ಬಳ್ಳಾರಿ/ ಕಂಪ್ಲಿ : ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸ್ವಾವಲಂಬಿಯಾದರೆ ಮಾತ್ರ ಲಿಂಗ ಸಮಾನತೆ ಸಾಧ್ಯ ಎಂದು ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಮುಖ್ಯ ಭಾಷಣಕಾರ ವಸಂತ ಅವರು ಹೇಳಿದರು.
ಪಟ್ಟಣದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದ ಬಳಿಯ ಎಂ.ಡಿ. ಕ್ಯಾಂಪಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕೂಡಾ ಮಹಿಳೆಯರ ಅಭಿವೃದ್ಧಿ, ಸಮಾನತೆಗೆ ಪೂರಕ ನಿಜ ಆದರೆ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತೆ ಕಾನೂನಿನಲ್ಲಿ ಮಹಿಳೆಯರಿಗಾಗಿ ಏನೇನು ಸೌಲಭ್ಯಗಳಿವೆ ಎಂಬುದು ಅರಿಯಬೇಕು, ಸಮಾಜದಲ್ಲಿ ವಿದ್ಯಾರ್ಥಿಗಳು ತಾವು ಕಾಲೇಜಿಗೆ ಹೋಗುತ್ತಿರುವ ಪ್ರಮುಖ ಉದ್ದೇಶವನ್ನು ಮರೆಯಬಾರದು ಈ ಸುವರ್ಣ ದಿನಗಳನ್ನು ಪ್ರಗತಿಗೆ ಮೆಟ್ಟಿಲು ಮಾಡಿಕೊಳ್ಳಬೇಕು ಗುರಿಯನ್ನು ತಲುಪಬೇಕು ಎಂದು ಕಿವಿಮಾತು ಹೇಳಿದರು. ತ್ಯಾಗವಿಲ್ಲದೇ ಏನನ್ನೂ ಸಾಧಿಸಲು ಸಾದ್ಯವಿಲ್ಲ. ಯಾವುದೇ ಕಾರಣ ನೀಡದೆ ಛಲದಿಂದ ಹಿಡಿದ ಯಾವುದೇ ಕೆಲಸವನ್ನು ಮುಗಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಜೆಸಿ ಬಿ.ರಸೂಲ್ ಅವರು ಮಾತನಾಡಿ ಶೈಕ್ಷಣಿಕವಾಗಿ ಬಾಲಕಿಯರು ವಿದ್ಯಾವಂತರಾದರೆ ಯು ಪಿ ಎಸ್ ಸಿ ಹಾಗೂ ಕೆ ಪಿ ಎಸ್ ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯಬಹುದು ಜೆಸಿಐ ವತಿಯಿಂದ ಮಹಿಳೆಯರ ಸಬಲೀಕರಣಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಈ ವೇಳೆ ನಿಲಯ ಪಾಲಕಿ ಕಾಳಮ್ಮ ಮಾತನಾಡಿ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆ ಕಲ್ಪಿಸುವ ಕಾರ್ಯದ ಜೊತೆಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ಜೆಸಿಐ ಸಂಸ್ಥೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸನ್ಮಾನ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ನಿಲಯ ಪಾಲಕಿ ಕಾಳಮ್ಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಿಲಯ ಪಾಲಕ ವಿರುಪಾಕ್ಷಿ, ಜೆಸಿಐ ವಲಯ ಪೂರ್ವ ಉಪಾಧ್ಯಕ್ಷ ಜೆಸಿ ಸಂತೋಷ ಕೊಟ್ರಪ್ಪ ಸೋಗಿ, ಮಹಿಳಾ ಅಧ್ಯಕ್ಷೆ ಹೀನಾ ಕೌಸರ್, ಮಹಿಳಾ ಘಟಕದ ಪೂರ್ವಾಧ್ಯಕ್ಷೆ ಅಮೃತ, ಜೆಸಿಐ ಕಂಪ್ಲಿ ಸೋನಾ ಉಪಾಧ್ಯಕ್ಷ ಜೆಸಿ ಡಿ.ಇಸ್ಮಾಯಿಲ್, ಕಾರ್ಯಕ್ರಮದ ನಿರ್ದೇಶಕ ಜೆಸಿ ವೆಂಕಟ ಸಪ್ತಗಿರಿ, ನಿರ್ದೇಶಕ ಜೆಸಿ ಮನೋಜ ಕುಮಾರ, ದಾನಪ್ಪ ಸೇರಿದಂತೆ ನಿಲಯದ ಬಾಲಕಿಯರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