ತಹಶೀಲ್ದಾರ ಕಚೇರಿಯಿಂದ ವಿ.ಮ.ವೃತ್ತದವರಗೆ ಕ್ಯಾನ್ಸರ್ ಜಾಗೃತಿ ರ್ಯಾಲಿ : ಕ್ಯಾನ್ಸರ್ ಮುಕ್ತ ದೇಶಕ್ಕೆ ಪಣ
ಹುನಗುಂದ: ತಾಲೂಕಾಡಳಿತ,ತಾ.ಪಂ. ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕ ವೈದ್ಯಾಧಿಕಾರಿ ಡಾ.ಸಂಗಮೇಶ ಅಂಗಡಿ ಹಾಗೂ ಶಿರಸ್ತೆದಾರ ಶ್ರವಣಕುಮಾರ ಮುಂಡೇವಾಡಿ ಅವರು ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ತಹಶೀಲ್ದಾರ ಕಚೇರಿಯಿಂದ ವಿ.ಮ. ವೃತ್ತದವರಗೆ ಕ್ಯಾನ್ಸರ್ ಮುಕ್ತ ದೇಶ ನಿರ್ಮಾಣದ ಘೋಷಣೆಗಳನ್ನು ಕೂಗುತ್ತಾ ವಿಶ್ವ ಕ್ಯಾನ್ಸರ್ ಜಾಗೃತಿ ಜಾಥಾ ನಡೆಸಿದರು.
ವಿ.ಮ.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮನುಕುಲಕ್ಕೆ ಮಾರಕವಾದ ಕ್ಯಾನ್ಸರ್ ರೋಗ ನಿರ್ಮೂಲನೆಯ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಹಿರಿಯ ಆರೋಗ್ಯ ಅಧಿಕಾರಿ ಜಿ.ಬಿ. ಭದ್ರಣ್ಣವರ ಮಾತನಾಡಿ ತಂಬಾಕು ಸಮಾಜಕ್ಕೆ ಮಾರಕವಾದದ್ದು. ತಂಬಾಕು ಸೇವನೆಯಿಂದಾಗುತ್ತಿರುವ ದುಷ್ಪರಿಣಾಮಗಳನ್ನು ಸಮಾಜಕ್ಕೆ ಜಾಗೃತಿ ಮೂಡಿಸಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಇಂದಿನ ಯುವ ಜನತೆ ತಂಬಾಕು ಮತ್ತು ಡ್ರಗ್ ಸೇವನೆ ಮಾಡಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಅಂತಹ ಕುಟುಂಬಗಳ ರಕ್ಷಣೆಗೆ ಇಂತಹ ಕಾರ್ಯಕ್ರಮ ಅವಶ್ಯ. ಸರ್ಕಾರ ತಂಬಾಕು ಸೇವನೆಯನ್ನು ತಡೆಯಲೂ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದ್ದು.ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ ವಿನ: ಅವುಗಳನ್ನು ಪ್ರಚಾರ ಮಾಡುವುದಾಗಲಿ, ಪ್ರಚಾರಕ್ಕೆ ಅಂಗಡಿಯಲ್ಲಿ ಇಡುವುದಾಗಲಿ ಇಲ್ಲ. ತಂಬಾಕು ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಲ್ಲಿಸಿ ಕ್ಯಾನ್ಸರ್ ಮುಕ್ತ ದೇಶವನ್ನಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಮಂಜುನಾಥ ಅಂಕೋಲ್ಕರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸಿಕಂದರ ಧನ್ನೂರ, ಎನ್ಸಿಸಿ ಅಧಿಕಾರಿ ಗುಲಾಂ ಸಮಾಧಾನಿ, ದೈಹಿಕ ನಿರ್ದೇಶಕ ಬಿ.ವೈ.ಆಲೂರ, ಪ್ರವೀಣಕುಮಾರ ಚೂರಿ ಸೇರಿದಂತೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಎಸ್.ಎಸ್.ಕಡಪಟ್ಟಿ ನರ್ಸಿಂಗ್ ಕಾಲೇಜ ಹಾಗೂ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜ ವಿದ್ಯಾರ್ಥಿಗಳು ಇದ್ದರು.
- ಕರುನಾಡ ಕಂದ ಪತ್ರಿಕೆ



















