
ಬಳ್ಳಾರಿ / ಕಂಪ್ಲಿ : ಶ್ರೀ ಬ್ರಹ್ಮಜ್ಞಾನಿ ನಿಟ್ರಾವಟ್ಟಿ ಬಸಪ್ಪತಾತಾನವರ ಆಧ್ಯಾತ್ಮಿಕ ಗಂಧ ಸೂರ್ಯಚಂದ್ರ ಇರುವವರೆಗೂ ಇರುತ್ತದೆ ಎಂದು ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಬ್ರಹ್ಮಜ್ಞಾನಿ ನಿಟ್ರಾವಟ್ಟಿ ಬಸಪ್ಪತಾತಾನವರ 54ನೇ ವರ್ಷದ ಪುಣ್ಯಾರಾಧನೆ ಮತ್ತು ಶರಣೆ ನಿಂಗಮ್ಮನವರ 33ನೇ ವರ್ಷದ ಪುಣ್ಯಾರಾಧನೆ ಹಾಗೂ 10ನೇ ವರ್ಷದ ಜಾತ್ರಾ ಮಹೋತ್ಸವದ ಧರ್ಮ ಸಭೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ದಾನ ಧರ್ಮದೊಂದಿಗೆ ಸಮಾಜಕ್ಕೆ ಏನಾದರೂ ಕೊಡುಬೇಕೆಂಬ ಸಂಕಲ್ಪವನ್ನು ಕೆ.ಬಿ.ವೇದಮೂರ್ತಿ ಹೊಂದಿದ್ದಾರೆ. ಇಂತಹ ಸಮಾಜಮುಖಿ ಕಾರ್ಯದಿಂದ ನೆಮ್ಮದಿಯ ಬದುಕು ಕಾಣಲು ಸಾಧ್ಯ. ಧಾರ್ಮಿಕ ಕಾರ್ಯಕ್ರಮದಿಂದ ಸಾಮರಸ್ಯ, ನೆಮ್ಮದಿ, ಶಾಂತಿ, ಸಹಬಾಳ್ವೆ ನೆಲೆಸುತ್ತದೆ ಎಂದರು.
ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ ಉದ್ಘಾಟಿಸಿ ಮಾತನಾಡಿ, ಬಸಪ್ಪತಾತನವರ ಅಪಾರ ಭಕ್ತಿ, ಜ್ಞಾನದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ. ಸಿರಿವಂತಿಕೆ ಸಾಲದು, ನಾಡಿನಲ್ಲಿ ಸಮಾಜ ಸೇವೆ ಮಾಡುವ ಹಂಬಲ ಇರಬೇಕು ಅಂದಾಗ ಮಾತ್ರ ಸೇವೆಗೆ ಫಲಸಿಗಲು ಸಾಧ್ಯ. ಇಂತಹ ಧಾರ್ಮಿಕ ಕಾರ್ಯದೊಂದಿಗೆ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುತ್ತಿರುವುದು ದೊಡ್ಡದು. ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.
ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಜಾತ್ರಾ ಮಹೋತ್ಸವದಿಂದ ಪ್ರಾಚೀನ ಕಾಲದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಕಾಣಬಹುದಾಗಿದೆ. ಸನಾತನ ಧರ್ಮವನ್ನು ಉಳಿಸುವ ಕೆಲಸವನ್ನು ಸ್ವಾಮಿಗಳು ಮಾಡುತ್ತಿದ್ದಾರೆ ಎಂದರು.
ನಂತರ ಸ್ವಾಮಿಗಳ ತುಲಾಭಾರ ಮತ್ತು 501 ಜನ ಮುತ್ತೈದೆರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ತದನಂತರ ಶಿಕ್ಷಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಹೆಚ್.ಸುಮಿತ್ರ, ಪ್ರಿಯಾದರ್ಶಿನಿ, ತಶ್ಲಿಮ್, ಅನಿತಾ, ಮಂಜುನಾಥ, ತುಳಸಿ, ಗೀತಾ, ಪೀರ್ ಬಾಷಾ, ಪೀರ್ ಜಾನಿ, ಸುಮಂಗಳ ಇವರಿಗೆ ನಗದು ಬಹುಮಾನ ನೀಡಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಿದರು. ರಂಗೋಲಿ ಸ್ಪರ್ಧೆಯ ವಿಜೇತ ಮಹಿಳೆಯರಿಗೆ ನಗದು ಬಹುಮಾನದೊಂದಿಗೆ ಗೌರವ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಕಲಾ ತಂಡ, ವಾದ್ಯಗಳೊಂದಿಗೆ ಬಸಪ್ಪತಾತನವರ ಭವ್ಯ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಸಿರಿಗೇರಿ ಸಿದ್ದರಾಂಪುರದ ಪರಮಪೂಜ್ಯ ಚಿದಾನಂದತಾತ, ಮಸ್ಕಿಯ ರುದ್ರಮುನಿ ಮಹಾಸ್ವಾಮಿ, ಗ್ರಾಪಂ ಅಧ್ಯಕ್ಷೆ ಶಾರದಾ, ಮುಖಂಡರಾದ ಕೆ.ಎಸ್.ದಿವಾಕರ್, ಮಜ್ಜಿಗೆ ನಾಗರಾಜ, ಅಯ್ಯಾಳಿ ತಿಮ್ಮಪ್ಪ, ವೆಂಕಟೇಶ, ಮಂಜುನಾಥ, ಸದಾಶಿವಪ್ಪ, ತಿಮ್ಮಪ್ಪ ಸೇರಿದಂತೆ ಗ್ರಾಮ ಹಾಗೂ ಸುತ್ತಮುತ್ತಲಿ ಭಕ್ತರು ಪಾಲ್ಗೊಂಡಿದ್ದರು. ಶಿಕ್ಷಕ ರಾಮು ನಿರೂಪಣೆ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















