
ಬೆಂಗಳೂರು: ಶೋಷಿತ, ದಮನಿತ ಸಮುದಾಯಗಳು ಹಿಂದಿಗಿಂತಲೂ ಇಂದು ಹೆಚ್ಚು ಸಂಘಟಿತರಾಗುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕರಾದ ಎಸ್. ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಸಂಸ ಬಯಲು ರಂಗಮಂದಿರದಲ್ಲಿ ಅಂಕ ಸಂಸ್ಥೆ ಮತ್ತು ಚಿರಂತ ಟ್ರಸ್ಟ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಬುದ್ಧ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಾತಿ ಗಣತಿ ಕುರಿತು ಸಮಾಜದಲ್ಲಿ ಬೊಬ್ಬೆ ಎದ್ದಿರುವ ಈ ದಿನಗಳಲ್ಲಿ ಕೆಳ ಸಮುದಾಯದ ಜನರು ಹೆಚ್ಚು ಸಂಘಟಿತರಾಗುವ ಅಗತ್ಯ ಇದ್ದು ಎಲ್ಲರೂ ಒಂದುಗೂಡಲು ಸಕಾಲ ಎಂದರು.
ಜಾತಿ ಗಣತಿ ಬಗ್ಗೆ ಮೇಲ್ಜಾತಿ ಅವರ ನಡವಳಿಕೆ ಜಾತಿಯ ಅಹಂಕಾರದ ಪ್ರತೀಕವಾಗಿದೆ.
ಇದನ್ನು ತಳ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರ ತತ್ವಗಳು ಬಹುತ್ವ ಭಾರತದ ಪ್ರತೀಕ. ಇಂದು ಆ ಬಹುತ್ವವನ್ನು ಉಳಿಸಿಕೊಳ್ಳುವ ಮೂಲಕ ಬಹು ಸಂಸ್ಕೃತಿ, ಬಹು ಧರ್ಮದ ಭಾರತವನ್ನು ಗೌರವಿಸಬೇಕಿದೆ ಎಂದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎಂ. ಎಸ್. ಮೂರ್ತಿ ಅವರು ದಲಿತರ ಏಳ್ಗೆಯಲ್ಲಿ ದಲಿತೇತರ ಪಾತ್ರ ಕುರಿತು ಉಪನ್ಯಾಸ ನೀಡಿ, ಜನಪದ ಸಂಸ್ಕೃತಿ ಈಗಿನ ಅಕ್ಷರ ಸಂಸ್ಕೃತಿಗಿಂತ ಮುಗಿಲು. ಅಕ್ಷರ ಸಂಸ್ಕೃತಿ ಸಮಾಜವನ್ನು ಸಂಕುಚಿತ ಭಾವವನ್ನು ಹೆಚ್ಚಿಸುತ್ತಿದೆ. ಜನಪದ ಸಂಸ್ಕೃತಿ ಎಲ್ಲರನ್ನೂ ಒಳಗೊಳ್ಳುತಿತ್ತು ನಾವಿಂದು ಆ ಸಂಸ್ಕೃತಿಯತ್ತ ಮರಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಮಾತನಾಡಿ, ಜಾತಿ ಅನ್ನೋದು ಶುದ್ಧ ಸುಳ್ಳು. ಜಾತಿ ಪರಂಪರೆಯಿಂದ ಬಂದಿದ್ದಲ್ಲ ನಾವೇ ಸೃಷ್ಟಿಸಿಕೊಂಡಿದ್ದು.
