪ್ಪ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಗ್ರಾ. ಪಂ ಅಧ್ಯಕ್ಷ ಸದಾನಂದಮೂರ್ತಿರವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿದೆ. ಹಾಗೂ 15 ನೇ ಹಣಕಾಸು ಯೋಜನೆ ಸೇರಿದಂತೆ ಗ್ರಾ. ಪಂ. ನಲ್ಲಿ ನಡೆದಿರುವ ಅಕ್ರಮವನ್ನು ತನಿಖೆಗೆ ಒಳಪಡಿಸಿ ಹಗರಣವನ್ನು ಬಯಲಿಗೆಳೆಯ ಬೇಕಾಗಿದೆ ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ವರದಿ :ಉಸ್ಮಾನ್ ಖಾನ್




















