ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ಮಹರಾಜರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ತಾಲೂಕು ಬಂಜಾರ ಸಮಾಜದ ಅಧ್ಯಕ್ಷರಾದ ಭೀಮಾನಾಯ್ಕ ಇವರು ಮಾತನಾಡುತ್ತಾ ಬಂಜಾರ ಸಮಾಜದವರು ಮೂಲತ: ರಾಜಸ್ತಾನದವರು. ಪಶು ಸಾಕಣೆ, ಪಾಲನೆ ಮಾಡುತ್ತಿದ್ದರು. ಮೊಗಲರ ಆಳ್ವಿಕೆಯಲ್ಲಿ ಸೈನ್ಯದಲ್ಲಿದ್ದು ಹೋರಾಟವನ್ನು ಮಾಡಿದ್ದರು. ನಂತರ ಬೇರೆ ಬೇರೆ ಕಡೆ ವಲಸೆಹೋದರು. ಭಾರತದಲ್ಲಿ ಸುಮಾರು 12-13 ಕೋಟಿ ಜನಸಂಖ್ಯೆಯನ್ನು ಹೊಂದಿದ್ದಾರೆ. ಕರ್ನಾಟಕದ ಕಡೆ ಸಹಾ ಅನೇಕ ಕುಟುಂಬಗಳು ವಲಸೆ ಬಂದವು. ಭೀಮನಾಯ್ಕ ಮತ್ತು ಧರ್ಮಿಣಿ ಬಾಯಿ ಇವರ ಮಗನಾಗಿ 1739ರ ಫೇಬ್ರವರಿ-15 ರಂದು ಶಿವಮೊಗ್ಗ ಜಿಲ್ಲೆ, ಹೊನ್ನಾಳಿ ತಾಲೂಕಿನ ಸೋರೆಗೊಂಡನಕೊಪ್ಪದಲ್ಲಿ ಜನಿಸಿದರು. ಶಿರಸಿ ಮಾರಿಕಾಂಬೆಯ ವರಪುತ್ರರಾಗಿ ಜನಿಸಿದ ಸೇವಾಲಾಲರು ಜನಿಸಿ ಜಗದಂಬೆಯ ಆರಾಧಕರಾಗಿ ಜೀವನ ಪರ್ಯಂತ ಬ್ರಹ್ಮಚರ್ಯ ಪಾಲನೆ ಮಾಡಿ ಸಂತರಾಗಿದ್ದು ಸಮುದಾಯದ ಏಳಿಗೆಗೆ ಶ್ರಮಿಸಿದರು.
ವ್ಯಸನ ಮುಕ್ತರಾಗಿ, ಅರಿಷಡ್ವರ್ಗಗಳ ಸುಟ್ಟುಹಾಕಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಜನರಿಗೆ ಸಂದೇಶವನ್ನು ನೀಡಿದ್ದಾರೆ ಎಂದರು.
ವೆಂಕಟೇಶನಾಯ್ಕ ಇವರು ಸರಕು, ಆಹಾರ ಧಾನ್ಯ, ಉಪ್ಪು ಮುಂತಾದ ವಸ್ತುಗಳನ್ನು ಎತ್ತಿನ ಗಾಡಿಗಳ ಮೂಲಕ ಸಾಗಿಸುತ್ತಾ, ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಲಂಬಾಣಿ ಸಮುದಾಯ ನಂತರ ವಲಸೆ ಬಂದು ಅರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿ ಜೀವನ ಮಾಡುತ್ತಾ, ಕಟ್ಟಿಗೆ, ಹಣ್ಣು ಹಂಪಲು ಮಾಡಿ ಜೀವನ ಸಾಗಿಸಿದರು. ಶ್ರಮಜೀವಿಗಳಾಗಿದ್ದು, ಇಂದಿಗೂ ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬದಲಿಸಿಕೊಳ್ಳದೇ ಉಳಿಸಿಕೊಂಡು ಬಂದಿರುವ ವಿಶಿಷ್ಟ ಸಮುದಾಯವಾಗಿದೆ. ಇಂತಹ ಸಮುದಾಯಕ್ಕೆ ಸಂತ ಸೇವಾಲಾಲ್ ಮಹಾರಾಜರು ಆರಾಧ್ಯ ದೈವ, ಗುರು ಆಗಿದ್ದಾರೆ ಎಂದರು.
ಎಂ ಪ್ರತಿಭಾ ತಹಶೀಲ್ದಾರ್ ಗ್ರೇಡ್-2 ಇವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಮನುಕುಲದ ಒಳಿತಿಗೆ ನೀಡಿದ ಸಂದೇಶ, ಅವರು ಮಾಡಿದ ತ್ಯಾಗ ಸ್ಮರಣೆ ಮಾಡಿಕೊಳ್ಳುತ್ತಾ, ಆಚರಣೆಗೆ ತರುವ ಉದ್ದೇಶವೇ ಜನ್ಮ ದಿನಾಚರಣೆಯನ್ನು ಅಚರಿಸಲಾಗುತ್ತಿದೆ. ಇಂತಹ ಮಹಾನ್ ಸಂತರ ಬದುಕನ್ನು ಸ್ಮರಿಸಿಕೊಳ್ಳುತ್ತಾ, ಎಲ್ಲರಿಗೂ ಸಂತ ಸೇವಾಲಾಲ ಮಹಾರಾಜ ಜಯಂತಿಯ ಶುಭಾಷಯಗಳನ್ನು ತಿಳಿಸಿದರು.
![](https://i0.wp.com/karunadakanda.com/wp-content/uploads/2023/06/IMG_20230605_071424.jpg?fit=344%2C664&ssl=1)