ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದರಿಂದ ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ.
ಧ್ವಜವು ಯಾವುದರ ಪ್ರತೀಕವಾಗಿದೆ!
ಧ್ವಜವು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ನಿಲ್ಲಿಸುತ್ತಾರೆ. ವಿಜಯದ ಪ್ರತೀಕವು ಎತ್ತರವಾಗಿರುತ್ತದೆ; ಆದುದರಿಂದ ಬ್ರಹ್ಮಧ್ವಜವನ್ನು ಎತ್ತರವಾಗಿ ನಿಲ್ಲಿಸುತ್ತಾರೆ.
ಪದ್ಧತಿ:
ಸೂರ್ಯೋದಯದ ನಂತರ ಬ್ರಹ್ಮಧ್ವಜವನ್ನು ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ.ತಿಥೀಕ್ಷಯ) ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು.
ಎತ್ತರವಾಗಿರುವ ಬಿದಿರಿನ ತುದಿಗೆ ಹಳದಿ ಬಣ್ಣದ ಜರತಾರಿಯ ಬಟ್ಟೆಯನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಟೊಂಗೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಧ್ವಜವನ್ನು ಮುಖ್ಯದ್ವಾರದ ಎದುರಿಗೆ, ಹೊಸ್ತಿಲಿನ ಹತ್ತಿರ, ಬಲಭಾಗದಲ್ಲಿ (ಮನೆಯ ಒಳಗಿನಿಂದ ನೋಡುವಾಗ) ಭೂಮಿಯ ಮೇಲೆ ನಿಲ್ಲಿಸಬೇಕು. ಧ್ವಜವನ್ನು ಅತೀ ನೇರವಾಗಿ ನಿಲ್ಲಿಸದೇ ಮುಂದಿನ ಬದಿಗೆ ಸ್ವಲ್ಪ ಬಾಗಿದ ಸ್ಥಿತಿಯಲ್ಲಿ ನಿಲ್ಲಿಸಬೇಕು. ಅದರ ಮುಂದೆ ಸುಂದರವಾದ ರಂಗೋಲಿಯನ್ನು ಬಿಡಿಸಬೇಕು.
ಧ್ವಜಕ್ಕೆ ‘ಬ್ರಹ್ಮಧ್ವಜಾಯ ನಮಃ|’ ಎಂದು ಹೇಳಿ ಸಂಕಲ್ಪಪೂರ್ವಕ ಪೂಜೆಯನ್ನು ಮಾಡಬೇಕು. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸಬೇಕು.
ಯುಗಾದಿಯ ದಿನ ಬ್ರಹ್ಮಾಂಡದಲ್ಲಿನ ಪ್ರಜಾಪತಿ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಬ್ರಹ್ಮಧ್ವಜದಿಂದಾಗಿ ವಾತಾವರಣದಲ್ಲಿನ ಪ್ರಜಾಪತಿ-ಲಹರಿಗಳು ಕಲಶದ ಸಹಾಯದಿಂದ ಮನೆಯೊಳಗೆ ಪ್ರವೇಶಿಸುತ್ತವೆ. (ಇದು ದೂರದರ್ಶನದ ಆಂಟೆನಾದಂತೆ ಕಾರ್ಯವನ್ನು ಮಾಡುತ್ತದೆ.) ಮರುದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು; ಪ್ರಜಾಪತಿ-ಲಹರಿಗಳ ಸಂಸ್ಕಾರವಾಗಿರುವ ಕಲಶವು ಅದೇ ರೀತಿಯ ಸಂಸ್ಕಾರಗಳನ್ನು ಕುಡಿಯುವ ನೀರಿನ ಮೇಲೆ ಮಾಡುತ್ತದೆ, ಇದರಿಂದ ನಮಗೆ ವರ್ಷವಿಡೀ ಪ್ರಜಾಪತಿ-ಲಹರಿಗಳು ಪ್ರಾಪ್ತವಾಗುತ್ತವೆ.
ಧ್ವಜದ ಪೂಜೆಯನ್ನು ಮಾಡುತ್ತಿರುವಾಗ ಮಾಡಬೇಕಾದ ಪ್ರಾರ್ಥನೆ:
‘ಹೇ ಬ್ರಹ್ಮದೇವ, ಹೇ ವಿಷ್ಣು, ಈ ಧ್ವಜದ ಮಾಧ್ಯಮದಿಂದ ವಾತಾವರಣದಲ್ಲಿ ವಿದ್ಯಮಾನವಾಗಿರುವ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸುವಂತಾಗಲಿ. ಅದರಲ್ಲಿ ಸಿಗುವ ಶಕ್ತಿಯ ಚೈತನ್ಯವು ಸತತವಾಗಿರಲಿ. ನನಗೆ ಪ್ರಾಪ್ತವಾದ ಶಕ್ತಿಯು ಸಾಧನೆಗಾಗಿ ಉಪಯೋಗಿಸಲ್ಪಡಲಿ’ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.
ಧ್ವಜವನ್ನು ಕೆಳಗೆ ಇಳಿಸುವಾಗ ಮಾಡಬೇಕಾದ ಪ್ರಾರ್ಥನೆ:
‘ಹೇ ಬ್ರಹ್ಮದೇವ, ಹೇ ವಿಷ್ಣು, ಇಂದು ದಿನವಿಡೀ ಈ ಧ್ವಜದಲ್ಲಿ ಸಂಗ್ರಹವಾದ ಶಕ್ತಿಯು ನನಗೆ ಸಿಗಲಿ. ಆ ಶಕ್ತಿಯು ರಾಷ್ಟ್ರ ಮತ್ತು ಧರ್ಮಕಾರ್ಯಕ್ಕೆ ಉಪಯೋಗವಾಗಲಿ’ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.
ಆಧಾರ : ಸನಾತನ ಸಂಸ್ಥೆಯ ಗ್ರಂಥ, ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ.
ಸಂಗ್ರಹ: ಶ್ರೀ ವಿನೋದ ಕಾಮತ್, ರಾಜ್ಯ ವಕ್ತಾರರು ಸನಾತನ ಸಂಸ್ಥೆ.
ಸಂಪರ್ಕ: 9342599299
