
ಕಂಪ್ಲಿ ಉತ್ಸವಕ್ಕೆ ಅದ್ಧೂರಿ ಚಾಲನೆ : ಉತ್ಸವದಲ್ಲಿ ಸಾಂಸ್ಕೃತಿಕ ಸುಗ್ಗಿ
ಬಳ್ಳಾರಿ / ಕಂಪ್ಲಿ : ಹಂಪಿ ಉತ್ಸವದಂತೆ ಕಂಪ್ಲಿ ಉತ್ಸವವನ್ನು ಅದ್ಧೂರಿಯಾಗಿ ತಾಲೂಕು ಮಟ್ಟದಲ್ಲಿ ಶಾಸಕ ಗಣೇಶ ಮಾಡಿ ತೋರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಕ್ಕರೆ ಕಾರ್ಖಾನೆ ಆವರಣದ ವೀರ ಕಂಪಲಿರಾಯ ಮುಖ್ಯ ವೇದಿಕೆಯಲ್ಲಿ
ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂಪ್ಲಿ ಉತ್ಸವ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಮೂರು ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಮೂರು ಸಾವಿರ ಕೋಟಿಯಲ್ಲಿ ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಉತ್ಸವವನ್ನು ಇತಿಹಾಸಿ ಪ್ರಸಿದ್ಧ ಕಂಪಲಿನಾಡಿನ ವೈಭವನ್ನು ಮತ್ತೆ ಮರುಕಳಿಸುವಂತೆ ಅದ್ಧೂರಿಯಾಗಿ ಉತ್ಸವ ಮಾಡಿದ್ದಾರೆ. ಸಂವಿಧಾನದಿಂದ ಎಲ್ಲರಿಗೂ ಮೂಲಭೂತ ಹಕ್ಕುಗಳು ಸಿಕ್ಕಿವೆ. ಈ ವರ್ಷದಲ್ಲಿ ಮೂರು ಸಾವಿರ ಮನೆ ಕೊಡುತ್ತೇನೆ. ಜೆ. ಎನ್. ಗಣೇಶನಿಂದ ಮಾತ್ರ ಈ ಉತ್ಸವ ವಿಜೃಂಭಣೆಯಿಂದ ನಡೆದಿದೆ ಎಂದರು.
ಶಾಸಕ ಬಿ.ನಾಗೇಂದ್ರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಗಣೇಶ ಹಗಲಿರುಳು ಶ್ರಮಿಸುತ್ತಾ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಶಾಸಕ ಜೆ.ಎನ್.ಗಣೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ತಾಲೂಕು ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ಪ್ರತಿಯೊಂದು ಹಂತದ ಕೆಲಸಕ್ಕೆ ಪ್ರೇರಣೆ ನೀಡುತ್ತಿವೆ. ಅಂದಿನ ಕಾಲದಲ್ಲಿ ಜನತೆಗೆ ಸಂಪತ್ತನ್ನು ಹಂಚಿದ ದಾನವೀರ ಗಂಡುಗಲಿ ಕುಮಾರರಾಮನಾಗಿದ್ದಾರೆ. ಜನರ ಸಹಕಾರದಿಂದ ಜನೋತ್ಸವವಾಗಿದೆ ಎಂದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿದರು.
ನಂತರ ಶಾಸಕ ಗಣೇಶ ಹಾಗೂ ಧರ್ಮಪತ್ನಿ ಶ್ರೀದೇವಿ ಇವರಿಗೆ ಸನ್ಮಾನಿಸಿ ಗೌರವಿಸಿದರು. ತದ ನಂತರ ಗಣ್ಯರಿಗೆ ಹಾಗೂ ಸಾಧಕರಿಗೆ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಹಬೀಬ್ ರೆಹಮಾನ್, ಮುಖಂಡರಾದ ಮುಂಡರಗಿ ನಾಗರಾಜ, ಚಿದಾನಂದ, ಕೆ.ಶ್ರೀನಿವಾಸರಾವ್, ತಹಶೀಲ್ದಾರ್ ಜೂಗಲ್ ಮಂಜುನಾಯಕ, ತಾ.ಪಂ ಇಒ ಆರ್.ಕೆ.ಶ್ರೀಕುಮಾರ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರು ಪಾಲ್ಗೊಂಡಿದ್ದರು.
ನಂತರ ಆಕಾಶದಲ್ಲಿ ಬಾಣಗಳ ಚಿತ್ತಾರಕ್ಕೆ ಜನರು ಮನಸೋತರು.
ವರದಿ : ಜಿಲಾನಸಾಬ್ ಬಡಿಗೇರ್



















