ಬಾಗಲಕೋಟೆ/ ಹುನಗುಂದ : ಹೊನ್ನಕುಸುಮ ಸಾಹಿತ್ಯ ವೇದಿಕೆ ಪ್ರತಿ ತಿಂಗಳಂತೆ ತಿಂಗಳ ಬೆಳಕು – 25 ನೇ ಪುಸ್ತಕ ಅವಲೋಕನ ವಿಚಾರ ಚರ್ಚೆ ನಡೆಯಿತು. ಮಹಾಂತೇಶ ಹಿರೇಕುರುಬರ ಅವರ “ಜಂತಿಮನಿ” ಪ್ರಬಂಧ ಸಂಕಲನದ ವಿಚಾರ ಚರ್ಚೆಯಲ್ಲಿ ಪುಸ್ತಕ ಅವಲೋಕನ ಮಾಡಿದ ಹುನುಗುಂದದವರಾದ ಲಿಂಗಸೂರಿನ ಸಾಹಿತಿ ಅಬ್ದುಲ್ ರಹಮಾನ್ ಬಿದರಕೋಟಿ ಅವರು ಕೃತಿ ಅವಲೋಕನ ಮಾಡಿ ಮಾತನಾಡಿ ಜಂತಿಮನಿ ಪ್ರಬಂಧವು ಗ್ರಾಮೀಣ ಪ್ರದೇಶದ ನೆಲಮೂಲ ಸೊಗಡನ್ನು
ಗ್ರಾಮ್ಯ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಿದೆ.
ಈ ಲಲಿತ ಪ್ರಬಂಧ ಸಂಕಲನ ನಮ್ಮನ್ನು ಹಳ್ಳಿಯ ಬದುಕಿನ ವೈವಿಧ್ಯತೆ ಕಡೆಗೆ ಕರೆದೊಯ್ಯುತ್ತದೆ. ನೆಲ ಮೂಲಸಂಸ್ಕೃತಿಯ ಅಂದಿನ ಪಡಸಾಲೆಯು ಪಾಠ ಶಾಲೆಯಾಗಿತ್ತು, ಕಾಳುಕಡಿಗಳ ಸಂಗ್ರಹಣೆ ಸ್ಥಳವಾಗಿತ್ತು, ನ್ಯಾಯ ಪಂಚಾಯತಿಯಾಗಿತ್ತು ಜಂತಿಮನೆಯಲ್ಲಿ ಕೂಡು ಕುಟುಂಬದ ಮೌಲ್ಯಗಳಿದ್ದವು. ಈಗ ಬದಲಾವಣೆಗೆ ಒಳಗಾಗಿ ಜಂತಿಮನಿ ಎಂದರೇನು ಎನ್ನುವಷ್ಟು ಕಾಲ ಆಧುನಿಕಗೊಂಡಿದೆ ಎಂದರು. ಜಂತಿಮನಿ ಪ್ರಬಂಧ ಓದುಗರಿಗೆ ಹಳೆಯ ನೆನಪುಗಳನ್ನು ಮರು ಕಳಿಸುತ್ತದೆ. ಮನುಷ್ಯನು ಸುಖ ಹಾಗೂ ಯಶಸ್ಸು ಈ ಇವೆರಡರ ಬೆನ್ನು ಬಿದ್ದು ತನ್ನನ್ನೇ ಮರೆತಿದ್ದಾನೆ ಎಂಬುದು ಜಂತಿಮನೆ ತಿಳಿಸುತ್ತದೆ. ಹಲವಾರು ವೈಚಾರಿಕ ಅಂಶಗಳನ್ನು, ಇತಿಹಾಸದ ಪ್ರಜ್ಞೆಯನ್ನು ತಿಳಿಸುವ ಈ ಕೃತಿ ಜೀವನ ಪ್ರೀತಿ ತಿಳಿಸುತ್ತದೆ” ಎಂದರು.
“ಜಂತಿಮನಿ” ಕೃತಿಯ ಲೇಖಕರಾದ ವಡಗೇರಿಯ ಮಹಾಂತೇಶ ಹಿರೇಕುರುಬರ ಅವರು ತಮ್ಮ ಬರವಣಿಗೆಯ ಅನುಭವಗಳನ್ನು ಹಂಚಿಕೊಂಡರು. ಇದೇ ಪರಿಸರದ ಸಂಗತಿಗಳಿರುವ ಪ್ರಬಂಧ ಸಂಕಲನವನ್ನು ಚರ್ಚೆಗೆ ಎತ್ತಿಕೊಂಡದ್ದು ಸಂತೋಷವಾಗಿದೆ. ಕಾಂಕ್ರೀಟ್ ಮನೆಗಳು ಬಯಲು ಸೀಮೆಯಲ್ಲಿ ವಿರುದ್ಧವಾಗಿವೆ. ಜಂತಿಮನೆಯ ತಣ್ಣನೆ ತಂಪು ಮಾಯಗೊಳಿಸಿ, ಬಿಸಿ ಮನೆಯ ಕಡೆ ಸಾಗುತಿದ್ದೇವೆ. ನಮ್ಮ ಮನಸ್ಸನ್ನೂ ಬಿಸಿಯಾಗಿಸಿದ್ದೇವೆ ಹೊರತು ತಂಪಾಗಿಸಿಲ್ಲ. ಹಿರಿಯರ ಮೌಲ್ಯಗಳು ದೂರವಾಗಿ ಕೃತಕ ಬದುಕು ರೂಪಗೊಳ್ಳುತ್ತಿದೆ” ಎಂದು ಹೇಳಿದರು.
