ಬರೆಯುವ ಮನಸ್ಸು ಮತ್ತು ಭಾವನೆಗಳು ಇದ್ದರೆ ಸಾಕು ಕವಿಯಾಗಲು ಸಾಧ್ಯ ಎನ್ನುವುದಕ್ಕೆ ಕವಯತ್ರಿ ಲೋಕರತ್ನ ಜೆ ಭವ್ಯ ಸುಧಾಕರ ಜಗಮನೆಯವರು ಉದಾಹರಣೆ.
ಇವರು ನಮ್ಮದೇ ಜಿಲ್ಲೆಯಾದ ಹಾಸನದ ಬೇಲೂರು ತಾಲೂಕಿನ ಕನ್ನಡದ ಮೊದಲ ಶಾಸನ ದೊರೆತ ಸ್ಥಳ ಹಲ್ಮಿಡಿ ಸಮೀಪದ ನಾರಾಯಣಪುರ ಗ್ರಾಮದವರು ಎಂದು ತಿಳಿದು ಅತ್ಯಂತ ಸಂತೋಷವಾಯಿತು.
ಇವರ ಸಾಹಿತ್ಯ ಕೃಷಿಯು ಪದವಿ ಪೂರ್ವ ಶಿಕ್ಷಣ ಪಡೆಯುವಾಗಲೇ ಪ್ರಾರಂಭವಾಗಿ, ಈಗಾಗಲೇ ಅನೇಕ ಕೃತಿಗಳನ್ನು ರಚಿಸಿ ಹಲವಾರು ಬಿರುದು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಪ್ರಶಂಸಾರ್ಹ.
ಇದೀಗ ಇವರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಸಹಜ ಹಾಗೂ ಸುಂದರವಾದ ಜೋಗುಳಹಾಡು, ಶಿಶುಗೀತೆ, ಭಕ್ತಿಗೀತೆ, ಕವಿತೆಗಳನ್ನು ರಚಿಸಿ “ಪುಟಾಣಿ ಸಂಚಯ” ಎಂಬ ಕವನ ಸಂಕಲನವನ್ನು ಹೊರತರುತ್ತಿರುವುದಕ್ಕೆ ಅಭಿನಂದಿಸುತ್ತೇನೆ.
ಕವನ ಕವಿತೆ ಎಲ್ಲವೂ ಬರೆಯುವವರ ಮನಸ್ಸಿಗೆ ಹಿಡಿಯುವ ಕನ್ನಡಿ ಅಂತನೇ ಹೇಳಬಹುದು.
ಇವರ ಕೃತಿಯಲ್ಲಿ ಅಭಿರುಚಿಯನ್ನು ಹೆಚ್ಚಿಸುವಂತಹ ಪ್ರತಿ ಪದಗಳಲ್ಲೂ ಭಾವಗಳನ್ನು ತುಂಬಿ ಕಾವ್ಯವನ್ನು ಆಸಕ್ತಿದಾಯಕವಾಗಿ ರಚಿಸಲಾಗಿದೆ ಎನ್ನಬಹುದು.
ಕವಯಿತ್ರಿ ಲೋಕರತ್ನ ಜೆ ಭವ್ಯ ರವರು ತಮ್ಮ ಈ ಕವನ ಸಂಕಲನದಲ್ಲಿ ನಾಡು-ನುಡಿ, ನೆಲ-ಜಲ, ಭಕ್ತಿ, ರಾಷ್ಟ್ರಪ್ರೇಮ, ತಾಯಿಯ ಲಾಲಿ, ಪುಸ್ತಕಪ್ರೇಮ, ಸ್ನೇಹ ಬಾಂಧವ್ಯ ಸಂಬಂಧಗಳ ಬೆಸುಗೆಯ ಸ್ವಾದ, ಹಳ್ಳಿ, ಹಕ್ಕಿ, ಪರಿಸರ, ಶಾಲೆ, ಆಟ ಪಾಠ ಇನ್ನೂ ಅನೇಕ ಅರಿವುಗಳುಳ್ಳ ಮಕ್ಕಳ ಎಳೆಯ ಮನಸ್ಸಿಗೆ ಸುಲಲಿತವಾಗಿ ಹೊಕ್ಕುವಂತಹ ಸುಂದರ ಕವಿತೆಗಳನ್ನು ರಚಿಸಿದ್ದಾರೆ.
ಎಳೆಯ ಮನಸ್ಸಿನಲ್ಲಿ ಉತ್ತಮ ಮೌಲ್ಯಗಳನ್ನು ಅರಳಿಸುವ ಹಾಗೆ ಈ ಕೃತಿ ಅಲಂಕೃತಗೊಂಡಿದೆ.
ಈ ಕೃತಿಯು ನಾಡಿನ ಎಳೆಯ ಚೇತನಗಳ ಕೈ ಸೇರಿ ಅವರಲ್ಲಿ ಭಾವನೆ, ಬರವಣಿಗೆ, ಕ್ರಿಯಾಶೀಲತೆ ಮತ್ತು ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವಂತಾಗಲಿ.
ಮಕ್ಕಳ ಸಾಹಿತ್ಯ ಲೋಕಕ್ಕೆ ಸೊಗಸಾದ ಕವನ ಸಂಕಲವನ್ನು ನೀಡಿದ ಕವಯಿತ್ರಿ ಲೋಕರತ್ನ ಭವ್ಯ ಸುಧಾಕರ ಜಗಮನೆಯವರಿಗೆ ಅಭಿನಂದನೆಗಳು ಹಾಗೂ ಶುಭ ಹಾರೈಸುತ್ತಾ.
ಮಕ್ಕಳಿಗಾಗಿ ಇನ್ನು ಹಲವಾರು ಕೃತಿಗಳು ನಿಮ್ಮಿಂದ ರಚಿಸಲ್ಪಡಲಿ ಎಂದು ಆಶಿಸುತ್ತೇನೆ..
ಶುಭವಾಗಲಿ…
- ಅರುಣ್ ಸಿ ಎಸ್ ಚನ್ನರಾಯಪಟ್ಟಣ
ರಾಷ್ಟ್ರ ಸಂಘಟನಾ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇಂದ್ರ ಸಮಿತಿ, ಹಾಸನ ಜಿಲ್ಲೆ
ಕಾರ್ಯಕಾರಿ ಸಮಿತಿ ಸದಸ್ಯರು
ಕರ್ನಾಟಕ ಸಂಘ, ನವದೆಹಲಿ
