
ಬಳ್ಳಾರಿ / ಕಂಪ್ಲಿ : ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎನ್ನುವ ಪ್ರತೀತಿ ಹೊಂದಿರುವ ಐತಿಹಾಸಿಕ ಕಂಪ್ಲಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಪ್ರಾಚೀನ ಕಾಲದಲ್ಲಿ ಹಂಪಿ ಸ್ಥಾಪನೆಗೆ ಸ್ಪೂರ್ತಿಯಾಗಿದ್ದ ಕಂಪ್ಲಿಯು ಮೊದಲಿಗೆ ತಾಲೂಕು ಕೇಂದ್ರವಾಗಿತ್ತು. ನಂತರ ಹೊಸಪೇಟೆಯ ತಾಲೂಕು ವ್ಯಾಪ್ತಿಯಲ್ಲಿ ಕಂಪ್ಲಿ ಪಟ್ಟಣವಾಗಿತ್ತು. ಆದರೆ, ಈಗ ಮತ್ತೇ ಸಾಮ್ರಾಜ್ಯ ಮರುಕರಿಳಿಸಿದಂತೆ ಕಂಪ್ಲಿ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ.
ಗಂಡುಗಲಿ ಕುಮಾರ ರಾಮನ ನಾಡಿನಲ್ಲಿ ಎರಡನೇ ಬಾರಿಗೆ ಕಂಪ್ಲಿ ಉತ್ಸವದ ಸಿದ್ಧತೆಗಳು ಗರಿಗೆದರಿದ್ದು, ಇನ್ನೇನು ಉತ್ಸವಕ್ಕೆ ಮದುವಣಗಿತ್ತಿಯಂತೆ ಪಟ್ಟಣವು ಶೃಂಗಾರಗೊಂಡಿದೆ. ಕಂಪ್ಲಿ ನಗರದುದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಗಮನ ಸೆಳೆಯುವ ಜೊತೆಗೆ ಕಂಪ್ಲಿ ಉತ್ಸವಕ್ಕೆ ಮೆರಗು ನೀಡಿದೆ. ಮತ್ತು ರಸ್ತೆಗಳಿಗೆ ಹೊಸ ರೂಪ ಬಂದಂತಾಗಿದೆ. ತುಂಗಭದ್ರಾ ಆರತಿ ಹಿನ್ನಲೆ ಐತಿಹಾಸಿಕ ಸೋಮಪ್ಪ ಕೆರೆಯು ಸ್ವಚ್ಚಗೊಂಡಿದೆ. ಮತ್ತು ಮೈದಾನವು ವೇದಿಕೆಗಳಿಂದ ತುಂಬಿದೆ. ಹಾಗೂ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಉತ್ಸವಕ್ಕೆ ಸಿದ್ಧತೆಯಾಗಿದೆ. ಒಟ್ಟಾರೆ ಕಂಪ್ಲಿ ಉತ್ಸವವು ಜನರ ಉತ್ಸವವಾಗಿದೆ.
ಇತಿಹಾಸ ಹಿನ್ನಲೆ : ತುಂಗಭದ್ರಾ ನದಿ ತೀರದಲ್ಲಿರುವ ಕಂಪ್ಲಿಗೆ ತನ್ನದೇ ಆದ ಇತಿಹಾಸವೂ ಇದೆ. 18ನೇ ಶತಮಾನದ ಆರಂಭದಲ್ಲಿ ಪ್ರಬಲ ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಗಂಡುಗಲಿ ಕುಮಾರರಾಮನ ವೀರಭೂಮಿ ಇದು, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸ್ಫೂರ್ತಿಯಾದ ಐತಿಹಾಸಿಕ ತಾಣ. 1327ರಲ್ಲಿ ತುಘಲಕ್ ಸೈನ್ಯದ ವಿರುದ್ಧದ ಕದನದಲ್ಲಿ ಜೌಹರ್ ಆಚರಿಸಿದ ಇತಿಹಾಸ ಹೊಂದಿದೆ. ಕುಮಾರರಾಮನು ಕಂಪ್ಲಿ ಸಾಮ್ರಾಜ್ಯದ ಅಪ್ರತಿಮ ವೀರನಾಗಿದ್ದು, ದೆಹಲಿ ಸುಲ್ತಾನರ ವಿರುದ್ಧ ಹೋರಾಡಿದ ಐತಿಹಾಸಿಕ ವ್ಯಕ್ತಿ. ಕಂಪ್ಲಿ ಸಾಮ್ರಾಜ್ಯದ ಪತನದ ನಂತರ, ಅದರ ಅವಶೇಷಗಳ ಮೇಲೆ 1336ರಲ್ಲಿ ವಿಜಯನಗರ ಸಾಮ್ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಕಂಪ್ಲಿಯಲ್ಲಿ ಸೋಮೇಶ್ವರ ದೇವಾಲಯ (ಕುಮಾರರಾಮನ ಆರಾಧ್ಯದೈವ) ಮತ್ತು ಹಂಪಿಯ ಹೇಮಕೂಟ ಬೆಟ್ಟದ ಮೇಲಿರುವ ಶಿವ ದೇವಾಲಯಗಳನ್ನು ಕಂಪ್ಲಿ ಅರಸರು ನಿರ್ಮಿಸಿದ್ದಾರೆ. ಕಂಪ್ಲಿಯು 1886ರಲ್ಲೇ ಪುರಸಭೆಯನ್ನು ಹೊಂದಿದ್ದ ಬಳ್ಳಾರಿ ಜಿಲ್ಲೆಯ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ. ಕಂಪ್ಲಿಯು ಕೇವಲ ಒಂದು ಪಟ್ಟಣವಲ್ಲದೆ, ವಿಜಯನಗರ ಸಾಮ್ರಾಜ್ಯದ ಪೂರ್ವಜ ಸಂಸ್ಕೃತಿಯನ್ನು ಪ್ರತಿನಿಧಿಸುವ, ಗಂಡುಗಲಿ ಕುಮಾರರಾಮನ ವೀರಗಾಥೆಗಳನ್ನು ಹೊತ್ತಿರುವ ಪ್ರಮುಖ ಚರಿತ್ರಿಕ ಕ್ಷೇತ್ರವಾಗಿದೆ.
ಉತ್ಸವ ಪಟ್ಟಿ : ಫೆ.11 ಮತ್ತು 12ರಂದು ಕಂಪ್ಲಿ ಉತ್ಸವಕ್ಕೆ ಸಾಕ್ಷಿಯಾಗಲಿದೆ. ಮೊದಲ ದಿನದಂದು ಬೆಳಿಗ್ಗೆ ಕಂಪ್ಲಿ ಆಸ್ಪತ್ರೆಯಿಂದ ಕೆ.ಎಸ್.ಭವನವರೆಗೂ ವರ್ಣರಂಜಿತ ರಂಗೋಲಿ ಸ್ಪರ್ಧೆ ನಡೆಯಲಿದೆ. ಇಲ್ಲಿನ ಬಿಎಸ್ವಿ ಶಾಲೆಯಲ್ಲಿ ಮೆಹೆಂದಿ ಸ್ಪರ್ಧೆ ಹಮ್ಮಿಕೊಂಡಿದೆ. ಮಧ್ಯಾಹ್ನ ಕಂಪ್ಲಿ-ಕೋಟೆಯ ಐತಿಹಾಸಿ ಪಂಪಾಪತಿ ದೇವಸ್ಥಾನದಿಂದ ವಿವಿಧ ಜನಪದ ಕಲಾ ಪ್ರಕಾರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ವಾರಣಾಸಿಯ ಗಂಗಾರತಿ ತಂಡದಿಂದ ತುಂಗಭದ್ರಾ ಆರತಿ ನೆರವೇರಲಿದೆ. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಹೋರಾಟಗಾರರಿಗೆ ಸನ್ಮಾನ, ತದನಂತರ ಕೆರೆ ಆವರಣದಲ್ಲಿ ನಿರ್ಮಿಸಿದ 20 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ಮರುದಿನದ ಮಧ್ಯಾಹ್ನ ಇಲ್ಲಿನ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಗಂಡುಗಲಿ ಕುಮಾರರಾಮನ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತರದ ವೇದಿಕೆ ಸಮಾರಂಭವನ್ನು ಜಿಲ್ಲಾ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ಖಾನ್ ಇವರು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗಿ ಘನುಪಸ್ಥಿತಿವಹಿಸಲಿದ್ದಾರೆ. ಸ್ಥಳೀಯ ಶಾಸಕ ಜೆ.ಎನ್.ಗಣೇಶ್ ಅಧ್ಯಕ್ಷತೆವಹಿಸಲಿದ್ದಾರೆ. ಸಂಸದರು, ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇಲ್ಲಿನ ಉತ್ಸವದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಹಾಗೂ ಸಿಂರ್ಸ್ಗಳಾದ ಚಂದನ್ ಶೆಟ್ಟಿ, ಬಾಳು ಬೆಳಗುಂದಿ, ಹನುಮಂತ ಲಮಾಣಿ ಸೇರಿದಂತೆ ಇನ್ನಿತರ ಹಾಸ್ಯ ನಟರು ಜನರನ್ನು ರಂಜಿಸಲಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















