ಬೀದರ್/ ಚಿಟಗುಪ್ಪ: ಗುರುಕುಲ ಶಾಲೆಯ ಶಿಕ್ಷಣ ಅದ್ಭುತವಾಗಿದೆ ಅಷ್ಟೇ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ಅಪಾರವಾಗಿದೆ ಎಂದು ಪರಿಸರ ಸಂರಕ್ಷಣೆ ವೇದಿಕೆ ರಾಜ್ಯ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ನುಡಿದರು.
ತಾಲೂಕಿನ ಕಂದಗೋಳ ಗ್ರಾಮದ ಡಾ. ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಹತ್ತನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾವನಾತ್ಮಕ ಪ್ರಪಂಚವನ್ನು ಬೆಳೆಸಿಕೊಳ್ಳುವುದರ ಮೂಲಕ ಮಕ್ಕಳು ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕು. ಅಂಕಗಳ ಜೊತೆಗೆ ಜೀವನಮೌಲ್ಯಗಳು ಅತ್ಯಗತ್ಯ. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ಮಕ್ಕಳು ಬೆಳೆಸಿಕೊಳ್ಳಬೇಕು.
ಮಕ್ಕಳು ಮತ್ತು ಕಲಿತ ಶಾಲೆಯ ಸಂಬಂಧ ಮತ್ತು ಕೊಂಡಿ ಎಂದಿಗೂ ಕಳಚಬಾರದು. ಅದು ಮುಂದುವರಿಯುತ್ತಾ ಸಾಗಬೇಕು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಆಧಾರ ಸ್ತಂಭವಾಗಬೇಕು ಎಂದು ಶುಭ ಹಾರೈಸಿದರು. ಜ್ಞಾನ, ಬುದ್ಧಿವಂತಿಕೆ, ಚಾರಿತ್ರ್ಯ ಮತ್ತು ಧೈರ್ಯಕ್ಕಾಗಿ ಶಿಕ್ಷಣ ಎಂಬ ಶಾಲೆಯ ಧ್ಯೇಯ ವಾಕ್ಯವನ್ನು ಎತ್ತಿಹಿಡಿಯುವಂತೆ ಮಕ್ಕಳಿಗೆ ಕರೆಯನ್ನು ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿಯ ಕಾರ್ಯದರ್ಶಿಗಳಾದ ಪೂಜ್ಯ ಮಹಾಲಿಂಗ ದೇವರು ಮಾತನಾಡಿ ಮಕ್ಕಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಗುರಿ ಈಡೇರಿಕೆಗೆ ಕಠಿಣ ಶ್ರಮ ಹಾಕಬೇಕು. ದುಶ್ಚಟಗಳಿಂದ ದೂರ ಇರಬೇಕು. ಹಿರಿಯರಿಗೆ – ಶಿಕ್ಷಕರಿಗೆ ಗೌರವ ನೀಡಬೇಕು. ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗಬಾರದು. ಮಕ್ಕಳು ಇಷ್ಟ ಪಡುವ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಪಾಲಕರು ಮುಕ್ತ ಅವಕಾಶ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸ್ಥಾನಿಕ ಕಮಿಟಿಯ ಅಧ್ಯಕ್ಷರಾದ ಶರಣ ಮಾಣಿಕ್ ರಾವ್ ಹೌಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶರಣ ಬಂಡೆಪ್ಪ ಮೂಲಗೆ, ಗೌರಮ್ಮ ಪೊಲೀಸ್ ಪಾಟೀಲ್, ಪಾಂಡುರಂಗ ಹಿರೇಬೈ, ಶಿವಶರಣಪ್ಪ ಪಾಟೀಲ್ ಮುಂತಾದವರು ಹಾಜರಿದ್ದರು.
ಮುಖ್ಯ ಗುರುಗಳಾದ ರೇಖಾ ಮಂಜುನಾಥ್ ಚಾಳಕನವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಹತ್ತನೇ ತರಗತಿಯ ಮಕ್ಕಳು ಅವರ ತಂದೆ ತಾಯಿಗಳ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದರು. ತದ ನಂತರ
ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿ ನಾಗರಾಜ್ ಕಲ್ಲಪ್ಪ ದೇವಣಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಮಾಣಿಕ್ ನಿರೂಪಿಸಿದರು. ಮಹಾನಂದ ರಾಜಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಪಾಲಕರು, ಶಿಕ್ಷಕರು, ವಿಧ್ಯಾರ್ಥಿಗಳು, ಗಣ್ಯರು, ಮಾತೆಯರು, ಮಕ್ಕಳು ಉಪಸ್ಥಿತರಿದ್ದರು.
