ಬಳ್ಳಾರಿ / ಕಂಪ್ಲಿ : ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ ಎಂದು ಹೆಬ್ಬಾಳ್ ಮಠದ ಶಿವಪ್ರಸಾದ ಸ್ವಾಮಿ ಹೇಳಿದರು.
ತಾಲೂಕಿನ ಸಣಾಪುರ ಗ್ರಾಮದಲ್ಲಿ ಉದ್ಭವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ಮಾತನಾಡಿ, ಪುರಾಣವೆಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದರ ಜತೆಗೆ ಆತನಲ್ಲಿಯ ದುರ್ಗುಣಗಳನ್ನು ತೊಡೆದು ಹಾಕುವುದೇ ಆಗಿದೆ. ಇಲ್ಲಿನ ಉದ್ಭವ ವೀರಭದ್ರೇಶ್ವರ ಪವಾಡದ ಶಕ್ತಿ ದೊಡ್ಡದ್ದಾಗಿದ್ದು, ಭಕ್ತರು ಆರಾಧಿಸಿದರೆ, ಇಷ್ಟಾರ್ಥ ಶತಸಿದ್ದ ಎಂದರು.
ಬುಕ್ಕಸಾಗರದ ಕರಿಸಿದ್ದೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಭಗವಂತನ, ಮಹಾತ್ಮರ, ಶರಣರ ತತ್ವಾದರ್ಶಗಳನ್ನು ಆಲಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಬೇಡುವ ಕೈಗಿಂತ ನೀಡುವ ಕೈ ಶ್ರೇಷ್ಠ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ದಾನ, ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಆರೋಗ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ನಂತರ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರುವುದರಿಂದ ಸಾಮರಸ್ಯದ ಬದುಕು ಕಾಣಲು ಸಾಧ್ಯ. ಜತೆಗೆ ಮನೆ, ಮನದಲ್ಲಿ ಶಾಂತಿ ನೆಮ್ಮದಿ ಲಭಿಸುತ್ತದೆ. ಈ ನಿಟ್ಟಿನಲ್ಲಿ ಭಕ್ತರು ವತ್ತಿ ಕಾಯಕದಲ್ಲಿ ಶ್ರದ್ಧೆ ಕಾಯ್ದುಕೊಂಡು ಸನಾತನ ಸಂಸ್ಕೃತಿ, ಧರ್ಮಾಚರಣೆ ಸಂರಕ್ಷಣೆಗೆ ಶ್ರಮಿಸಬೇಕು ಎಂದರು. ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜಾ ಪುರಸ್ಕಾರಗಳು ಜರುಗಿದವು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಈಶಪ್ಪ, ಎಂ.ಚನ್ನಪ್ಪ, ಕೆ.ರೇಣುಕಾಗೌಡ, ಕೆ.ಮರಿಶಾಂತ, ಟಿ.ಶರಣಪ್ಪ, ಜಿ.ಕುಮಾರಸ್ವಾಮಿ, ದೊಡ್ಡಬಸಪ್ಪ, ಯು.ಮಲ್ಲಯ್ಯ, ಕೆ.ಬಸವರಾಜ, ಶ್ರೀನಿವಾಸರಾವ್, ವೆಂಕಟರಾಮರಾಜು, ಶಾಂತಿಲಾಲ್, ವಿದ್ಯಾಧರ, ವಾಲಿ ಕೊಟ್ರಪ್ಪ, ಶರಣಪ್ಪ, ಮೆಟ್ರಿ ಗಂಗಾಧರ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್