
ಶಿಗ್ಗಾವ್ ತಾಲ್ಲೂಕಿನ ಸುರಫಗಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ :ಗೋವಿನ ಜೋಳ ಮತ್ತು ಸೋಯಾಬಿನ್ ಬೆಳೆ ಸಂಪೂರ್ಣ ಭಸ್ಮ.
ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲ್ಲೂಕಿನ ಸುರಫಗಟ್ಟಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿ, ಹಲವು ರೈತರ ಗೋವಿನ ಜೋಳದ ತೆನೆ ಹಾಗೂ ಸೋಯಾಬಿನ್ ಬೆಳೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಹೊಲದ ಬದಿಯಲ್ಲಿನ ಟಿಸಿ (ಟ್ರಾನ್ಸ್ಫಾರ್ಮರ್) ಯಿಂದ ಆರ್ಟಿಸಿ ಲೈನ್ನಲ್ಲಿ ಅಕಸ್ಮಾತ್ ಕರೆಂಟ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದರಿಂದ ಹೊಲಗಳಲ್ಲಿ ಬೆಳೆದಿದ್ದ ಗೋವಿನ ಜೋಳದ ತೆನೆ ಹಾಗೂ ಸೋಯಾಬಿನ್ ಬೆಳೆಗಳಿಗೆ ಬೆಂಕಿ ತಗಲಿ ಭಾರೀ ನಷ್ಟ ಉಂಟಾಗಿದೆ.
ಈ ಅವಘಡದಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರು:
ಬುರದಪ್ಪ ಕರಿಯಪ್ಪ ಸೊರಟೂರ
ಗೂಳಪ್ಪ ಕರಿಯಪ್ಪ ಸೊರಟೂರ
ಭರ್ಮಪ್ಪ ಕರಿಯಪ್ಪ ಸೊರಟೂರ
ಶ್ರೀಕಾಂತ್ ನಾಗಪ್ಪ ನೀಲಗುರಿ
ಪಾರವ್ವ ಸಿದ್ದಪ್ಪ ಯಲ್ಲಾಪುರ
ಸತ್ಯವ್ವ ಷಣ್ಮುಖಪ್ಪ ಸೊರಟೂರ
ಕರ್ಬಸಪ್ಪ ನಾಗಪ್ಪ ಹಿರಗಮ್ಮನವರ್
ಸತ್ಯಪ್ಪ ರಾಮಪ್ಪ ಹಿರಗಮ್ಮನವರ್
ನಿಂಗಪ್ಪ ನಾಗಪ್ಪ ಹಿರಗಮ್ಮನವರ್
ಶಿವಾನಂದ ಕರಿಯಪ್ಪ ಉಣಕಲ್.
ಒಟ್ಟು ಹತ್ತು ಮಂದಿ ರೈತರ ಗೋವಿನ ಜೋಳದ ತೆನೆ ಹಾಗೂ ಸೋಯಾಬಿನ್ ಬೆಳೆ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ತಲಾಟಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಅವರ ಸಮಯೋಚಿತ ಕಾರ್ಯದಿಂದ ಬೆಂಕಿ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸದೇ ತಡೆಯಲಾಯಿತು.
ಬೆಳೆ ನಷ್ಟಗೊಂಡ ರೈತರು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಬಸವರಾಜ ಎಸ್. ಎನ್.




















