ಭದ್ರಾವತಿ:ನಿತ್ಯದ ಸಮಾಚಾರಗಳನ್ನು ತಿಳಿಸುವ ಹಾಗೂ ಜನರಲ್ಲಿ ಜ್ಞಾನ ಬೆಳೆಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ.ದಿನಸಿ, ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಬೇಕು.ಆಗ ಮಾತ್ರ ಜ್ಞಾನಯುತ ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರಿಗಾಗಿ ಆಯೋಜಿಸಲಾಗಿದ್ದ ವಾಚನಾಭಿರುಚಿ ಕಮ್ಮಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಾಹಿತ್ಯ ಕಾರ್ಯಕ್ರಮಗಳು ಉಚಿತವಾಗಿರುವುದರಿಂದ ಜನರಲ್ಲಿ ನಿರ್ಲಕ್ಷ್ಯವಿದೆ. ಸಾಹಿತ್ಯ ಕಾರ್ಯಕ್ರಮಗಳು ಜ್ಞಾನ ಹಂಚುವ ಕಾರ್ಯಕ್ರಮಗಳು ಉಚಿತಗಳು ನಮ್ಮ ಸ್ವಾವಲಂಬನೆಯನ್ನು ಕಸಿದುಕೊಳ್ಳುತ್ತವೆ ಎಂದರು.
ವಿದ್ಯಾರ್ಥಿನಿಲಯಗಳಲ್ಲಿ ಊಟ ನೀಡುವುದು, ಬಟ್ಟೆ ನೀಡುವುದು,ದೈನಂದಿನ ಬಳಕೆಯ ವಸ್ತುಗಳನ್ನು ನೀಡುವುದರ ಜೊತೆಜೊತೆಗೆ ಸಾಹಿತ್ಯ ಜ್ಞಾನ ನೀಡುವುದು ಅಗತ್ಯ.ಇಂಥದೊಂದು ಪ್ರಯತ್ನದ ಫಲವಾಗಿ ವಾಚನಾಭಿರುಚಿ ಕಮ್ಮಟ ನಡೆಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಪಾಲಕ ಸಿ.ಎಂ.ರಮೇಶ್,ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಸುಧಾಮಣಿ,ಸಾಹಿತಿಗಳಾದ ಪ್ರೊ.ಸಿರಾಜ್ ಅಹಮದ್,ಡಾ.ಹೆಚ್.ಟಿ.ಕೃಷ್ಣಮೂರ್ತಿ,
ಲೇಖಕ ಡಾ.ಕೆ.ಜಿ.ವೆಂಕಟೇಶ್,ಹಿರಿಯ ಪತ್ರಕರ್ತ ಎನ್.ಬಾಬು ಉಪಸ್ಥಿತರಿದ್ದರು.
