ವಿಜಯನಗರ/ ಹಂಪಿ : ಹೋಳಿ ಹಬ್ಬ ಬಂತಂದರೆ ಹಂಪಿ, ಆನೆಗುಂದಿ, ಮತ್ತು ಸಣಾಪುರ ಸುತ್ತಮುತ್ತಲಿನ ಹೋಂಸ್ಟೇಗಳು ತುಂಬಿ ತುಳುಕುತ್ತಿದ್ದವು. ಏಕೆಂದರೆ ವಿದೇಶಿಯರಿಗೆ ಹೋಳಿ ಎಂದರೆ ಅಚ್ಚುಮೆಚ್ಚಾಗಿತ್ತು. ಆದರೆ ಕೊಪ್ಪಳ ಜಿಲ್ಲೆಯ ಸಣಾಪುರ ಗ್ರಾಮದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣದ ನಂತರ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯ ಕಡಿಮೆಯಾಗಿದೆ.
ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಏಕೆಂದರೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಒಬ್ಬರು ಇಸ್ರೇಲ್ನಿಂದ ಬಂದಿದ್ದರು, ಹಲವಾರು ರಾಯಭಾರ ಕಚೇರಿಗಳು ತಮ್ಮ ದೇಶಗಳ ಪ್ರವಾಸಿಗರ ಸ್ಥಿತಿಯನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿ ಕಚೇರಿ ಮತ್ತು ಕೊಪ್ಪಳ ಆಡಳಿತದೊಂದಿಗೆ ಸಂಪರ್ಕದಲ್ಲಿವೆ.
ಕಳೆದ ಎರಡು ದಿನಗಳಲ್ಲಿ ಹಂಪಿ ಮತ್ತು ಅದರ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಹೋಂಸ್ಟೇಗಳಲ್ಲಿ ಬುಕಿಂಗ್ ಕ್ಯಾನ್ಸಲ್ ಮಾಡಲಾಗಿರುವುದು ತಿಳಿದು ಬಂದಿದೆ. ಕೊಪ್ಪಳ ಘಟನೆಯು ಹಂಪಿ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಘಟನೆ ವರದಿಯಾದ ನಂತರ, ಹೋಂಸ್ಟೇಗಳಲ್ಲಿ ಬುಕಿಂಗ್ನಲ್ಲಿ ಕುಸಿತ ಕಂಡುಬಂದಿರುವುದನ್ನು ಅವರು ದೃಢಪಡಿಸಿದ್ದಾರೆ.
ಹಂಪಿಗೆ ಬರಲು ಇತರ ರಾಜ್ಯಗಳ ಪ್ರವಾಸಿಗರಿಂದಲೂ ಹಿಂದೇಟು ವಿದೇಶಗಳ ಪ್ರಯಾಣಿಕರು ಮಾತ್ರವಲ್ಲ, ಇತರ ರಾಜ್ಯಗಳ ಪ್ರವಾಸಿಗರು ಕೂಡಾ ಹಂಪಿಗೆ ನಿಗದಿಪಡಿಸಿದ್ದ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ ಅಥವಾ ಮುಂದೂಡುತ್ತಿದ್ದಾರೆ. ಇಡೀ ರಾಷ್ಟ್ರವು ಸಣಾಪುರ ಅತ್ಯಾಚಾರ ಘಟನೆಯನ್ನು ಖಂಡಿಸಿದೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ವಿರೂಪಾಕ್ಷಿ ಹೇಳಿದ್ದಾರೆ. ಏತನ್ಮಧ್ಯೆ, ವಿಜಯನಗರ ಪೊಲೀಸರು ಹಂಪಿ ಮತ್ತು ಸುತ್ತಮುತ್ತಲಿನ ಎಲ್ಲಾ ಹೋಂಸ್ಟೇಗಳ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ.
ಕೊಪ್ಪಳ ಘಟನೆಯು ಎಲ್ಲಾ ಹೋಂಸ್ಟೇ ಮಾಲೀಕರಿಗೆ ಮತ್ತು ಪೊಲೀಸ್ ಇಲಾಖೆಗೆ ಒಂದು ಎಚ್ಚರಿಕೆಯಾಗಿದೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್ ಹೇಳಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ್.