ಅದನ್ನು ತಿರಸ್ಕರಿಸಿ ನಾವು ಮನುಷ್ಯರಾಗಬೇಕು ಎಂದರಲ್ಲದೆ, ಸಮಾಜವನ್ನು ಒಡೆಯುವವರ ನಡುವೆ ನಾವು ಪದ, ಹಾಡು, ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವತ್ತ ಆದ್ಯ ಗಮನ ನೀಡಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ರಾಜು ಮಳವಳ್ಳಿ, ಸಿ.ಕೆ.ಗುಂಡಣ್ಣ, ಕೆಂಪಮ್ಮ ಕಾರ್ಕಹಳ್ಳಿ, ಬಂಡ್ಲಳ್ಳಿ ವಿಜಯಕುಮಾರ್, ಎನ್.ಮುನಿಸ್ವಾಮಿ, ಹುಲಿಕುಂಟೆ ಮೂರ್ತಿ, ಟಿ.ಲಕ್ಷ್ಮೀನಾರಾಯಣ, ನರೇಂದ್ರಬಾಬು, ಮಾಲೂರು ಆನಂದ್, ನಾಗರಾಜು ಪಾವಗಡ ಮತ್ತಿತರರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಗುಂಡಣ್ಣ ಮತ್ತು ಹುಲಿಕುಂಟೆ ಮೂರ್ತಿ ಮಾತನಾಡಿದರು.
ಅಂಕ ಸಂಸ್ಥೆ ಅಧ್ಯಕ್ಷ ಸಬ್ಬನಹಳ್ಳಿ ರಾಜು ಕಾರ್ಯಕ್ರಮ ನಿರೂಪಿಸಿದರು.ಚಿರಂತನ ಟ್ರಸ್ಟ್ ಅಧ್ಯಕ್ಷ ಭಾರತೀಪುರ ಶಂಕರ್ ವಂದಿಸಿದರು.ಮಳೆಯ ನಡುವೆ ಹೋರಾಟದ ಹಾಡುಗಳು ಕೇಳುಗರ ಮನ ರಂಜಿಸಿತು.
ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದನ ಸಹಾಯ ನಿಲ್ಲಿಸಿದ್ದು ಖಂಡನೀಯ.
ಕಳೆದ 26 ವರ್ಷಗಳಿಂದ ನಿರಂತರವಾಗಿ ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡುತ್ತಾ ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವರ್ಷ ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಸೇವಾ ಸಿಂಧುವಿನಲ್ಲಿ ಧನ ಸಹಾಯಕ್ಕಾಗಿ ಅರ್ಜಿ ಕರೆಯದೆ ಶಿಫಾರಸ್ಸು ತಂದ ಪ್ರಭಾವಿತರಿಗೆ ಮಾತ್ರ ಸುಮಾರು 70 ಸಂಸ್ಥೆಗಳಿಗೆ ಧನಸಹಾಯ ನೀಡಿ ಆದೇಶ ಹೊರಡಿಸಿದ್ದಾರೆ.
ಇದು ಮಾರ್ಗಸೂಚಿಯ ಉಲ್ಲಂಘನೆ, ಬಹುದಿನಗಳಿಂದ ಇಲ್ಲಿಯೇ ಬಿಡಾರಹೂಡಿರುವ ಜಂಟಿ ನಿರ್ದೇಶಕರ ಎತ್ತಂಗಡಿ ಆಗಬೇಕಿದೆ
ಪ್ರಸ್ತುತ ನಿರ್ದೇಶಕರಾಗಿರುವ ಶ್ರೀಮತಿ ಕೆ ಎಮ್ ಗಾಯತ್ರಿ ಅವರು ಗಮನಹರಿಸಿ ಸರಿಪಡಿಸಬೇಕಿದೆ ಗ್ರಾಮೀಣ ಭಾಗದ ಅನೇಕ ಬಡ ಸಂಘ ಸಂಸ್ಥೆಗಳು ಈ ಧನಸಹಾಯದ ಮೇಲೆ ನಿರಂತರವಾಗಿ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದ್ದಾರೆ
ಕೂಡಲೇ ಇಲಾಖೆ ತಪ್ಪನ್ನು ಸರಿಪಡಿಸಿಕೊಂಡು ಈ ಬಾರಿ ಹೆಚ್ಚಿನ ಅನುದಾನವನ್ನು ಸಂಘ ಸಂಸ್ಥೆಗಳಿಗೆ ನೀಡಬೇಕಿದೆ ಎಂದು ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ಅಂಕ ಸಂಸ್ಥೆಯ ಅಧ್ಯಕ್ಷ ಸಬ್ಬನಹಳ್ಳಿ ರಾಜು ಹೇಳಿದರು.
- ಕರುನಾಡ ಕಂದ