ಹೊನ್ನಕುಸುಮ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾದ ಪ್ರೊ. ಎಂ.ಡಿ.ಚಿತ್ತರಗಿ ಅವರು ಮಾತನಾಡಿ ಇಪ್ಪತ್ತೈದನೇ ಪುಸ್ತಕ ಅವಲೋಕನದ ‘ತಿಂಗಳ ಬೆಳಕು’ ಬೆಳ್ಳಿ ಹಬ್ಬದ ಕುರಿತು ಮಾತನಾಡಿ ಹೊನ್ನಕುಸುಮ ಸಾಹಿತ್ಯ ವೇದಿಕೆ ಬೆಳೆದು ಬಂದ ದಾರಿ, ಇದುವರೆಗೆ ಚರ್ಚಿಸಲಾದ 25 ಕೃತಿಗಳನ್ನು, ಲೇಖಕರನ್ನು ಹಾಗೂ ಕೃತಿ ಅವಲೋಕನದ ವಿಮರ್ಶಕರನ್ನು ಹೆಸರಿಸಿದರು. ಕಾರ್ಯಕ್ರಮದಲ್ಲಿ ಬೆಳ್ಳಿ ಹಬ್ಬದ ಬೆಳಕನ್ನು ಸಿಹಿ ನೀಡುವ ಮೂಲಕ ಸಂಭ್ರಮ ಹಂಚಿಕೊಂಡರು .
ತಿಂಗಳ ಬೆಳಕಿನ ಪುಸ್ತಕ ಅವಲೋಕನದ ಅಧ್ಯಕ್ಷತೆ ವಹಿಸಿದ ಪ್ರೊ.ಎಸ್. ಎಸ್. ಮೂಡಪಲದಿನ್ನಿ ಮಾತನಾಡಿ ಲಲಿತ ಪ್ರಬಂಧದ ಅರ್ಥ, ವಿಷಯ ವಸ್ತುವನ್ನು ಕುರಿತು ಮಾತನಾಡಿದರಲ್ಲದೆ ಮುಂದುವರೆದು ದೇಶಿ ಸಂಸ್ಕೃತಿಯ ಪ್ರತೀಕವಾಗಿದೆ. ಮೂಲತಃ ಮನುಷ್ಯ ಅರಿವಿನ ಶೋಧಕ ನಮ್ಮ ಮಕ್ಕಳಿಗೆ ಮೂಲ ಸಂಸ್ಕೃತಿಯ ಅರಿವಿರಲಿ, ಪಶು ಪಕ್ಷಿಗಳ ಕುರಿತು ಮಾನವೀಯ ಗುಣವಿರಲಿ ಇಂತಹ ಮೌಲಿಕ ಅಂಶಗಳು ಜಂತಿಮನೆಯಲ್ಲಿವೆ
ಎಂದರು.
ಅಭಿಷೇಕ್ ಮೂಡಪಲದಿನ್ನಿ ಪ್ರಾರ್ಥಿಸಿದರು, ಶ್ರೀ ಮತಿ ಗೀತಾ ತಾರಿವಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಲೇಖಕರಾದ ವಿ ಬಿ ಜನಾದ್ರಿ ವಕೀಲರು, ವಿಜಯಕುಮಾರ್ ಕುಲಕರ್ಣಿ, ಡಾ.ನಾಗರತ್ನ ಬಾವಿಕಟ್ಟಿ, ಡಾ.ನಾಗರಾಜ ನಾಡಗೌಡ, ಡಾ. ಎಂ. ಬಿ ಒಂಟಿ, ಜಗದೀಶ್ ಹಾದಿಮನಿ, ಡಾ.ಎಲ್. ಜಿ. ಗಗ್ಗರಿ, ಎಸ್ಎಸ್ ಹಳ್ಳೂರ ಪಿ ಐ ಮುಚಕಂಡಿ, ಜಗದೀಶ ಹದ್ಲಿ, ಶ್ರೀಮತಿ ಶೈಲಾ ಜಿಗಳೂರ, ಹೊನ್ನಕುಸುಮ ವೇದಿಕೆಯ ಸಾಹಿತ್ಯಾಸಕ್ತರಿದ್ದರು.
