
ಬಳ್ಳಾರಿ / ಕಂಪ್ಲಿ : ಪಟ್ಟಣದ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ 176ನೇ ಮಹಾಮನೆ ಕಾರ್ಯಕ್ರಮ ನಡೆಯಿತು.
ಎಮ್ಮಿಗನೂರಿನ ಗ್ರಾ. ಪಂ. ಸದಸ್ಯ ಜೀರು ಲೋಕೇಶ್ ‘ಶರಣ ಚಿಂತನೆ’ ಕುರಿತು ಉಪನ್ಯಾಸ ನೀಡಿ, ಪೋಷಕರು ಮಕ್ಕಳಿಗೆ ವಚನಗಳನ್ನು ಕಲಿಸಿದರೆ ಬಸವಣ್ಣನವರಿಗೆ ಗೌರವ ಸಲ್ಲಿಸಿದಂತೆ ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಕೊಂಡೊಯ್ಯಲು ಮಕ್ಕಳಿಗೆ ಬಾಲ್ಯದಲ್ಲಿಯೇ ವಚನಗಳನ್ನು ಪರಿಚಯಿಸಬೇಕಿದೆ.
ಶರಣರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರಸ್ತುತ ದಿನಮಾನಗಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ವಿಷಾಧನೀಯ. 12ನೇ ಶತಮಾನದಲ್ಲಿಯೇ ಸಮಾಜದ ಎಲ್ಲರಿಗೂ ನ್ಯಾಯ, ಸಮಾನ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿದ ಹಾಗೂ ಕಾಯಕದ ಮಹತ್ವ ಸಾರಿದ ಬಸವಣ್ಣನವರ ಒಂದೊಂದು ವಚನಗಳೂ ಬದುಕಿನ ಪಾಠ ಹೇಳುತ್ತವೆ. ಹಾಗಾಗಿ ಇವುಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ ಸದ್ಗುಣಗಳು ಮೈಗೂಡುತ್ತವೆ,” ಎಂದು ತಿಳಿಸಿದರು. ಶಿಕ್ಷಣವಂತರಿಂದಲೇ ಮೌಲ್ಯಗಳು ನಾಶವಾಗುತ್ತಿವೆ. ಶರಣರ ವಿಚಾರಗಳು ಕೇಳಲು ಸರಳವೆನಿಸಿದರೂ ಪಾಲನೆಗೆ ಕಡುಕಷ್ಟವಾಗಿವೆ ಎಂದರು.
ಗುತ್ತಿಗೆನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಟರಾಜ ಸಾಮಂತ್ರಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿ ಮಕ್ಕಳು ಸಹ ವಚನ ಸಾಹಿತ್ಯ ಓದಿ ಅದರಲ್ಲಿರುವ ಮಾನವೀಯ ಮೌಲ್ಯಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿದ ಪ್ರತಿಭೆ ಗುರುತಿಸಿ ಅವರಲ್ಲಿ ಸೃಜನಶೀಲತೆಯನ್ನು ಬೆಳಸಿ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿ ವ್ಯಕ್ತಿತ್ವ ನಿರ್ಮಾಣ ಮಾಡಬೇಕೆಂದು ಇಂದಿನ ಯುವಜನತೆ ತಂದೆ ತಾಯಿ, ಶಿಕ್ಷಕರ ಮಾತು ಕೇಳದಷ್ಟು ಅಹಂಭಾವಿಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಯುವಜನತೆಯ ಮನಸ್ಸನ್ನು ಮಾಗಿಸಿ ಸರಿದಾರಿಗೆ ತರುವಲ್ಲಿ ಶರಣ ಸಾಹಿತ್ಯ ವರದಾನವಾಗಿದೆ ಎಂದರು. ಸುದೀಕ್ಷಾ ಕಾಲಭೈರವ ಅಷ್ಟಕ ಮಂಡಿಸಿದರು.
ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ನಿವೃತ್ತ ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್, ಪ್ರಮುಖರಾದ ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಎಂ.ಪಿ. ಬಾಲಾಜಿ, ಅಂಬಿಗರ ಮಂಜುನಾಥ, ಬಿ.ಎಂ.ರುದ್ರಯ್ಯ, ಪಾಮಯ್ಯ ಶರಣರು, ಚಂದ್ರಯ್ಯ ಸೊಪ್ಪಿಮಠ, ಸಂತೋಷ್ ಸೋಗಿ, ಎಸ್.ರಾಮಪ್ಪ, ಆದೇಶ ಜವಳಿ, ಅಶೋಕ ಕುಕನೂರು, ಬಂಗಿ ಸರೋಜಾ, ಯು.ಎಂ.ವಿದ್ಯಾಶಂಕರ, ಕೆ.ಯಂಕಾರೆಡ್ಡಿ, ಮುದಕಪ್ಪ ನೆಲಜೇರಿ, ಶಂಕ್ರಪ್ಪ ಸೇರಿ ಇತರರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
