ಬಳ್ಳಾರಿ/ ಕಂಪ್ಲಿ : ಸ್ಥಳೀಯ ಕೊಟ್ಟಾಲ್ ರಸ್ತೆಯ ಕಲ್ಗುಡಿ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ಕಂಪ್ಲಿ ನೂತನ ಶಾಖೆ ಭಾನುವಾರ ಆರಂಭಿಸಲಾಯಿತು.
ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗಿರಿಯಪ್ಪ ಹೊಸ್ಕೇರಿ ಇವರು ನೂತನ ಕಂಪ್ಲಿ ಶಾಖೆ ಉದ್ಘಾಟಿಸಿ ಮಾತನಾಡಿ, ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ಮುಖ್ಯಶಾಖೆಯು ಗಂಗಾವತಿ ನಗರದಲ್ಲಿ ಕ್ರಿ.ಶ. 1996ರಲ್ಲಿ ಹುಟ್ಟಿಕೊಂಡಿದೆ. ಮೊದಲಿಗೆ ಕಾರಟಗಿ ಶಾಖೆ ಇದ್ದು, ಈಗ ಕಂಪ್ಲಿಯಲ್ಲಿ ಶಾಖೆ ಆರಂಭಿಸಲಾಯಿತು. ಬ್ಯಾಂಕ್ ಸುಮಾರು 99 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಆರ್.ಬಿ.ಐ ನಿರ್ದೇಶನದಂತೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಜನರ ಉಳಿತಾಯ ಭವಿಷ್ಯದ ಭದ್ರತೆಗೆ ಅಡಿಪಾಯವಾಗಿದೆ. ಠೇವಣಿ (ಎಫ್ಡಿ) ಯೋಜನೆಯ ಮೇಲೆ ಬಡ್ಡಿ ದರಗಳನ್ನು ನಿಗದಿಪಡಿಸಲಾಗಿದೆ. ಕಂಪ್ಲಿ ಹಾಗೂ ಗ್ರಾಮೀಣ ಭಾಗದ ಜನರು ಇಲ್ಲಿನ ಬ್ಯಾಂಕ್ನಲ್ಲಿ ವ್ಯವಹರಿಸಿ, ಸಾಲ ಸೌಲಭ್ಯಗಳನ್ನು ಪಡೆದು, ಆರ್ಥಿಕವಾಗಿ ಸಬಲರಾಗುವ ಜತೆಗೆ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಗಂಗಾವತಿ ಮಾಜಿ ಶಾಸಕ ಪರಣ್ಣ ಮುನ್ನವಳ್ಳಿ, ಮಾಜಿ ಸಂಸದ ಶಿವರಾಮೇಗೌಡ, ಶ್ರೀ ಚನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ಸದಸ್ಯರಾದ ಕೆ.ಕಾಳಪ್ಪ, ರಾಜಪ್ಪ, ಸಿಒ ನಾಗೇಶ ಗೌಳಿ, ಮ್ಯಾನೇಜರ್ ಶಾಮ್ಸುಂದರ್, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಶ್ರೀಧರ ಶ್ರೇಷ್ಠಿ, ಬಿ.ರವೀಂದ್ರ, ಪ್ರಸಾದ್ ಗಡಾದ್, ಕಲ್ಗುಡಿ ವಿಶ್ವನಾಥ ಸೇರಿದಂತೆ ಸಿಬ್ಬಂದಿ ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್