ಬಳ್ಳಾರಿ/ ಕಂಪ್ಲಿ : ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಇವರು ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.
ಇಲ್ಲಿನ ಕಡತಗಳನ್ನು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಔಷಧ ಸೇರಿದಂತೆ ಆಸ್ಪತ್ರೆಯ ಹೆರಿಗೆ ಹಾಗೂ ಬಾಣಂತಿಯರ ಕೊಠಡಿ ಹಾಗೂ ಎಲ್ಲಾ ಕೊಠಡಿಗಳಿಗೆ ತೆರಳಿ, ಪರಿಶೀಲನೆ ನಡೆಸಿದರು.
ನಂತರ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ ಪರಿವೀಕ್ಷಣೆ ಮಾಡಿದಾಗ, ಚೆಕ್ ಲೀಸ್ಟ್ ಪ್ರಕಾರ ಪರಿಶೀಲನೆ ನಡೆಸಲಾಗಿದೆ. ಇಲ್ಲಿನ ಆಸ್ಪತ್ರೆ ಬಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಆದರೆ, ನೀರು ಇಲ್ಲದ ಪರಿಣಾಮ ಸ್ಥಗಿತವಾಗಿದ್ದು, ಕೂಡಲೇ ಘಟಕ ಆರಂಭಿಸಿ, ನೀರು ಕಲ್ಪಿಸುವಂತೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆ ತಾಪಂ, ಪುರಸಭೆ ಅಧಿಕಾರಿಗೆ ಜಂಟಿಯಾಗಿ ಕ್ರಮವಹಿಸಿ, ಏ.15 ಒಳಗೆ ಪುರಸಭೆಗೆ ಹಸ್ತಾಂತರಿಸಿ, ಆರ್ಒ ಪ್ಲಾಂಟ್ ಆರಂಭಿಸುವಂತೆ ಸೂಚಿಸಲಾಗಿದೆ. ರಾತ್ರಿ ವೇಳೆ ವೈದ್ಯರು ಇರುವುದಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಒಂದು ವಾರ ಬಿಟ್ಟು, ತಹಶೀಲ್ದಾರ್ ರಾತ್ರಿ ಸಮಯದಲ್ಲಿ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸುವಂತೆ ತಿಳಿಸಲಾಗಿದೆ. ಮತ್ತು ಹೊರಗಡೆ ಔಷಧ ಬರೆಯುವುದನ್ನು ತಡೆಗಟ್ಟಲು ಸೂಕ್ತ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ, ಆರ್ಐ ಜಗದೀಶ, ತಾಪಂ ಇಒ ಆರ್.ಕೆ.ಶ್ರೀಕುಮಾರ, ವೈದ್ಯಾಧಿಕಾರಿಗಳಾದ ಡಾ.ಅರುಣ್ಕುಮಾರ, ಡಾ.ರವೀಂದ್ರ ಕನಿಕೇರಿ, ಡಾ.ಮಲ್ಲೇಶಪ್ಪ, ಡಾ.ಶ್ರೀನಿವಾಸ, ಡಾ.ಪ್ರಕಾಶಗೌಡ ಸೇರಿದಂತೆ ಸಿಬ್ಬಂದಿ ಇದ್ದರು.
ನಂತರ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು.
ಸಭೆ : ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಇವರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಮಾಕ್ಷಮದಲ್ಲಿ ಸಭೆ ನಡೆಸಲಾಯಿತು.
ಇಲಾಖೆವಾರು ದಾಖಲೆ ಜತೆಗೆ ಅಂಕಿ ಅಂಶಗಳನ್ನು ತರದೇ ಇರುವುದರಿಂದ ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ತರಬೇಕೆಂದು ಇಲಾಖೆ ಅಧಿಕಾರಿಗಳಿಗೆ ತಾಲೂಕು ಉಸ್ತುವಾರಿ ಅಧಿಕಾರಿ ಕೆ.ವಿ.ಕಾವ್ಯರಾಣಿ ಖಡಕ್ ಆಗಿ ಸೂಚಿಸಿದರು.
ಈ ಸಭೆಯಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
